
ಹಾವೇರಿ: ವ್ಯವಸಾಯ ಎಂದರೆ ಮೂಗು ಮುರಿಯುವ ಈ ಹೊತ್ತಿನಲ್ಲಿ, ಸಮಗ್ರ ಕೃಷಿಯಿಂದ ಅಧಿಕ ಲಾಭಗಳಿಸಿ ಬದುಕು ಕಟ್ಟಿಕೊಂಡ ತಾಲ್ಲೂಕಿನ ಮಾಗೋಡ ಗ್ರಾಮದ ಉಮೇಶ ಹಾಗೂ ರಮೇಶ ಮುದಿಗೌಡ್ರ ಸಹೋದರರು ಇತರರಿಗೆ ಮಾದರಿಯಾಗಿದ್ದಾರೆ.

ರೈತ ಉಮೇಶ ಶೇಖಪ್ಪ ಮುದಿಗಗೌಡ್ರ ತಮ್ಮ ಮೂರು ಎಕರೆ ಜಮೀನಿನಲ್ಲಿ 30 ಗುಂಟೆಯಲ್ಲಿ ಹೀರೆಕಾಯಿ ಬೆಳೆದು ದಾವಣಗೆರೆ, ರಾಣೆಬೆನ್ನೂರು, ಹರಿಹರ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಖರ್ಚು ತೆಗೆದು 60 ಸಾವಿರ ನಿವ್ವಳ ಲಾಭಗಳಿಸಿದ್ದಾರೆ. ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ಕೆ.ಜಿ. ಹೀರೆಕಾಯಿ ದರ 80 ಇತ್ತು. ಹೀರೆಕಾಯಿ ಕೈ ಹಿಡಿದಿದೆ. ಕಡಿಮೆ ಅವಧಿ, ಅಲ್ಪ ಖರ್ಚಿನಲ್ಲಿ ಉತ್ತಮ ಆದಾಯ ತರುವ ಹೀರೆಕಾಯಿ ಬೆಳೆಯಲು ಪ್ರೇರಣೆ ಸಿಕ್ಕಿತು. ಆರಂಭದಲ್ಲಿ ಎಲ್ಲರೂ ನಿರಾಶಾದಾಯಕ ಮಾತು ಆಡಿದ್ದರು. ಮಾರುಕಟ್ಟೆ ದರ ನೋಡಿದ ಪ್ರತಿಯೊಬ್ಬರೂ ಈಗ ಬೆನ್ನು ತಟ್ಟುತ್ತಿದ್ದಾರೆ. ಈ ವರ್ಷ ನಿರೀಕ್ಷೆ ಮೀರಿ ಲಾಭ ಸಿಕ್ಕಿದೆ. ಸಹೋದರ ರಮೇಶ ಮತ್ತು ಕುಟುಂಬದ ನೆರವಿನಿಂದ ಇದು ಸಾಧ್ಯವಾಯಿತು ಎಂದು ಉಮೇಶ ಮುದಿಗಗೌಡ್ರ ಹೇಳಿದರು.