
ಚಾಮರಾಜನಗರ: ಚಾಮರಾಜನಗರದ ಸುಮಾರು 5 ಸಾವಿರ ಎಕರೆ ಪ್ರದೇಶ ತಮಗೆ ಸೇರಿದ್ದು, ಅದನ್ನು ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಅರ್ಜಿ ಸಂಚಲನ ಸೃಷ್ಟಿಸಿದೆ. ಹಲವು ಹಳ್ಳಿಗಳು ಈ ಪ್ರದೇಶದ ವ್ಯಾಪ್ತಿಗೆ ಒಳಪಡಲಿದ್ದು, ಅವುಗಳಲ್ಲಿ ಕೆಲವು ಈಗಾಗಲೇ ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಲು ಸಿದ್ಧವಾಗಿವೆ. ಈ ಹಂತದಲ್ಲಿ ತಕರಾರು ಅರ್ಜಿ ಸಲ್ಲಿಕೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಚಾಮರಾಜನಗರದ ನಾನಾ ಪ್ರದೇಶಗಳಲ್ಲಿ ಮೈಸೂರು ರಾಜ ವಂಶಸ್ಥರಿಗೆ ಸೇರಿರುವ ಅಂದಾಜು 5 ಸಾವಿರ ಎಕರೆ ಖಾಸಗಿ ಆಸ್ತಿಗಳಿವೆ. ಈ ಭೂಮಿಗಳಿಗೆ ಯಾವುದೇ ರೀತಿಯ ಖಾತೆ, ಕಂದಾಯ ಗ್ರಾಮ ಸೇರಿದಂತೆ ಇತರ ಯಾವುದೇ ವಹಿವಾಟು ನಡೆಸಬಾರದೆಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ತಕರಾರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಮೈಸೂರು ಮಹಾರಾಜರು ಮತ್ತು ಭಾರತ ಸರಕಾರದ ನಡುವೆ 1950ರ ಜ.23ರಂದು ನಡೆದ ಒಪ್ಪಂದದ ಪ್ರಕಾರ ಚಾಮರಾಜನಗರ ಜಿಲ್ಲೆಯ ಕೆಲವು ಗ್ರಾಮಗಳ ಸರ್ವೆ ನಂಬರ್, ವಿಸ್ತೀರ್ಣ ಹಾಗೂ ಸ್ವತ್ತುಗಳು ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಒಪ್ಪಂದವಾಗಿದೆ. ಈ ಸ್ವತ್ತುಗಳು ಮಹಾರಾಜರ ಖಾಸಗಿ ಸ್ವತ್ತಾಗಿರುವುದರಿಂದ ಕೂಡಲೇ ನಮ್ಮ ಹೆಸರಿಗೆ ಖಾತೆ ಮಾಡಿಕೊಡಬೇಕು. ಇನ್ನು ಮುಂದೆ ಇಲ್ಲಿ ಕಾಣಿಸಿದ ಸ್ವತ್ತುಗಳಲ್ಲಿ ಯಾವುದೇ ಖಾತೆ, ದುರಸ್ತಿ ಮತ್ತು ವಹಿವಾಟುಗಳನ್ನು ನಡೆಸದಂತೆ ಮಾಡಿರುವ ಈ ಮನವಿಯನ್ನೇ ತಕರಾರು ಅರ್ಜಿ ಎಂದು ಪರಿಗಣಿಸಿ ನಮ್ಮ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಪ್ರಮೋದಾದೇವಿ ಒಡೆಯರ್ ಲಿಖಿತವಾಗಿ ಕೋರಿದ್ದಾರೆ. ತಮಗೆ ದೊರೆತ ಇತ್ತೀಚಿನ ಮಾಹಿತಿಯಂತೆ ಕೆಲವು ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ರಚನೆ ಮಾಡುತ್ತಿರುವುದು ತಿಳಿದು ಬಂದಿದೆ. ಆದರೆ, ಇವು ಮಹಾರಾಜರ ಖಾಸಗಿ ಸ್ವತ್ತಾಗಿರುವುದರಿಂದ ಯಾವುದೇ ರೀತಿಯಲ್ಲೂ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಬಾರದೆಂದು ತಕರಾರು ಅರ್ಜಿ ಸಲ್ಲಿಸುತ್ತಿರುವೆ, ಎಂದು ಪ್ರಮೋದಾದೇವಿ ತಿಳಿಸಿದ್ದಾರೆ.