
ಚಿಕ್ಕಮಗಳೂರು: ನರಸಿಂಹರಾಜಪುರ ತಾಲ್ಲೂಕಿನ ಭದ್ರಾ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಿರುವ ಜಾಗದಲ್ಲಿ ಪ್ರವಾಸಿ ತಾಣವೊಂದನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಹಿನ್ನೀರಿನ ಪಕ್ಕದಲ್ಲೇ ಇರುವ 3 ಎಕರೆಯನ್ನು ಪ್ರವಾಸೋದ್ಯಮ ಇಲಾಖೆಗೆ ಕಂದಾಯ ಇಲಾಖೆ ವರ್ಗಾಯಿಸಿದೆ.

ಎನ್.ಆರ್.ಪುರ ತಾಲ್ಲೂಕಿನವರೇ ಆದ ಕೆಎಸ್ಟಿಡಿಸಿ ಅಧ್ಯಕ್ಷ ಎಂ.ಶ್ರೀನಿವಾಸ್ ಅವರು ಈ ಯೋಜನೆಗೆ ಆಸಕ್ತಿ ವಹಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದರು. ‘ಜಲಾಶಯದ ಹಿನ್ನೀರಿನ ವಿಹಂಗಮ ನೋಟವನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ಜಲಸಾಹಸ ಕ್ರೀಡೆ, ಹೋಟೆಲ್, ಕೆಫೆಟೇರಿಯಾ ಸೇರಿ ಇನ್ನಿತರ ಪ್ರವಾಸೋದ್ಯಮ ಚಟುವಟಿಕೆ ಕೈಗೊಳ್ಳಲು ಸೂಕ್ತವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದರು. ಎನ್.ಆರ್.ಪುರ ತಾಲ್ಲೂಕಿಗೂ ಪ್ರವಾಸಿ ತಾಣವನ್ನು ವಿಸ್ತರಿಸಲು ಇಲಾಖೆ ಯೋಜನೆ ರೂಪಿಸಿದೆ. ಕೆಎಸ್ಟಿಡಿಸಿ (ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಮೂಲಕ ರೆಸಾರ್ಟ್ ಮಾದರಿಯಲ್ಲಿ ಐಷಾರಾಮಿ ಹೋಟೆಲ್, ಥೀಮ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ.