
ಬಾಗಲಕೋಟೆ: ಆಟಿಸಮ್ ಎಂಬುದು ಗುಣಪಡಿಸಲಾಗದ ಕಾಯಿಲೆ ಎಂದು ಜನರು ತಿಳಿದುಕೊಂಡಿದ್ದಾರೆ. ಆಟಿಸಮ್ ಆರಂಭಿಕದಲ್ಲಿಯೇ ಪತ್ತೆ ಮಾಡಿದರೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು ಎಂದು ಹೈದರಾಬಾದಿನ ಆಟಿಸಮ್ ತಜ್ಞೆ ಡಾ.ಆರ್.ಟಿ.ರಾಜೇಶ್ವರಿ ಅವರು ಹೇಳಿದರು.

ಬಿ.ವಿ.ವಿ. ಸಂಘದ ಹೋಮಿಯೋಪಥಿಕ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ವಿಶ್ವ ಆಟಿಸಮ್ ದಿನ ಅಂಗವಾಗಿ ಆಯೋಜಿಸಿದ್ದ ‘ಆರೋಗ್ಯ-ಅರಿವು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರೋಗ ಲಕ್ಷಣದಲ್ಲಿ ಒಬ್ಬ ವ್ಯಕ್ತಿ ಹೇಗೆ ವರ್ತಿಸುತ್ತಾನೆ. ಇತರರೊಂದಿಗೆ ಹೇಗೆ ಸಂವಹನ ನಡೆಸುತ್ತಾನೆ ಎಂಬುದು ಗೊತ್ತಿರಬೇಕು ಎಂದರು.
ಮಕ್ಕಳ ತಜ್ಞ ಡಾ.ವಿ.ಎಸ್. ಸೋಬಾನಿ ಮಾತನಾಡಿ, ತಜ್ಞ ವೈದ್ಯರು ರೋಗ ನಿರ್ಣಯ ಮಾಡಿದಾಗ ಪಾಲಕರು ಸಕಾರಾತ್ಮಕವಾಗಿ ಸ್ಪಂದಿಸದೆ ಚಿಕಿತ್ಸೆ ಕೊಡಿಸಲು ಹಿಂದೇಟು ಹಾಕುತ್ತಾರೆ, ಮಗುವಿಗೆ ಇರುವ ತೊಂದರೆ ಒಪ್ಪಿಕೊಂಡು ಚಿಕಿತ್ಸೆಗಾಗಿ ಮುಂದೆ ಬಂದಾಗ ರೋಗವನ್ನು ಬೇಗ ಹತೋಟಿಗೆ ತರಬಹುದು ಎಂದರು.
ಪ್ರಾಚಾರ್ಯ ಡಾ.ಅರುಣ ಹೂಲಿ ಮಾತನಾಡಿ, ವೈದ್ಯಕೀಯ ರಂಗಕ್ಕೆ ಸವಾಲಾದ ಹಲವಾರು ರೋಗಗಳಿಗೆ ಗುಣಮಟ್ಟದ ಹೋಮಿಯೋಪಥಿ ಚಿಕಿತ್ಸಾ ಸೌಲಭ್ಯಗಳಿವೆ ಎಂದು ಹೇಳಿದರು.
ಪ್ರಾಧ್ಯಾಪಕರಾದ ಡಾ.ರವಿ.ಕೋಟೆಣ್ಣವರ, ಡಾ.ಅಮರೇಶ ಬಳಗಾನೂರ, ಡಾ.ಸುಧೀರ ಬೆಟಗೇರಿ, ಡಾ.ರುದ್ರೇಶ ಕೊಪ್ಪಳ, ಡಾ.ವಿಜಯಲಕ್ಷ್ಮಿ, ಡಾ.ಪವನ ಟಾವನಿ. ಡಾ.ಸುನೀಲ ಭೋಸಲೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.