ಕೋಲಾರ : ಅಂಬೇಡ್ಕರ್ ಹೆಜ್ಜೆ ಇಟ್ಟ ಸ್ಥಳದ ಗುರುತಾಗಿ ನಿರ್ಮಿಸಲಾಗಿರುವ ಅವರ ಪುತ್ಥಳಿಗೆ ಗೌರವ ಕೊಡುವ ಕೆಲಸವನ್ನು ನಗರಸಭೆ ಮಾಡಿಲ್ಲ ಎಂದು ಸೇವ್ ಕೆಜಿಎಫ್ ಸಮಿತಿ ಸದಸ್ಯರು ಆರೋಪಿಸಿದ್ದಾರೆ.

j3tvkannada
ನಗರಸಭೆಯ ಮುಂದೆ ಶುಕ್ರವಾರ ಸಾಂಕೇತಿಕ ಪ್ರತಿಭಟನೆ ಮಾಡಿ, ನಂತರ ಮಾತನಾಡಿದ ಸಮಿತಿ ಅಧ್ಯಕ್ಷ ಜ್ಯೋತಿಬಸು, 1964ರಲ್ಲಿ ನಗರಸಭೆ ಅಸ್ತಿತ್ವಕ್ಕೆ ಬಂದಾಗ, ಅಂಬೇಡ್ಕರ್ ಪ್ರತಿಮೆಯನ್ನು ನಗರಸಭೆಯಲ್ಲಿ ಸ್ಥಾಪಿಸಲಾಯಿತು. ಸಿಮೆಂಟಿನಿಂದ ಮಾಡಿದ್ದ ಅಂಬೇಡ್ಕರ್ ಪ್ರತಿಮೆ ಬಿರುಕು ಬಿಟ್ಟಿದೆ. ಜಿಲ್ಲೆಯಲ್ಲಿಯೇ ಪ್ರಥಮ ಅಂಬೇಡ್ಕರ್ ಪ್ರತಿಮೆಯನ್ನು ನ್ಯಾಯಾಲಯದ ಪಕ್ಕದಲ್ಲಿರುವ ಉದ್ಯಾನದಲ್ಲಿ ಸ್ಥಾಪಿಸಲಾಗಿದೆ. ನಗರದಲ್ಲಿ ನಡೆಯುವ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿಯೂ ಅಲ್ಲಿಯೇ ಬಾಬಾ ಸಾಹೇಬರಿಗೆ ಹೂಮಾಲೆ ಅರ್ಪಿಸಿ ಕಾರ್ಯಕ್ರಮ ಶುರು ಮಾಡುವ ಪರಿಪಾಠ ಇದೆ. ಅಲ್ಲಿರುವ ಉದ್ಯಾನಕ್ಕೆ ಕೋಟಿಗಟ್ಟಲೆ ಹಣ ವ್ಯಯ ಮಾಡಲಾಗಿದೆ. ಆದರೆ ಅಭಿವೃದ್ದಿಯೇ ಆಗಿಲ್ಲ. ಉದ್ಯಾನ ಸ್ಮಶಾನದ ರೀತಿಯಲ್ಲಿದೆ. ಇದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದು ಆರೋಪಿಸಿದರು.
ಅಂಬೇಡ್ಕರ್ ಕೆಜಿಎಫ್ಗೆ ಭೇಟಿ ನೀಡಿದ ಕ್ಷಣ ಐತಿಹಾಸಿಕವಾದುದು. ಅವರ ನೆನಪಿನಲ್ಲಿ ಸ್ಥಾಪಿಸಿದ ಉದ್ಯಾನ ಇಂದು ತ್ಯಾಜ್ಯ ಸಂಗ್ರಹ ಮಾಡುವ ಸ್ಥಳವಾಗಿ ಮಾರ್ಪಟ್ಟಿದೆ. ನ್ಯಾಯಾಲಯದಲ್ಲಿ ಪ್ರಕರಣ ಇದೆ ಎಂಬ ನೆಪ ಹೇಳಿ, ಉದ್ಯಾನ ಅಭಿವೃದ್ಧಿ ಮಾಡುತ್ತಿಲ್ಲ. ಉದ್ಯಾನವನ್ನು ಅಭಿವೃದ್ಧಿ ಮಾಡಲು ಯಾವುದೇ ಕೋರ್ಟಿನಿಂದ ತಡೆಯಾಜ್ಞೆ ಇಲ್ಲ. ಕೂಡಲೇ ಉದ್ಯಾನವನ್ನು ಪುನರುಜ್ಜಿವನಗೊಳಿಸಬೇಕು. ನಗರಸಭೆ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ಕೂಡ ಬದಲಾಯಿಸಬೇಕು. ಇಲ್ಲವಾದಲ್ಲಿ ನಗರಸಭೆ ವಿರುದ್ಧ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಜ್ಯೋತಿಬಸು ಎಚ್ಚರಿಕೆ ನೀಡಿದರು.