
ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ ಅನುತ್ತೀರ್ಣಳಾದಾಗ ಬದುಕು ಭಾರವಾಗಿತ್ತು. ಪಾಲಕರ ಹೊರತು ಯಾರೊಬ್ಬರೂ ನನ್ನೊಂದಿಗೆ ಇರಲಿಲ್ಲ. ಮನದಾಳದ ಆಸಕ್ತಿಯನ್ನು ಅಚಲಗೊಳಿಸಿ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಪಡೆದೆ. ಅಂದುಕೊಂಡಿದ್ದನ್ನು ಸಾಧಿಸಿದ ತೃಪ್ತಿ ಸಿಕ್ಕಿತು. ಹೀಗೆ ಮಾತನಾಡುತ್ತ ಭಾವುಕರಾದವರು ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕ ಪಡೆದ ಐ.ಕೆ.ರಿಯಾ.

j3tvkannada
ಪಾಲಕರ ಒತ್ತಡಕ್ಕೆ ಮಣಿದು ಪದವಿಪೂರ್ವ ಹಂತದಲ್ಲಿ ಸೋಲು ಕಂಡಿದ್ದ ಅವರು ಗೆಲುವಾಗಿ ಪರಿವರ್ತನೆ ಮಾಡಿಕೊಂಡ ಬಗೆಯೇ ಸ್ಫೂರ್ತಿದಾಯಕವಾಗಿದೆ. ಹರಿಹರದ ಎಚ್.ಕುಬೇರ ನಾಯ್ಕ ಹಾಗೂ ರಶ್ಮಿ ದಂಪತಿಯ ಪುತ್ರಿ ಐ.ಕೆ.ರಿಯಾ, ದಾವಣಗೆರೆ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದ ಚಿನ್ನದ ವಿದ್ಯಾರ್ಥಿನಿ. ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ಆಗಿರುವ ಕುಬೇರ ನಾಯ್ಕ ಅವರಿಗೆ ಪುತ್ರಿ ವೈದ್ಯೆಯಾಗಬೇಕೆಂಬ ಕನಸಿತ್ತು. ತಂದೆಯ ಒತ್ತಾಯಕೆ ಮಣಿದು ಪ್ರಥಮ ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದಿದ್ದರು. ಆದರೆ, ರಸಾಯನ ವಿಜ್ಞಾನದಲ್ಲಿ ಉತ್ತೀರ್ಣರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಅದು ತುಂಬಾ ಕಷ್ಟದ ಸಮಯವಾಗಿತ್ತು. ಬದುಕಿನಲ್ಲಿ ಸೋಲು ಕಂಡ ಭಾವ ಆವರಿಸಿತ್ತು. ಆಗ ತಂದೆಯೇ ಮತ್ತೆ ಸ್ಪೂರ್ತಿ ತುಂಬಿದರು. ಗಣಿತದ ಕುರಿತು ಇದ್ದ ಆಸಕ್ತಿ ವಾಣಿಜ್ಯ ವಿಭಾಗಕ್ಕೆ ಕರೆತಂದಿತು. ವಿಜ್ಞಾನ ವಿಭಾಗವನ್ನು ಕೈಬಿಟ್ಟು ವಾಣಿಜ್ಯ ವಿಭಾಗದಲ್ಲಿ ಮತ್ತೊಮ್ಮೆ ಪ್ರಥಮ ಪಿಯುಗೆ ಪ್ರವೇಶ ಪಡೆದೆ. ಅಲ್ಲಿಂದ ಬದುಕು ಮತ್ತೊಂದು ದಿಕ್ಕಿಗೆ ಹೊರಳಿತು’ ಎಂದಾಗ ಕಣ್ಣಾಲಿಗಳು ತುಂಬಿದ್ದವು.
ರಿಯಾ ನಿತ್ಯ ಹರಿಹರದಿಂದ ತೋಳಹುಣಸೆಯ ಶಿವಗಂಗೋತ್ರಿಗೆ ಬರುತ್ತಿದ್ದರು. ಬೆಳಿಗ್ಗೆ 10ಕ್ಕೆ ಆರಂಭವಾಗುವ ತರಗತಿಗೆ ಹಾಜರಾಗಲು ಎರಡು ಗಂಟೆ ಮೊದಲೇ ಮನೆಯಿಂದ ಹೊರಡಬೇಕಿತ್ತು. ದಾವಣಗೆರೆಗೆ ಬಂದು ಮತ್ತೊಂದು ಬಸ್ ಹಿಡಿದು ವಿಶ್ವವಿದ್ಯಾಲಯ ತಲುಪಬೇಕಿತ್ತು. ರಿಯಾ ನಿತ್ಯ 4 ಗಂಟೆಯನ್ನು ಸಂಚಾರದಲ್ಲಿಯೇ ಕಳೆಯುತ್ತಿದ್ದರು. ಬೆಳಿಗ್ಗೆ 8ಕ್ಕೆ ಮನೆ ಬಿಡುತ್ತಿದ್ದ ನಾನು ಸಂಜೆ 6ಕ್ಕೆ ಮರಳುತ್ತಿದ್ದೆ. ಒಂದು ಗಂಟೆ ವಿಶ್ರಾಂತಿ ಪಡೆದು ಅಧ್ಯಯನದಲ್ಲಿ ತೊಡಗುತ್ತಿದ್ದೆ. ಬಸ್ ವ್ಯವಸ್ಥೆ ಚೆನ್ನಾಗಿದ್ದಿದ್ದರೆ ಅನುಕೂಲವಾಗುತ್ತಿತ್ತು. ಸಂಸದರು, ಶಾಸಕರು ಇತ್ತ ಗಮನ ಹರಿಸಿದರೆ ವಿದ್ಯಾರ್ಥಿಗಳಿಗೆ ಒಳಿತಾಗುತ್ತದೆ. ವಾಣಿಜ್ಯಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ಪ್ರಾಧ್ಯಾಪಕಿಯಾಗಬೇಕು ಎಂಬ ಹಂಬಲ ನನ್ನದು ಎಂದು ಸಂತಸ ಹಂಚಿಕೊಂಡರು.