
ಸಿನಿಮಾ: 2022ರಲ್ಲಿ ತೆರೆಕಂಡ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಹಲವರ ಅದೃಷ್ಟವನ್ನೇ ಬದಲಾಯಿಸಿದ ಚಿತ್ರ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ರಿಷಬ್ ಜತೆಗೆ ನಟಿಸಿ ಸೈ ಎನಿಸಿ ಕೊಂಡವರು ಅಪ್ಪಟ ಕನ್ನಡದ ಪ್ರತಿಭೆ ಸಪ್ತಮಿ ಗೌಡ ಅವರಿಗೆ ಕಾಂತಾರ 2ನೇ ಚಿತ್ರವಾಗಿತ್ತು. ಲೀಲಾ ಎಂಬ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮೋಡಿ ಮೋಡಿದ್ದ ಅವರೀಗ ಟಾಲಿವುಡ್ನಲ್ಲಿ ಮಿಂಚಲು ಹೊರಟಿದ್ದಾರೆ. ತೆಲುಗಿನ ʼತಮ್ಮುಡುʼ ಚಿತ್ರದಲ್ಲಿ ನಿತಿನ್ಗೆ ನಾಯಕಿಯಾಗಿ ಸಪ್ತಮಿ ನಟಿಸುತ್ತಿದ್ದು, ಅವರ ಫಸ್ಟ್ ಲುಕ್ ಹೊರ ಬಿದ್ದಿದೆ. ಭಾನುವಾರ (ಜೂ. 8) ಹುಟ್ಟುಹಬ್ಬ ಆಚರಿಸಿಕೊಂಡ ಸಪ್ತಮಿಗೆ ತಮ್ಮುಡು ಚಿತ್ರತಂಡ ಫಸ್ಟ್ ಲುಕ್ ಮೂಲಕ ಭಜರ್ರಿ ಉಡುಗೊರೆ ನೀಡಿದೆ. ತಮ್ಮುಡು ಚಿತ್ರದಲ್ಲಿ ಸಪ್ತಮಿ ರತ್ನಾ ಎನ್ನುವ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಹಿನ್ನೆಲೆಯಲ್ಲಿ ಕಥೆ ಸಾಗಲಿದ್ದು, ಸಪ್ತಮಿಗೆ ಪವರ್ಫುಲ್ ಪಾತ್ರವೇ ಸಿಕ್ಕಿದೆ ಎನ್ನಲಾಗಿದೆ.

j3tvkannada
ದಿಲ್ ರಾಜು ನಿರ್ಮಾಣದ, ವೇಣು ಶ್ರೀರಾಂ ನಿರ್ದೇಶನದ ತಮ್ಮುಡು ಎಮೋಷನಲ್ ಆ್ಯಕ್ಷನ್ ಚಿತ್ರವಾಗಿದ್ದು, ಈಗಾಗಲೇ ಕುತೂಹಲ ಮೂಡಿಸಿದೆ. ಕನ್ನಡದ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಈ ಸಿನಿಮಾದಲ್ಲಿ ಲಯ, ಸ್ವಾಸಿಕಾ, ವರ್ಷಾ ಬೊಲಮ್ಮ, ಸೌರಬ್ ಸಚ್ದೇವ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಚಿತ್ರವನ್ನು ಜು. 4ರಂದು ರಿಲೀಸ್ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ಆದರೆ ಇದೀಗ ಅನಿವಾರ್ಯ ಕಾರಣಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಹೊಸ ದಿನಾಂಕ ಇನ್ನಷ್ಟೇ ಹೊರ ಬರಬೇಕಿದೆ.
ಈಗಾಗಲೇ ತೆಲುಗಿನಲ್ಲಿ ಕನ್ನಡತಿಯರಾದ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ರುಕ್ಮಿಣಿ ವಸಂತ್, ಶ್ರೀನಿಧಿ ಶೆಟ್ಟಿ ಗಮನ ಸೆಳೆದಿದ್ದಾರೆ. ಅವರ ಸಾಲಿಗೆ ಸಪ್ತಮಿ ಗೌಡ ಕೂಡ ಸೇರುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಹಾಗೆ ನೋಡಿದರೆ ಸಪ್ತಮಿ ಪರಭಾಷೆಗೆ ಕಾಲಿಡುತ್ತಿರುವುದು ಇದು ಮೊದಲ ಸಲವೇನಲ್ಲ. 2023ರಲ್ಲಿ ಬಿಡುಗಡೆಯಾಗಿದ್ದ ಹಿಂದಿಯ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾದಲ್ಲಿ ಸಪ್ತಮಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ.

j3tvkannada
ಇದೇ ವೇಳೆ ಸಪ್ತಮಿ ನಟಿಸುತ್ತಿರುವ ಕನ್ನಡದ ʼದಿ ರೈಸ್ ಆಫ್ ಅಶೋಕʼ ಚಿತ್ರತಂಡವೂ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೊವನ್ನು ರಿಲೀಸ್ ಮಾಡಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ. ಅಶೋಕನ ಕಥೆಯಲ್ಲಿ ಅಂಬಿಕಾ ಆಗಿ ಹೊಸ ಅಧ್ಯಾಯ ತೆರೆಯುತ್ತಿರುವ ಸಪ್ತಮಿ ಗೌಡ ಅವರಿಗೆ ದಿ ರೈಸ್ ಆಫ್ ಅಶೋಕ ತಂಡದಿಂದ ಹುಟ್ಟುಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದೆ. ಈ ಚಿತ್ರದಲ್ಲಿ ನೀನಾಸಂ ಸತೀಶ್ ನಾಯಕನಾಗಿ ನಟಿಸುತ್ತಿದ್ದಾರೆ. ಮನು ಶೇಡ್ಗಾರ್ ನಿರ್ದೇಶನದ ಈ ಚಿತ್ರ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ.