
ಕೋಲಾರ : ತಾಲ್ಲೂಕಿನ ಕುರ್ಕಿ ಗ್ರಾಮದ ವೆಂಗಲಯ್ಯನ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಹಣ ದುರುಪಯೋಗ ಆರೋಪ ಸಂಬಂಧ ಸಣ್ಣ ನೀರಾವರಿ ಇಲಾಖೆಯ ಕೋಲಾರ ಉಪವಿಭಾಗದ ಇಬ್ಬರು ಎಂಜಿನಿಯರ್ಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಎನ್.ಹರಿಕೃಷ್ಣ ಹಾಗೂ ಸಹಾಯಕ ಎಂಜಿನಿಯರ್ ಜಿ.ಎಸ್.ಹರಿನಾಥರೆಡ್ಡಿ ವಿರುದ್ದ ಇಲಾಖೆ ತನಿಖೆ ಬಾಕಿ ಇರಿಸಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಮುಂದಿನ ಸ್ಥಳ ನಿಯುಕ್ತಿಗೆ ಸರ್ಕಾರದಲ್ಲಿ ವರದಿ ಮಾಡಿಕೊಳ್ಳಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್.ಎಸ್.ಶಿವಕುಮಾರ್ ಸೂಚಿಸಿದ್ದಾರೆ. ಕೆರೆ ಕಾಮಗಾರಿ ವಿಚಾರವಾಗಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಇಲಾಖೆಯ ದಕ್ಷಿಣ ವಲಯ ಮುಖ್ಯ ಎಂಜಿನಿಯರ್ಗೆ ಬೆಂಗಳೂರಿನಲ್ಲಿ ದೂರು ನೀಡಿದ್ದರು. ಕಾಮಗಾರಿ ಅಕ್ರಮ ಹಾಗೂ ಲೋಪಗಳ ಆರೋಪದ ಬಗ್ಗೆ ಇಲಾಖೆಯ ಅಧೀಕ್ಷಕ ಎಂಜಿನಿಯರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಹರಿಕೃಷ್ಣ ಹಾಗೂ ಹರಿನಾಥರೆಡ್ಡಿ ಸರ್ಕಾರಿ ನೌಕರರಿಗೆ ತಕ್ಕದ್ದಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸಿ ಲೋಕೋಪಯೋಗಿ ಇಲಾಖೆ ಸಂಹಿತೆ, ಕರ್ನಾಟಕ ಆರ್ಥಿಕ ಸಂಹಿತೆ ಉಲ್ಲಂಘಿಸುವ ಮೂಲಕ ಕರ್ತವ್ಯ ನಿರ್ವಹಿಸುವಲ್ಲಿ ಬೇಜವಾಬ್ದಾರಿತನವನ್ನು ತೋರಿರುವುದು ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘಿಸುರುವುದು ಸೃಷ್ಟವಾಗಿರುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಾಮಗಾರಿ ಅಪೂರ್ಣವಿದ್ದರೂ ಗುತ್ತಿಗೆದಾರರಿಗೆ ₹1.39 ಕೋಟಿಯನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಎಂಜಿನಿಯರ್ಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಕೆರೆಯ ಸುತ್ತ ಕಬ್ಬಿಣದ ಬೇಲಿ, ಕೆರೆಯ ಕಟ್ಟೆಯ ಮೇಲೆ ಹುಲ್ಲು ಹಾಸು, ರಿವೀಟೆಂಟ್ ಕಾಮಗಾರಿಗಳು ನಡೆಯದಿದ್ದರೂ ಬಿಲ್ಲು ಪಾವತಿ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ. ಕಾಮಗಾರಿ ಅನುಷ್ಠಾನದಲ್ಲಿ ಲೋಪ ಆಗಿದೆ. ಗುತ್ತಿಗೆದಾರರೊಂದಿಗೆ ಎಂಜಿನಿಯರ್ಗಳೂ ಭಾಗಿಯಾಗಿದ್ದಾರೆ’ ಎಂದು ದೂರಲಾಗಿತ್ತು.