
ಕಲಬುರುಗಿ :ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಕಾಗಿಣಾ ನದಿಗೆ ಕಟ್ಟಿರುವ ಬಾಂದಾರ ಸೇತುವೆ ಪಕ್ಕದಲ್ಲಿನ ಸರ್ವೆ ನಂ.33, 34ರಲ್ಲಿ ಕೆ.ಆರ್.ಐ.ಡಿ.ಎಲ್ ಮರಳು ದಾಸ್ತಾನು ಅಡ್ಡೆ ಸ್ಥಾಪಿಸಲಾಗಿದೆ. ಈ ದಾಸ್ತಾನು ಸ್ಥಳ ಹೆಸರಿಗೆ ಮಾತ್ರ ಸರ್ಕಾರದ್ದು. ವಾಸ್ತವವಾಗಿ ಇಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರು, ಕಾರುಬಾರು, ಮರಳು ಅಕ್ರಮ ಸಾಗಾಟ ಒಂದು ವರ್ಷದಿಂದ ನಿರ್ಭಯವಾಗಿ ನಡೆಯುತ್ತಿದೆ.

j3tvkannada
ತೂಕ ಮಾಡಿ ಮರಳು ಮಾರಾಟ ಮಾಡಲೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕೆ.ಆರ್.ಐ.ಡಿ.ಎಲ್ ಇಲಾಖೆಗೆ ಲೀಸ್ ಕೊಟ್ಟಿದೆ. ನದಿಯಿಂದ ಮರಳು ಎತ್ತಿ ದಾಸ್ತಾನು ಸ್ಥಳದಲ್ಲಿ ತಂದು ಹಾಕಲು ಬಾಡಿಗೆ ಆಧಾರದಲ್ಲಿ ಹಿಟಾಚಿ ಮತ್ತು ಟಿಪ್ಪರ್ ಹೊಂದಿರುವವರಿಗೆ ಕೆಲಸ ನೀಡಲಾಗಿದೆ. ಈ ಸಕ್ರಮ ಕ್ರಮದಡಿ ಮರಳು ಅಕ್ರಮ ಸಾಗಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.
ಅದನ್ನು ತಡೆಯಲು ಯಾವ ಇಲಾಖೆಯ ಅಧಿಕಾರಿಗಳು ಧೈರ್ಯ ತೋರುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಪತ್ರಕರ್ತರಿಗೂ ಬೆದರಿಕೆ ಹಾಕಿದ್ದ ದಂಧೆಕೋರರು, 2024ರ ಅ.28ರ ಸಂಜೆ ಸಮಯದಲ್ಲಿ ಭಾಗೋಡಿ ಸೇತುವೆ ಪಕ್ಕದಲ್ಲಿನ ಕೆ.ಆರ್.ಐ.ಡಿ.ಎಲ್ ಮರಳು ದಾಸ್ತಾನು ಸ್ಥಳದಲ್ಲಿನ ಮರಳು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ಬಿಜೆಪಿಯ ಮುಖಂಡರೊಬ್ಬರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯ ವಾಹನದ ಮುಂದೆ ಕುಳಿತು ಹೋರಾಟ ಮಾಡುತ್ತಿದ್ದರು. ವಿಷಯ ತಿಳಿದು ಕೆಲವು ಪತ್ರಕರ್ತರು ಸುದ್ದಿಗಾಗಿ ಘಟನಾ ಸ್ಥಳಕ್ಕೆ ಹೋದಾಗ ಟಿಪ್ಪರ್ ಮಾಲೀಕರು ಮತ್ತು ಚಾಲಕರು ಎಂದು ಹೇಳಿಕೊಂಡು ಕೆಲವರು ಪತ್ರಕರ್ತರನ್ನೇ ಹೆದರಿಸಿ, ಬೆದರಿಸಿ, ಇಲ್ಲಿಗ್ಯಾಕೆ ಬಂದಿದ್ದು ಎಂದು ಕತ್ತಲಿನಲ್ಲಿ ಹಲ್ಲೆ ಮಾಡಲು ಮುಂದಾಗಿ ನಂತರ ಕ್ಷಮೆ ಯಾಚಿಸಿದ ಘಟನೆಯೂ ನಡೆದಿತ್ತು.
ತಾಲ್ಲೂಕಿನ ಬೆಳಗುಂಪಾ ಗ್ರಾಮದ ಶ್ರೀಧರ ಅಮೃತ ಎಂಬುವವರು ಕುರಿಮೇಯಿಸಲೆಂದು ಅಡವಿಗೆ ಹೋದವರು ಮರಳಿ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾಗ ಏ.8ರಂದು ಗ್ರಾಮದ ಸಮೀಪ ಖಾಸಗಿ ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆ ನಡೆಸಿದ ಆಳವಾದ ನೀರಿನ ಗುಂಡಿಯಲ್ಲಿ ಶ್ರೀಧರನ ಶವ ಪತ್ತೆಯಾದ ನಂತರ ಮರಳು ಅಕ್ರಮ ದಂಧೆಯ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ.
ವ್ಯಕ್ತಿಯ ಸಾವು ಮತ್ತು ಮರಳು ಅಕ್ರಮ ದಂಧೆಯ ಕುರಿತು ಶುರುವಾದ ಆರೋಪಗಳಿಂದ ಎಚ್ಚೆತ್ತುಕೊಂಡ ಆಡಳಿತವು ಅನಧಿಕೃತವಾಗಿ ಮರಳು ಸಾಗಾಟ ತಡೆಯಲು ಮುಂದಾಗಿದೆ. ಸೇಡಂ ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ತಡೆದು ತಪಾಸಣೆ ಮಾಡಿ, ₹95 ಸಾವಿರ ಮೌಲ್ಯದ ಮರಳು ಜಪ್ತಿ, ₹60 ಲಕ್ಷ ಮೌಲ್ಯದ ಆರು ಟಿಪ್ಪರ್, ₹2 ಲಕ್ಷ ಮೌಲ್ಯದ ಒಂದು ಟ್ರ್ಯಾಕ್ಟರ್ ವಶಕ್ಕೆ ಪಡೆದುಕೊಂಡಿದ್ದು ಗಮನಿಸಿದರೆ ಕಾಗಿಣಾ ನದಿಯಲ್ಲಿ ಮತ್ತು ಖಾಸಗಿ ಪಟ್ಟಾ ಜಮೀನಿನಲ್ಲಿ ಯಾವ ಪ್ರಮಾಣದಲ್ಲಿ ಮರಳು ಅಕ್ರಮ ದಂಧೆ ನಡೆಯುತ್ತಿದೆ ಎಂಬುದಕ್ಕೆ ದೊಡ್ಡ ಸಾಕ್ಷಿ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.