
ಕೊಡಗು: ಮಂಜಿನ ನಗರಿಗೆ ಕಪ್ಪುಚುಕ್ಕೆ ಎನಿಸಿದ್ದ ಇಲ್ಲಿನ ಸ್ಟೋನ್ಹಿಲ್ ಮೇಲಿನ ಕಸದ ರಾಶಿಯನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಕೇವಲ ಸ್ಟೋನ್ ಹಿಲ್ ಮಾತ್ರವಲ್ಲ ಕುಶಾಲನಗರದ ಪುರಸಭೆ ಭುವನಗಿರಿ ಹಳ್ಳಿಯ ಬಳಿ ಹಾಕಿರುವ ಹಾಗೂ ವಿರಾಜಪೇಟೆ ಪುರಸಭೆ ಗ್ರಾಮದ ಬಳಿ ಹಾಕಿರುವ ಕಸವನ್ನೂ ಇದರೊಂದಿಗೆ ತೆರವುಗೊಳಿಸಲಾಗುತ್ತದೆ.

j3tvkannada
ಸ್ವಚ್ಛ ಭಾರತ್ ಮಿಷನ್ನಡಿ ಮಹಾರಾಷ್ಟ್ರದ ಪುಣೆಯ ಕಂಪನಿಯೊಂದು ಇದರ ಗುತ್ತಿಗೆ ಪಡೆದಿದ್ದು, ವಿಲೇವಾರಿ ಮಾಡುವ ಕಾರ್ಯಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಾಸಕ ಡಾ.ಮಂತರ್ಗೌಡ ಚಾಲನೆ ನೀಡಿದರು. ನಗರಸಭೆಯು ಇಂತಹ ಕಸಕ್ಕೆ ಪಾರಂಪರಿಕ ತ್ಯಾಜ್ಯ ಎಂದು ಹೆಸರಿಟ್ಟಿದೆ. ಅನೇಕ ದಶಕಗಳಿಂದ ಸ್ಟೋನ್ ಹಿಲ್ನಲ್ಲಿ ಕಸದ ರಾಶಿ ಹಾಕಿದ್ದು, ಅದು ಮಡಿಕೇರಿ ನಗರದಿಂದ ಗುಡ್ಡದ ಮೇಲಿನ ಚುಕ್ಕೆಯಂತೆ ಭಾಸವಾಗುತ್ತಿತ್ತು. ಬಹಳಷ್ಟು ಮಂದಿ ಪ್ರವಾಸಿಗರು ಅದೇನು ಎಂದು ಕೇಳಿದ್ದೂ ಉಂಟು. ಅದು ನಗರದ ಕಸದ ರಾಶಿ ಎಂದ ಕೂಡಲೇ ಹೀಗೆ ಹಸಿರ ಪರಿಸರದ ಗುಡ್ಡದ ಮೇಲೆ ಈ ಪರಿಯಲ್ಲಿ ಕಸದ ರಾಶಿ ಹರಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೂ ಉಂಟು. ಸದ್ಯ, ನಗರಸಭೆ ಇಂತಹದ್ದೊಂದು ಅಪಖ್ಯಾತಿಯಿಂದ ಹೊರಬರಲು ದೃಢನಿಶ್ಚಯ ಕೈಗೊಂಡಿದೆ.