
ಉತ್ತರ ಕನ್ನಡ : ಸರ್ಕಾರಿ ಕೊಳವೆಬಾವಿಗೆ ಮೋಟರ್ ಕುಂದ್ರಿಸ್ಯಾರಿ. ತಟಕ್, ತಟಕ್ ನೀರ ಬರತೈತಿ. ಕೊಳವೆಬಾವಿ ಇದ್ದವರ ಮನಿಗೆ ಹೋಗಿ, ನಾಲ್ಕ ಕೊಡ ನೀರು ತರ್ತೇವಿ. ಪಂಚಾಯ್ತಿಯವರಿಗೆ ಹೇಳಿದ ಮ್ಯಾಲೆ, ದಿನಕ್ಕೊಂದ ಸಲ ಟ್ಯಾಂಕರ್ ನೀರು ಊರಿಗೆ ಕಳಸ್ತಾರ. ಎಲ್ಲಾರಿಗೂ ಸಾಲಲ್ಲಾರಿ ಎಂದು ಕೊಡ ಹಿಡಿದು ನೀರು ತರಲು ಹೊರಟಿದ್ದ ತಾಲ್ಲೂಕಿನ ಕಳಕಿಕೇರಾದ ಸಗ್ಗುಬಾಯಿ ನೀರಿನ ಸಮಸ್ಯೆ ಕುರಿತು ಹೇಳಿದರು. ನಾಲೈದು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ಕರೆಂಟ್ ಸಮಸ್ಯೆಯಾದರೆ, ಐದಾರು ದಿನಗಳವರೆಗೆ ನೀರು ಬರಲ್ಲ. ಊರಾಚೆ ಇರುವ ಪಕ್ಕದ ಜಮೀನುಗಳ ಕೊಳವೆಬಾವಿಯಿಂದ ನೀರು ತರಬೇಕಾಗುತ್ತದೆ. ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಿದ್ದರೂ, ಪಂಚಾಯಿತಿಯವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಕೋಡಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳದಮನೆ ನಿವಾಸಿ ಗಣೇಶ. ತಾಲ್ಲೂಕಿನ ನಾಲೈದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರ್ಚ್ ತಿಂಗಳಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೇಸಿಗೆ ಸಮಯದಲ್ಲಿ ಕೊಳವೆಬಾವಿ ಕೊರೆಸುವುದು, ಮೋಟರ್ ದುರಸ್ತಿ ಮಾಡಿಸುವುದಕ್ಕೆ ಮಾತ್ರ ಸೀಮಿತರಾಗುವುದರಿಂದ, ಕೆಲವು ಗ್ರಾಮಗಳು ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ ಎನ್ನುವ ಆರೋಪವೂ ಸಾರ್ವತ್ರಿಕವಾಗಿದೆ.

j3tvkannada
ವಡಗಟ್ಟಾ, ಸಾಲಗಾಂವ, ನಂದಿಕಟ್ಟಾ, ಯರೇಬೈಲ್, ಹುಲಿಹೊಂಡ, ಕಾತೂರ, ಕಲಕೇರಿ, ಅಂದಲಗಿ, ಗುಂಜಾವತಿ, ಚಿಗಳ್ಳಿ, ಹುನಗುಂದ, ಅಗಡಿ, ಹನುಮಾಪುರ, ಆಲಳ್ಳಿ, ಕೋಡಂಬಿ, ಓರಲಗಿ ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಬಹುದು ಎಂದು ತಾಲ್ಲೂಕು ಪಂಚಾಯಿತಿ ಅಂದಾಜಿಸಿದೆ. ಚಿಗಳ್ಳಿ ಜಲಾಶಯದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದರೆ, ಚಿಗಳ್ಳಿ, ಸಾಲಗಾಂವ ಹಾಗೂ ಕಾತೂರ ಈ ಮೂರು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ನೀರಿನ ಬವಣೆಯಿಂದ ಪರಿಹಾರ ಕಾಣಲಿವೆ ಎನ್ನುತ್ತಾರೆ ವಕೀಲ ಗುಡ್ಡಪ್ಪ ಕಾತೂರ. ಮೈನಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿವರ್ಷ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ, ಕ್ಯಾತನಳ್ಳಿ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಲು ಕ್ರಿಯಾಯೋಜನೆ ತಯಾರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಈಚೆಗೆ ತಾಲ್ಲೂಕಿಗೆ ಭೇಟಿ ನೀಡಿದ್ದ ವೇಳೆ ಹೇಳಿದ್ದರು.