

ಗದಗ : ಮಳೆಯನ್ನೇ ನಂಬಿ ಕೃಷಿ ಮಾಡುವ ಬಯಲು ಸೀಮೆಯ ರೈತರಿಗೆ ಕೃಷಿಹೊಂಡಗಳು ವರದಾನವಾಗಿವೆ. 2024-25ನೇ ಸಾಲಿನಲ್ಲಿ ಲಕ್ಷ್ಮೀಶ್ವರ ತಾಲ್ಲೂಕಿನಲ್ಲಿ ಒಟ್ಟು 56 ಕೃಷಿ ಹೊಂಡಗಳನ್ನು ಕೃಷಿ ಇಲಾಖೆಯಿಂದ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರನ್ನು ಸಂಗ್ರಹಿಸಿ ಮಳೆ ಕೈಕೊಟ್ಟಾಗ ಆ ನೀರನ್ನು ಬೆಳೆಗಳಿಗೆ ಕೊಟ್ಟು ಒಣಗುವ ಬೆಳೆಯನ್ನು ಕಾಪಾಡಿಕೊಳ್ಳಲು ಸಾಧ್ಯ. ಅಲ್ಲದೆ ಕೃಷಿಹೊಂಡಗಳ ನಿರ್ಮಾಣದಿಂದ ಅಂತರ್ಜಲಮಟ್ಟವೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಕೃಷಿಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡಿದೆ. ಹೆಚ್ಚಾಗಿ 21 ಮೀಟರ್ ಅಗಲ, 21 ಮೀಟರ್ ಉದ್ದ ಮತ್ತು 3 ಮೀಟರ್ ಎತ್ತರಕ್ಕೆ ಕೃಷಿ ಹೊಂಡಗಳು ನಿರ್ಮಾಣಗೊಂಡಿವೆ. ಉಳಿದಂತೆ ಜಮೀನು ಕಡಿಮೆ ಇರುವ ರೈತರು 18X18X3 ಮತ್ತು 15X15X3 ಅಳತೆಯ ಕೃಷಿಹೊಂಡಗಳನ್ನೂ ನಿರ್ಮಿಸಲಾಗಿದೆ.