
ರಾಯಚೂರು: ಕುಡಿಯುವ ನೀರಿಗೆ ಆಸರೆಯಾಗಿದ್ದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಏ.10 ರಿಂದ ನೀರು ಸ್ಥಗಿತಗೊಳಿಸಲಾಗಿದೆ. ಕಾಲುವೆಯಿಂದ ಕುಡಿಯುವ ನೀರಿನ ಎರಡು ಕೆರೆಗಳನ್ನು ಈಗಾಗಲೇ ಭರ್ತಿ ಮಾಡಿಕೊಂಡಿರುವ ಪುರಸಭೆ. ಆಡಳಿತ ಮಂಡಳಿ ಬೇಸಿಗೆಯ ಎರಡು ತಿಂಗಳು ಪಟ್ಟಣದ 23 ವಾರ್ಡ್ಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

j3tvkannada
23 ವಾರ್ಡ್ಗಳಲ್ಲಿ ಪ್ರತಿ ವಾರ್ಡ್ಗೆ ಎರಡರಂತೆ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಕೆಲವು ವಾರ್ಡ್ಗಳಲ್ಲಿ ಪೈಪ್ಲೈನ್ ಇಲ್ಲದ ಕಡೆ ಟ್ಯಾಂಕ್ ನಿರ್ಮಿಸಿ ನೀರು ಸರಬರಾಜು ಮಾಡಲು ಪುರಸಭೆ ಯೋಜನೆ ರೂಪಿಸಿಕೊಂಡಿದೆ. ನೀರಿನ ತೀವ್ರ ತೊಂದರೆ ಅನುಭವಿಸುತ್ತಿರುವ ಗಾಂಧಿ ನಗರದ ನಾಲ್ಕು ವಾರ್ಡ್ಗಳು ಸೇರಿದಂತೆ ಯಾವುದೇ ವಾರ್ಡ್ಗಳಲ್ಲಿ ನೀರಿನ ತೊಂದರೆಯಾಗದಂತೆ ನಿಗಾವಹಿಸಲಾಗಿದೆ. ಅಗತ್ಯ ಬಿದ್ದರೆ ಕೊಳವೆಬಾವಿ ಕೊರೆಸಲು ಸಹ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ತಿಳಿಸಿದರು. ಪಟ್ಟಣದ ಜನರಿಗೆ ಎಷ್ಟು ದಿನಕ್ಕೊಮ್ಮೆ ಕುಡಿಯಲು ಶುದ್ಧ ನೀರು ಕೊಡಬೇಕು ಎಂಬುದರ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಕೆರೆಯಲ್ಲಿನ ನೀರಿನ ಲಭ್ಯತೆ ನೋಡಿಕೊಂಡು ದಿನ ನಿಗದಿಪಡಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಹೇಳಿದರು. ಸಾರ್ವಜನಿಕರು ಕುಡಿಯುವ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು. ಈ ಬೇಸಿಗೆಯಲ್ಲಿ ಎಲ್ಲರಿಗೂ ನೀರು ದೊರಕುವಂತೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.