
ಗದಗ: ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ಕಾಲಕಾಲೇಶ್ವರ ಗ್ರಾಮದ ಸಮೀಪದ ಕಾಲಕಾಲೇಶ್ವರನ ರಥೋತ್ಸವವು ದವನದ ಹುಣ್ಣಿಮೆಯ ಈ ದಿನ (ಏ.12) ನಡೆಯಲಿದ್ದು, ನಾನಾ ಭಾಗಗಳಿಂದ ಭಕ್ತರು ಧಾವಿಸಿ ಬರುತ್ತಿದ್ದಾರೆ.

j3tvkannada
ಸಂಜೆ ಆಕಾಶದಲ್ಲಿ ಚಿತ್ತಾ ನಕ್ಷತ್ರದ ದರ್ಶನವಾಗುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ದೇವರ ದರ್ಶನಕ್ಕೆ ಬರುವ ಭಕ್ತರು ದೇವರಿಗೆ ದವನ ಸಮರ್ಪಿಸಿ, ಪೂಜೆ ಸಲ್ಲಿಸುತ್ತಾರೆ. ರಥೋತ್ಸವದ ನಂತರ ದವನ, ಕಬ್ಬುಗಳನ್ನು ಕೊಂಡು ಊರಿಗೆ ಮರಳುತ್ತಾರೆ. ದವನದ ಹುಣ್ಣಿಮೆ ದಿನ ನಡೆಯುವ ಜಾತ್ರೆಗೆ ಯುಗಾದಿ ಪಾಡ್ಯದಿಂದ ಚಾಲನೆ ದೊರೆಯುತ್ತದೆ. ಅಂದು ರಥದ ಕೋಣೆಯಿಂದ ಬೊಳು ರಥವನ್ನು ಐದು ಹೆಜ್ಜೆ ಎಳೆದು ಪೂಜೆ ಸಲ್ಲಿಸಿ ಭಕ್ತರಿಗೆ ಬೇವು, ಬೆಲ್ಲ ವಿತರಿಸಲಾಗುತ್ತದೆ. ರಥೋತ್ಸವದ 9 ದಿನಗಳ ಮೊದಲು ರಾತ್ರಿ ದೇವಸ್ಥಾನದಲ್ಲಿ ಕಾಲಕಾಲೇಶ್ವರ ಹಾಗೂ ಬೋರಾದೇವಿಯ ಬಸವ ಪಟ (ಲಗ್ನ ಪತ್ರಿಕೆ) ಕಟ್ಟಲಾಗುತ್ತದೆ. ಅಂದಿನಿಂದ 9 ದಿನ ನಿತ್ಯ ರಾತ್ರಿ ಕಾಲಕಾಲೇಶ್ವರ ಹಾಗೂ ಬೋರಾದೇವಿಯ ರಥ ಎಳೆಯಲಾಗುತ್ತದೆ.