
ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರದ ಮೊಬೈಲ್ ಬಿಡಿಭಾಗ ತಯಾರಿಸುವ ಫಾಕ್ಸ್ ಕಾನ್ ಕಂಪನಿಯ ಕಲುಷಿತ ನೀರು ತಾಲ್ಲೂಕಿನ ಕೊನಘಟ್ಟ ಕೆರೆಗೆ ಸೇರುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಧೀರಜ್ ಮುನಿರಾಜು ಕಂಪನಿಯ ಸ್ಥಳೀಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಫಾಕ್ಸ್ ಕಾನ್ ಕಂಪನಿಯಿಂದ ಹೊರ ಬರುವ ಕಲುಷಿತ ನೀರು ಸಂಗ್ರಹಣೆಗಾಗಿ ನಿರ್ಮಾಣ ಮಾಡಿರುವ ಕುಂಟೆಯಲ್ಲಿ ನೀರಿನ ಸಂಗ್ರಹ ಮಿತಿ ಮೀರಿ ಕಟ್ಟೆ ಹೊಡೆದು ರಾಜಕಾಲುವೆ ಮೂಲಕ ಕೊನಘಟ್ಟ ಕೆರೆಗೆ ಹರಿಯುತ್ತಿದೆ. ಹೊಡೆದು ಹೋಗಿರುವ ಕುಂಟೆಯನ್ನು ಬಂದ್ ಮಾಡುವಂತೆ ಶಾಸಕರು ಹಾಗೂ ಅಧಿಕಾರಿಗಳು ಸೂಚಿಸಿದರೂ ಸಹ ಫಾಕ್ಸ್ ಕಾನ್ ಕಂಪನಿ ಕಡೆಯಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ. ಅಲ್ಲದೆ ಕುಂಟೆಯಿಂದ ಹೊರಹೋಗುತ್ತಿರುವ ಕಲುಷಿತ ನೀರು ಬಂದ್ ಮಾಡುವವರೆಗೂ ಇಲ್ಲಿಯೇ ಇರುವುದಾಗಿ ಶಾಸಕರು ತಿಳಿಸುತ್ತಿದ್ದಂತೆ ಹೊಡೆದು ಹೋಗಿದ್ದ ಕುಂಟೆಯ ಕಟ್ಟೆಯನ್ನು ಜೆಸಿಬಿ ಯಂತ್ರದ ಮೂಲಕ ಮಣ್ಣು ಹಾಕಿ ನೀರು ಹೊರ ಬಾರದಂತೆ ಬಂದ್ ಮಾಡಲಾಯಿತು. ಕಲುಷಿತ ನೀರು ಮತ್ತೆ ಕೆರೆಗೆ ಹರಿದು ಬಂದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಈ ಸಂದಂರ್ಭದಲ್ಲಿ ತಹಶೀಲ್ದಾರ್ ವಿಭಾವಿದ್ಯಾ ರಾಠೋಡ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಮುನಿರಾಜು, ಕೊನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ, ಪಿಡಿಓ ರಶ್ಮಿ ಹಾಗೂ ಕೊನಘಟ್ಟ ಗ್ರಾಮಸ್ಥರು ಇದ್ದರು.