
ಚಿಕ್ಕಮಗಳೂರು: ಜೀವನ ನಿರ್ವಹಣೆಗಾಗಿ ಹಲವಾರು ಜನ ಹಲವಾರು ಕೆಲಸಗಳನ್ನು ಮಾಡಿಕೊಂಡು ಬದುಕುತ್ತಿದ್ದಾರೆ. ಅಂತಹ ಕೆಲಸಗಳಲ್ಲಿ ಡೆಲಿವರಿ ಬಾಯ್ಸ್ ಕೆಲಸವೂ ಒಂದು. ಡೆಲಿವರಿ ಬಾಯ್ಸ್ ಬೆಳಗ್ಗೆ ಮನೆಯಿಂದ ಹೊರಟರೆ ಸಂಜೆವರೆಗೂ ಬೆನ್ನಿನಲ್ಲಿ ಭರ್ಜರಿ ತೂಕದ ಪಾರ್ಸೆಲ್ ಹೊತ್ತು ದ್ವಿಚಕ್ರ ವಾಹನದಲ್ಲಿ ಓಡಾಟ, ಕಂಪನಿಯ ಮಾಲನ್ನು ಗ್ರಾಹಕರಿಗೆ ಸರಿಯಾದ ಸಮಯಕ್ಕೆ ತಲುಪಿಸಲು ಕಿಲೋ ಮೀಟರ್ಗಟ್ಟಲೆ ಅಲೆದಾಟ, ಕರೆ ಮಾಡಿದರೆ ಸ್ವೀಕರಿಸದ ಕೆಲವು ಗ್ರಾಹಕರು, ಗ್ರಾಮೀಣ ಪ್ರದೇಶದಲ್ಲಿ ಹೇಳತೀರದ ನೆಟ್ವರ್ಕ್ ಸಮಸ್ಯೆ, ಬಿಡುವು ಸಿಕ್ಕರೆ ಹಾದಿ ಬದಿಯಲ್ಲೆಲ್ಲೋ ಹೊಟ್ಟೆಗೊಂದಷ್ಟು ಆಹಾರ, ಪಾನೀಯ ಇದು ಎಲ್ಲೆಡೆ ಕಾಣ ಸಿಗುವ ಡೆಲಿವರಿ ಬಾಯ್ಸ್ ಬದುಕಿನ ಜಂಜಾಟ.

ಬದಲಾದ ಕಾಲಘಟ್ಟದಲ್ಲಿ ಸಹಜವಾಗಿಯೇ ಜನರು ದಿನಬಳಕೆಯ ವಸ್ತುಗಳನ್ನು ಆನ್ಲೈನ್ ಮೂಲಕ ಖರೀದಿಸುವ ಪರಿಪಾಠಕ್ಕೆ ಒಗ್ಗಿ ಹೋಗಿದ್ದಾರೆ. ಮನೆಯಲ್ಲೇ ಕುಳಿತು ತಮಗೆ ಬೇಕಾದ ವಸ್ತುವನ್ನು ಕಾರ್ಟ್ಗೆ ಸೇರಿಸಿ ಬಿಡುವುದು ಸುಲಭದ ಕೆಲಸ. ಆದರೆ, ಅದನ್ನು ಪ್ರಾಮಾಣಿಕವಾಗಿ ಖರೀದಿದಾರರಿಗೆ ತಂದೊಪ್ಪಿಸುವುದು ಡೆಲಿವರಿ ಬಾಯ್ಸ್ಗಳಿಗೆ ಅಷ್ಟೇ ಕಷ್ಟದ ಕೆಲಸವಾಗಿದೆ. ಇದರ ನಡುವೆ ಕಂಪನಿಗಳು ಕೊಡುವ ಅಷ್ಟೋ ಇಷ್ಟೋ ಕಮಿಷನ್ ಪಡೆದು ಈ ಕಾರ್ಮಿಕರು ದಿನ ದೂಡುತ್ತಿದ್ದಾರೆಯೇ ಹೊರತು, ಬದುಕಿಗೆ ಭದ್ರತೆ ಇಲ್ಲವಾಗಿದೆ.
ಶೃಂಗೇರಿಯಲ್ಲಿ ಡೆಲಿವರಿ ಆಫೀಸ್ ಇದ್ದು, ಕುಂಚೇಬೈಲು, ಮೆಣಸೆ, ಅಗಳಗಂಡಿ, ಮಕ್ಕಿಕೊಪ್ಪ, ಜಯಪುರ, ಎಲೆಮಡಲು, ಹೇರೂರು, ಬಸರಿಕಟ್ಟೆ, ಸೀಗೋಡು ಮುಗಿಸಿ ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಮ ಪಂಚಾಯಿತಿ ಆವರಣದ ಕಟ್ಟೆಯೊಂದರಲ್ಲಿ ವಾರಸುದಾರರಿಗೆ ಹಂಚಿಕೆ ಮಾಡುವ ಕೆಲಸ ನಿತ್ಯ ನಡೆಯುತ್ತಿದೆ. ಈ ಭಾಗದ ಬನ್ನೂರು, ರಂಭಾಪುರಿ ಪೀಠ, ಕಡ್ಲೆಮಕ್ಕಿಗಳಲ್ಲದೆ ಕೆಲವು ಕುಗ್ರಾಮಗಳಿಗೂ ಪಾರ್ಸೆಲ್ ತಲುಪಿಸಲಾಗುತ್ತಿದೆ.
