
ಮೈಸೂರು: ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಹೈರಿಗೆ ಗ್ರಾಮದಲ್ಲಿ ರೈತ ತಮ್ಮೇಗೌಡ ಅವರಿಗೆ ಸೇರಿದ ಬೀನ್ಸ್ ಮತ್ತು ಅಡಿಕೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ದಿಕ್ಕಾಪಾಲಾಗಿ ಓಡಿದರು.

ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದ ಬಳಿಕ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಮಹಮದ್ ಫಯಾಜ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ನಂದಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಹುಲಿಯನ್ನು ರಾತ್ರಿ 7 ಗಂಟೆ ಆಸುಪಾಸಿನಲ್ಲಿ ಮುತ್ತುರಾಯನ ಹೊಸಹಳ್ಳಿ ವಲಯಕ್ಕೆ ಓಡಿಸುವಲ್ಲಿ ಸಫಲರಾದರು. ಆನೆ ಬಳಸಿ ಹುಲಿ ಬಂಧಿಸುವ ಕಾರ್ಯಾಚರಣೆ ಏ.8ರ ಮಂಗಳವಾರ ಮುಂದುವರೆಯಲಿದೆ. ಈ ಹಿಂದೆ ಗುರುಪುರ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಹುಲಿ ಕಾಣಿಸಿತ್ತು, ಅಲ್ಲಿ ಬೋನು ಇಟ್ಟಿದ್ದು ಹುಲಿ ಬಿದ್ದಿರಲಿಲ್ಲ. ಹುಲಿ ಬಂಧಿಸಿ ಅರಣ್ಯದಂಚಿನ ಗ್ರಾಮಸ್ಥರಿಗೆ ರಕ್ಷಣೆ ನೀಡಲು ಇಲಾಖೆ ಬದ್ಧ ಎಂದು ಡಿಸಿಎಫ್ ತಿಳಿಸಿದರು.