
ಕಾರವಾರ : ಹಸಿರು ಪರ್ವತಗಳ ಸಾಲುಗಳ ನಡುವೆ ಸ್ವಚ್ಛ ನೀರು, ಸುಂದರ ಉದ್ಯಾನದಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ತಾಲ್ಲೂಕಿನ ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಟೆಗಾಳಿಯ ಭೀಮಕೋಲ ಡ್ಯಾಮ್’ನ ಹಿನ್ನೀರಿನಲ್ಲಿ ಜಲಸಾಹಸ ಚಟುವಟಿಕೆ ಶೀಘ್ರವೇ ಆರಂಭಗೊಳ್ಳಲಿದೆ. ಗೋವಾದ ರಾಷ್ಟ್ರೀಯ ಜಲಸಾಹಸ ಕ್ರೀಡಾ ಸಂಸ್ಥೆಯ ತಜ್ಞರ ತಂಡವು ಈಚೆಗೆ ಸ್ಥಳಕ್ಕೆ ಭೇಟಿ ನೀಡಿ ಪೆಡಲ್ ಬೋಟಿಂಗ್ ಮತ್ತು ಕಯಾಕಿಂಗ್ ಚಟುವಟಿಕೆ ನಡೆಸಲು ಈ ತಾಣ ಸೂಕ್ತ ಎಂಬ ವರದಿ ಸಲ್ಲಿಸಿದೆ. ಅದರ ಆಧಾರದಲ್ಲಿ ಜಲಸಾಹಸ ಚಟುವಟಿಕೆ ಶೀಘ್ರವೇ ಆರಂಭಿಸಲು ತಯಾರಿ ನಡೆದಿದೆ ಎಂಬುದಾಗಿ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಹೋಟೆಗಾಳಿ, ಹಣಕೋಣ ಗ್ರಾಮಗಳ ಕೃಷಿ ಜಮೀನುಗಳಿಗೆ ನೀರಾವರಿ ಯೋಜನೆ ಉದ್ದೇಶಕ್ಕೆ ಭೀಮಕೋಲ ಕೆರೆಗೆ ನಿರ್ಮಿಸಿದ ಡ್ಯಾಮ್ ನಿರ್ವಹಣೆಯ ಕೊರತೆಯಿಂದ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿತ್ತು. ಅಮೃತ ಸರೋವರ ಯೋಜನೆಯಡಿ ಜಿಲ್ಲಾ ಪಂಚಾಯಿತಿಯಿಂದ ಕೆರೆ ಅಭಿವೃದ್ಧಿಪಡಿಸಿ, ಬಳಿಕ ಕೆರೆಯ ದಂಡೆಯಲ್ಲಿ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದಿಂದ ‘ಪಂಚವಟಿ’ ಉದ್ಯಾನ ರೂಪಿಸಲಾಗಿತ್ತು.

j3tvkannada
ಭೀಮಕೋಲ ಡ್ಯಾಮ್ ಅಭಿವೃದ್ಧಿಪಡಿಸಿ, ಉದ್ಯಾನ ನಿರ್ಮಿಸಿದ ನಂತರ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವೃದ್ಧಿಯಾಗಿದೆ. 40 ಎಕರೆಗೂ ವಿಸ್ತಾರವಾದ ಕೆರೆಯಲ್ಲಿ ಪ್ರವಾಸಿಗರ ಆಕರ್ಷಣೆಗೆ ಜಲಸಾಹಸ ಚಟುವಟಿಕೆ ಆರಂಭಿಸಲು ಜಿಲ್ಲಾ ಪಂಚಾಯಿತಿಯಿಂದ ಈ ಹಿಂದಿನಿಂದಲೂ ಪ್ರಸ್ತಾವ ಇತ್ತು. ಈಚೆಗೆ ಕೆರೆಯಲ್ಲಿ ಜಲಸಾಹಸ ಚಟುವಟಿಕೆ ಆರಂಭಿಸುವ ಸಾಧ್ಯತೆಯ ಕುರಿತು ಪರಿಶೀಲಿಸಿದ್ದ ಎನ್ಐಡಬ್ಲ್ಯೂಎಸ್ ತಜ್ಞರು ಚಟುವಟಿಕೆ ನಡೆಸಲು ಕಾರ್ಯಸಾಧ್ಯತಾ ವರದಿ ಸಲ್ಲಿಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಂಜುನಾಥ ನಾವಿ ತಿಳಿಸಿದರು. ತಜ್ಞರ ವರದಿ ಆಧರಿಸಿ ಭೀಮಕೋಲ ಹಿನ್ನೀರಿನಲ್ಲಿ ಪೆಡಲ್ ಬೋಟಿಂಗ್, ಕಯಾಕಿಂಗ್ ಚಟುವಟಿಕೆ ಆರಂಭಿಸಲು ಸದ್ಯದಲ್ಲಿಯೇ ಅಲ್ಪಾವಧಿ ಟೆಂಡರ್ ಕರೆಯಲಾಗುವುದು. ಮೇ ಮಧ್ಯಂತರದ ಒಳಗೆ ಜಲಸಾಹಸ ಚಟುವಟಿಕೆ ಆರಂಭವಾಗಲಿದೆ. ಮಳೆಗಾಲದಲ್ಲಿ ಕೆರೆಯಲ್ಲಿ ಭರ್ತಿ ನೀರಿದ್ದಾಗ ತಜ್ಞರ ಸಮಿತಿಯು ಪುನಃ ಸಮೀಕ್ಷೆ ನಡೆಸಲಿದೆ. ಆಗ ನೀರಿನ ಸಂಗ್ರಹದ ಪ್ರಮಾಣ ಆಧರಿಸಿ ಇನ್ನಷ್ಟು ಹೆಚ್ಚು ಜಲಸಾಹಸ ಚಟುವಟಿಕೆ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಿದೆ ಎಂದು ವಿವರಿಸಿದರು.