
ರಾಮನಗರ : ಹಣ್ಣುಗಳ ರಾಜ ಎನಿಸಿರುವ ಮಾವಿನಹಣ್ಣಿನ ಋತು ಶುರುವಾಗಿದೆ. ಮಳೆ ಬೀಳುತ್ತಿದ್ದಂತೆಯೇ ಜಿಲ್ಲೆಯಲ್ಲಿ ಮಾವಿನ ಕೊಯ್ದು ಶುರುವಾಗಿದೆ. ವಿವಿಧ ಜಾತಿಯ ಕಾಯಿಗಳು ಇಲ್ಲಿನ ಎ.ಪಿ.ಎಂ.ಸಿಯಲ್ಲಿರುವ ಮಾವು ಮಂಡಿಗಳಿಗೆ ಬರತೊಡಗಿವೆ. ಸದ್ಯದಲ್ಲೇ ಹಣ್ಣುಗಳ ಘಮಲು ಇಡೀ ಮಾರುಕಟ್ಟೆಯನ್ನು ಆವರಿಸಲಿದೆ. ಬರ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಕಳೆದ ಸಲ ಶೇ 90ರಷ್ಟು ಬೆಳೆ ಕೈ ಕೊಟ್ಟಿತ್ತು. ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಲ ಮಳೆ ಜೊತೆಗೆ ಬೆಳೆಯೂ ಚನ್ನಾಗಿದ್ದು, ಉತ್ತಮ ಬೆಲೆಯ ನಿರೀಕ್ಷೆ ಮೂಡಿಸಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ರಾಮನಗರ ಜಿಲ್ಲೆಯ ಮಾವು ಮಾರುಕಟ್ಟೆ ಪ್ರವೇಶಿಸುವುದು ವಾಡಿಕೆ. ಬಳಿಕ ಕೋಲಾರ, ಹುಬ್ಬಳ್ಳಿ-ಧಾರವಾಡ ಮಾವು ಮಾರುಕಟ್ಟೆ ಪ್ರವೇಶಿಸುತ್ತವೆ.

ರಾಮನಗರ ಜಿಲ್ಲೆಯ ಬೆಳೆಗಾರರು ಶೇ 90ರಷ್ಟು ಬಾದಾಮಿ ತಳಿಯ ಮಾವು ಬೆಳೆಯುತ್ತಾರೆ. ಉಳಿದ ಶೇ 5ರಷ್ಟು ಸೇಂದೂರ ಬಿಟ್ಟರೆ ರಸಪೂರಿ, ತೋತಾಪುರಿ, ಅಮರಪಾಲಿ, ಮಲ್ಲಿಕಾ ತಳಿಯ ಮಾವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಜಿಲ್ಲೆಯ ಕೆಲವೆಡೆ ಬೆಳೆಯಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಂ.ಎಸ್. ರಾಜು ತಿಳಿಸಿದರು. ತೋಟಗಾರಿಕಾ ಇಲಾಖೆ ಸಿಬ್ಬಂದಿ ಜಿಲ್ಲೆಯ ಹಲವು ತೋಟಗಳಿಗೆ ತೆರಳಿ ಸಮೀಕ್ಷೆ ನಡೆಸಿದ್ದು, ಶೇ 70ರಷ್ಟು ಇಳುವರಿ ಚೆನ್ನಾಗಿರುವುದು ಕಂಡು ಬಂದಿದೆ.

ಇತ್ತೀಚೆಗೆ ಸುರಿದ ಮಳೆಯಿಂದ ಮಾವಿನ ಕಾಯಿಗಳಿಗೆ ಅಷ್ಟಾಗಿ ಹೊಡೆತ ಬಿದ್ದಿಲ್ಲ. ಸದ್ಯ ಮಾರುಕಟ್ಟೆಯ ಕೆಲವೆಡೆ ಸೇಂದೂರ ಹಣ್ಣು ಸಿಗುತ್ತಿವೆ. ಈ ತಿಂಗಳ ಮೂರನೇ ವಾರದಲ್ಲಿ ಬಾದಾಮಿ ಮಾವು ಮಾರುಕಟ್ಟೆ ಪ್ರವೇಶಿಸಲಿದೆ. ಜೂನ್ ಅಂತ್ಯದವರೆಗೆ ಮಾವಿನ ಋತು ಇರಲಿದೆ ಎಂದು ಹೇಳಿದರು. ನೀರಾವರಿ ವ್ಯವಸ್ಥೆ ಮಾವಿನ ತೋಟಗಳಲ್ಲಿ ಫಸಲು ಉತ್ತಮವಾಗಿದ್ದು, ಮಳೆಯಾಶ್ರಿತ ತೋಟಗಳಲ್ಲಿ ಅಷ್ಟಾಗಿ ಹೇಳಿಕೊಳ್ಳುವಂತಿಲ್ಲ. ಈಗಾಗಲೇ ಸುರಿದ ಮಳೆಗೆ ಸಣ್ಣ ಕಾಯಿಗಳು ಉದುರಿವೆ ಎಂದು ಮಾವು ಬೆಳೆಗಾರರಾದ ಶಿವಕುಮಾರ್ ಹಾಗೂ ಕುಮಾರ್ ಹೇಳಿದರು. ಕಾಯಿಗಳು ಮರದಲ್ಲೇ ಹಣ್ಣಾಗಲಿ ಎಂದು ಇನ್ನೂ ಸ್ವಲ್ಪ ದಿನ ಬಿಡಬೇಕು ಎನಿಸುತ್ತದೆ. ಆದರೆ, ಮತ್ತೇನಾದರೂ ಜೋರಾಗಿ ಮಳೆ ಸುರಿದರೆ ಅಥವಾ ಆಲಿಕಲ್ಲು ಮಳೆಯಾದರೆ ಕಾಯಿಗಳು ನೆಲ ಕಚ್ಚಲಿವೆ. ಹಾಗಾಗಿ, ಬಲಿತ ಕಾಯಿಗಳನ್ನು ಕೊಯ್ದು ಮಾಡಿ ಮಂಡಿಗೆ ತಂದು ಹಾಕುತ್ತಿದ್ದೇವೆ ಎಂದು ಅವರು ತಿಳಿಸಿದರು.