

j3tvkannada
ಉತ್ತರ ಕನ್ನಡ : ಬಿಸಿಲ ಝಳ ಹೆಚ್ಚುತ್ತಿರುವಂತೆಯೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದ ವಿವಿಧೆಡೆಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಏಪ್ರಿಲ್ ಮೊದಲ ವಾರದಲ್ಲೇ ಜಲಮೂಲಗಳು ಬತ್ತಿರುವುದು ಜನರನ್ನು ಚಿಂತೆಗೆ ತಳ್ಳಿದೆ. ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಲಾಗಿದ್ದು, ಉಳಿದ ಕಡೆಯೂ ಆದ್ಯತೆಯ ಮೇಲೆ ಗ್ರಾಮ ಪಂಚಾಯಿತಿ ವತಿಯಿಂದ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳಕೆಯ ಮೊಗೇರಕೇರಿ, ಸರ್ಪನಕಟ್ಟೆಯ ಹಡೀನ್ ಗ್ರಾಮ, ಮುಂಡಳ್ಳಿಯ ಮೊಗೇರಕೇರಿ, ಹೆಬಳೆಯ ಹಾರ, ಹೊನ್ನಿಗದ್ದೆ, ಗಾಂಧಿನಗರ, ಶಿರಾಲಿಯ ಅಳ್ವೆಕೋಡಿ, ಮಾವಿನಕುರ್ವೆಯ ಬೆಳ್ಳಿ ಗ್ರಾಮ, ಬೆಂಗ್ರೆಯ ಸಣಬಾವಿ, ಮುಟ್ಟಳ್ಳಿಯ ಬಿಳಲಖಂಡ, ಮುರುಡೇಶ್ವರದ ಜನತಾ ಕಾಲೊನಿ ಹಾಗೂ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಪುರಸಭೆಯ ಆಶ್ರಯ ಕಾಲೊನಿ, ಮಗ್ಗುಂಕಾಲೊನಿ, ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಲಿಕೋಡಿಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತದೆ. ಸಮುದ್ರ ತೀರ ಪ್ರದೇಶಗಳಲ್ಲಿ ನದಿಯಲ್ಲಿ ಸಿಹಿ ನೀರು ಆವಿಯಾಗಿ ಉಪ್ಪು ನೀರು ಸೇರಿಕೊಳ್ಳುವುದರಿಂದ ಬಾವಿ ನೀರು ಕೂಡ ಉಪ್ಪು ಮಿಶ್ರಿತವಾಗಿ ಕುಡಿಯುವ ಸಿಹಿ ನೀರಿಗಾಗಿ ಪರಿತಪಿಸಬೇಕಾಗುತ್ತದೆ.