ಮುಂಚೂಣಿಯಲ್ಲಿರುವ ಅಮೆಜಾನ್, ಫ್ಲಿಪ್ಕಾರ್ಟ್, ಮೀಶೋ, ಹ್ಯಾಂಡ್ ಎಂ, ಎ.ಜಿ.ಒ, ನ್ಯಾಪ್ಟೋಲ್ ಕಂಪನಿಗಳ ಜತೆಗೆ ವೆಬ್ಸೈಟ್ ನ ಮಿಂತ್ರ ಶಾಪಿಂಗ್ ಆಪ್ ಮೂಲಕ ಬರುವ ಮಾಲುಗಳನ್ನೂ ತಲುಪಿಸುವ ಜವಾಬ್ದಾರಿ ಇವರದು. ಪಟ್ಟಣದಲ್ಲಿಇ-ಕಾಮ್ ಎಕ್ಸ್ಪ್ರೆಸ್, ಶೋಡೋ ಫ್ಯಾಕ್ಸ್, ಎಕ್ಸ್ಪ್ರೆಸ್ ಬೀಸ್ ಗಳೆಂಬ ಮೂರು ಆಫೀಸ್ ಗಳಲ್ಲೂ ಹಂಚಿಕೆಯ ಜವಾಬ್ದಾರಿ ಈ ಯುವಕರದ್ದೇ ಆಗಿರುತ್ತದೆ.
ಕೆಲಸಕ್ಕೆಂದು ಬಂದಿರುವ ಅಸ್ಸಾಂನ ನೂರಾರು ಮಂದಿ ಡೆಲಿವರಿ ಬಾಯ್ಸ್ ಆಗಿದ್ದು, ಹೆಚ್ಚು ಮಾಲುಗಳು ಅವರಿಂದಲೇ ವಿತರಣೆಯಾಗುತ್ತಿವೆ. ಈ ಯುವಕರು ಕೆಲವು ಕಡೆ ಭಾಷೆಯ ಸಮಸ್ಯೆಗಳನ್ನು ಎದುರಿಸುವ ಪ್ರಸಂಗವೂ ನಡೆಯುತ್ತದೆ.
ಕಂಪನಿಗಳು ಮಾಲುಗಳಿಗೆ ಕಮಿಷನ್ ಕೊಡುತ್ತಾರೆ. ಆದರೆ ತಮ್ಮದೇ ಸ್ವಂತ ವಾಹನ, ಇಂಧನ, ಊಟ, ತಿಂಡಿ ಸೇರಿದಂತೆ ದಿನಕ್ಕೆ ಮುನ್ನೂರು ರೂ. ಖರ್ಚನ್ನು ನಾವೇ ಭರಿಸಬೇಕಾಗಿದೆ. ಯಾವುದೇ ಜೀವನ ಭದ್ರತೆ ಇಲ್ಲವಾಗಿದ್ದು, ದಿನ ದೂಡಬಹುದೇ ಹೊರತು ಉಳಿತಾಯ ಮಾಡಿ ಬದುಕು ಕಟ್ಟಿಕೊಳ್ಳುವುದು ಅಸಾಧ್ಯವಾಗಿದೆ.
ಎ.ಎಸ್.ಗಣೇಶ್, ಡೆಲಿವರಿ ಬಾಯ್, ನಾರ್ವೆ.
ಶಿಕ್ಷಣ ಪಡೆದಿದ್ದರೂ ಉದ್ಯೋಗ ಸಿಗದೆ ಕಠಿಣವಾದ ಡೆಲಿವರಿ ಕೆಲಸವನ್ನು ಸದ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ. ಕೆಲವು ಕಂಪನಿಗಳ ವಸ್ತುಗಳನ್ನು ವಾರಸುದಾರರು ಆರ್ಡರ್ ಮಾಡುವಲ್ಲಿ ವ್ಯವಹಾರಿಕವಾಗಿ ಅಡಚಣೆ ಮತ್ತು ದೋಷಗಳಾದಲ್ಲಿ ನಮಗೆ ಬರುವ ಕಮಿಷನ್ಗೆ ಕತ್ತರಿ ಬೀಳುವ ಸಂಭವವೂ ಇರುತ್ತದೆ.
ಪುನೀತ್, ಡೆಲಿವರಿ ಬಾಯ್, ಬಾಳೆಹೊನ್ನೂರು.
ಪಿ.ಯು.ಸಿ.ಯಿಂದ ಹಿಡಿದು ಎಂ.ಕಾಂ ವರೆಗೆ ಅಧ್ಯಯನ ಮಾಡಿದ ಅನೇಕ ಯುವಕರಿಗೆ ತಕ್ಕ ಉದ್ಯೋಗ ಸಿಗದೆ ಹೊಟ್ಟೆ ಪಾಡಿಗಾಗಿ ವಿವಿಧ ಕಂಪನಿಯ ಡೆಲಿವರಿ ಪ್ರತಿನಿಧಿಗಳಾಗಿ ಸೇರಿಕೊಂಡಿದ್ದಾರೆ. ಇಂತಹ ಯುವಕರನ್ನು ಗುರುತಿಸಿ ಅಸಂಘಟಿತ ವಲಯದ ಕಾರ್ಮಿಕರು ಎಂದು ಪರಿಗಣಿಸಿ ಸರಕಾರದ ಸೌಲಭ್ಯ ನೀಡುವ ಬಗ್ಗೆ ಯೋಚಿಸಬೇಕಾಗಿದೆ. ಹಾಗಾದಾಗ ಈ ಯುವಕರ ಬದುಕಿಗೆ ಭದ್ರತೆ, ಆತ್ಮವಿಶ್ವಾಸ ಮೂಡಿಸಬಹುದು ಎಂದು ಹೇಳುತ್ತಾರೆ.