
ಚಿಕ್ಕಬಳ್ಳಾಪುರ : ರಾಜ್ಯದಲ್ಲೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾದ ನಂದಿಬೆಟ್ಟದ ರೋಪ್ ವೇಗೆ ಹಲವು ಬದಲಾವಣೆಗಳೊಂದಿಗೆ ಇದೀಗ ರಾಜ್ಯ ಅರಣ್ಯ ಇಲಾಖೆ ಷರತ್ತು ಬದ್ಧವಾದ ಅನುಮತಿಯನ್ನು ನೀಡಿದೆ. ಅಂತಿಮ ಅನುಮತಿಗಾಗಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಸದ್ಯದಲ್ಲೇ ಅಲ್ಲಿಂದಲೂ ಗ್ರೀನ್ಸಿಗ್ನಲ್ ಸಿಗುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಕಾಮಗಾರಿ ಶುರುವಾಗುವ ಸಾಧ್ಯತೆ ಇದೆ.
2023ರಲ್ಲೇ ಶಂಕುಸ್ಥಾಪನೆಯಾಗಿರುವ ರೋಪ್ ವೇ ಕಾಮಗಾರಿ ಕುಂಟುತ್ತಲೇ ಸಾಗಿತ್ತು. ನಾನಾ ತಾಂತ್ರಿಕ ಸಮಸ್ಯೆಗಳ ಮಧ್ಯೆಯೂ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಆನಂತರ ಕಾಮಗಾರಿ ಶುರು ಮಾಡಲು ಸಾಧ್ಯವಾಗಿರಲಿಲ್ಲ. ಅದರಲ್ಲಿ ಪ್ರಮುಖವಾಗಿ ಅರಣ್ಯ ಇಲಾಖೆಯಿಂದ ಕಾಮಗಾರಿ ಕೈಗೊಳ್ಳಲು ಅನುಮತಿ ಸಿಗಬೇಕಿತ್ತು. ಮೂಲಗಳ ಪ್ರಕಾರ, ಇದೇ ಮೇ ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆಯಿದ್ದು, 2 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಸುಮಾರು 2.93 ಕಿಮೀ ಉದ್ದದ ಈ ರೋಪ್ ವೇ ನಂದಿಬೆಟ್ಟದ ಸಂಚಾರ ದಟ್ಟಣೆ ಕಡಿಮೆ ಮಾಡಲಿದ್ದು, ವಾಹನ ದಟ್ಟಣೆ ಕಡಿಮೆಯಾಗಿ ವಾಯು ಮಾಲಿನ್ಯ ತಡೆಗೂ ನೆರವಾಗಲಿದೆ. ಈಗಾಗಲೇ ಒಂದು ಬಾರಿ ಶಂಕುಸ್ಥಾಪನೆಯಾಗಿದ್ದು, ಈಗ ಮತ್ತೊಂದು ಗುದ್ದಲಿಪೂಜೆ ನಡೆಯುವ ಸಾಧ್ಯತೆಯೂ ಇದೆ.

j3tvkannada
ಸುಮಾರು 93.40 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಹಲವಾರು ಬಾರಿ ಯೋಜನೆ ಬದಲಾಯಿಸಲಾಗಿದೆ. ಹಿಂದೆ 17-18 ಪಿಲ್ಲರ್ಗಳನ್ನು ಹಾಕಲು ನಿರ್ಧರಿಸಲಾಗಿತ್ತು. ಆದರೆ ಈಗ ಪಿಲ್ಲರ್ಗಳ ಸಂಖ್ಯೆಯನ್ನು 10ಕ್ಕೆ ಇಳಿಸಲಾಗಿದೆ. ಕೇವಲ ಒಂದು ನೀಲಗಿರಿ ಮರ ಹಾಗೂ ಹುಣಸೆ ಮರದ ಕೆಲವು ಭಾಗವನ್ನು ತೆಗೆಯಬೇಕಾಗಿದ್ದು, ಅರಣ್ಯ ಇಲಾಖೆ ಇದನ್ನೆಲ್ಲಾ ಗಮನಿಸಿಯೇ ಅನುಮತಿ ನೀಡಿದೆ.
ಅರಣ್ಯ ಸಿಬ್ಬಂದಿ ಮತ್ತು ತಜ್ಞರ ಮೇಲ್ವಿಚಾರಣೆಯಲ್ಲಿ ಕಾರ್ಮಿಕರ ಸಮ್ಮುಖದಲ್ಲಿ ಕೆಲಸ ನಡೆಸಲು ಸೂಚಿಸಿದ್ದು, ಹಲವು ಷರತ್ತುಗಳನ್ನು ವಿಧಿಸಿಯೇ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅರಣ್ಯ ಇಲಾಖೆ ವಿಧಿಸಿರುವ ಷರತ್ತುಗಳಿಗೆ ಪ್ರವಾಸೋದ್ಯಮ ಇಲಾಖೆ ಸ್ಪಂದಿಸಿದ್ದು ಬ್ಲಾಸ್ಟಿಂಗ್, ಜೆಸಿಬಿ ಬಳಕೆ ಮಾಡದೆ ರೆಡಿಮೇಡ್ ಪಿಲ್ಲರ್ಗಳನ್ನು ಅಳವಡಿಸಲು ತೀರ್ಮಾನಿಸಿದೆ. ಬೆಟ್ಟದ ಮೇಲೆ ರೋಪ್ ವೇ ಮಾರ್ಗ ಸುಮಾರು 86 ಗುಂಟೆಯಿದ್ದು, ಪರಿಸರಕ್ಕೆ ತೊಂದರೆಯಾಗದಂತೆ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ.

j3tvkannada
ಪಿಲ್ಲರ್ಗಳ ಜತೆಗೆ ಮೇಲ್ಭಾಗದಲ್ಲಿ ರೋಪ್ ವೇ ನಿಲ್ದಾಣ ನಿರ್ಮಿಸಲು ತೋಟಗಾರಿಕೆ ಇಲಾಖೆಗೆ ಸೇರಿದ ಜಾಗ ನೀಡಲಾಗಿದೆ. ಇದೇ ಜಾಗದಲ್ಲಿ ವಾಹನ ನಿಲ್ದಾಣವಿದ್ದು, ಇಲ್ಲೇನಾದರೂ ರೋಪ್ ವೇ ನಿಲ್ದಾಣದ ಕಾಮಗಾರಿ ನಡೆಯಬೇಕಾದರೆ ವಾಹನ ನಿಲುಗಡೆಗೆ ಸಮಸ್ಯೆಯಾಗಲಿದೆ.
ಹೀಗಾಗಿ ಬೆಟ್ಟದ ತಳದಲ್ಲೇ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿ, ಅಲ್ಲಿಂದ ಬಸ್ಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯುವ ಚಿಂತನೆ ನಡೆದಿದೆ. ದಶಕಗಳ ಹಿಂದಿನ ಕೇಬಲ್ ಕಾರ್ ಅಳವಡಿಸುವ ಪರಿಕಲ್ಪನೆ ಹಾಗೂ ಬೇಡಿಕೆ ಸದ್ಯ ರೋಪ್ ವೇವರೆಗೂ ಬಂದು ನಿಂತಿದೆ. ಪರಿಸರಕ್ಕೆ ತೊಂದರೆಯಾಗದಂತೆ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ, ಯಶವಂತ್ಕುಮಾರ್, ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ.