
ಚಾಮರಾಜನಗರ: ತಾಲೂಕಿಗೆ ಹತ್ತಿರವಿರುವ ಊಟಿ ಸುತ್ತಲಿನ ಪ್ರವಾಸಿ ತಾಣಗಳಿಗೆ ಮಳೆ ಕಾರಣ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವ ಜತೆಗೆ ಬಂಡೀಪುರ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲೂ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಊಟಿ ಸುತ್ತಲಿನ ಪ್ರವಾಸಿ ತಾಣಗಳಾದ ದೊಡ್ಡಬೆಟ್ಟ, ಫೈನ್ಫಾರೆಸ್ಟ್, ಲ್ಯಾಂಬ್ಸ್ರಾಕ್, ಅವಲಂಚಿ, 9ನೇ ಮೈಲ್ ಶೂಟಿಂಗ್ ಪಾಯಿಂಟ್, ಬೋಟ್ಹೌಸ್, ಪೈಕಾರಗಳು ಎತ್ತರ ಮತ್ತು ಕಡಿದಾದ ಪ್ರದೇಶದಲ್ಲಿವೆ.

j3tvkannada
ಹೀಗಾಗಿ ಭೂಕುಸಿತ, ಮಳೆ ನೀರಿನ ಹರಿವು, ರಸ್ತೆಗೆ ಮರಗಳು ಉರುಳಿ ಬೀಳುವುದು ಇತರೆ ಅಪಾಯಗಳ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಈ ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬಾರದಂತೆ ನಿರ್ಬಂಧ ವಿಧಿಸಿದೆ. ಅಲ್ಲದೇ ಪ್ರವೇಶಕ್ಕೆ ಇ ಪಾಸ್ ಕೊಡುವುದನ್ನು ನಿಲ್ಲಿಸಿದೆ. ಹೀಗಾಗಿ ವಿಷಯ ತಿಳಿದು ಮಳೆ ಮುಗಿಯುವ ತನಕ ಜಿಲ್ಲೆಯ ಪ್ರವಾಸಿಗರು ಅಲ್ಲಿಗೆ ತೆರಳದಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ತಮಿಳುನಾಡಿನ ಊಟಿ ಮತ್ತು ಸುತ್ತಲಿನ ಪ್ರವಾಸಿ ತಾಣಗಳು, ಮಧುಮಲೈ ಅರಣ್ಯ ಪ್ರದೇಶ, ಕೊಡೈಕೆನಾಲ್ಗೆ ಹೋಗುವ ಪ್ರವಾಸಿಗರು ತಾಲೂಕಿನ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766 ರ ಮೂಲಕ ಸಂಚರಿಸಬೇಕು. ಹೀಗಾಗಿ ತಮಿಳುನಾಡಿಗೆ ಹೋಗುವ ಅಥವಾ ಹಿಂದಿರುಗುವ ಸಂದರ್ಭದಲ್ಲಿ ಬಂಡೀಪುರ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವುದು ಸಾಮಾನ್ಯವಾಗಿತ್ತು.

j3tvkannada
ಮಳೆ ಕಾರಣ ಸಫಾರಿ ಸಂದರ್ಭದಲ್ಲಿ ಪ್ರಾಣಿಗಳು ಕಾಣಸಿಗುವುದಿಲ್ಲ. ಸಫಾರಿ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗುತ್ತದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸಮುದ್ರಮಟ್ಟದಿಂದ 4770 ಅಡಿ ಎತ್ತರದಲ್ಲಿದ್ದು, ಮಳೆ ಮೋಡಗಳು ದೇವಾಲಯ ಮತ್ತು ಸುತ್ತಲಿನ ಪ್ರದೇಶವನ್ನು ತಾಕಿಕೊಂಡು ಹೋಗುವ ಕಾರಣ ಜೋರು ಮಳೆಯು ಇರುತ್ತದೆ. ಮೇ 25,26 ರಂದು ಜೋರು ಮಳೆ ಹಿನ್ನೆಲೆಯಲ್ಲಿ ಪ್ರವಾಸಿಗರು ಮಳೆಯಲ್ಲಿ ತೋಯ್ದಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು.
ಮೈಸೂರಿನ ಟ್ರಾವೆಲ್ ಏಜೆನ್ಸಿಯವರು ರಾಜ್ಯ ಮತ್ತು ದೇಶದ ನಾನಾ ಕಡೆಗಳಿಂದ ಬರುವ ಪ್ರವಾಸಿಗರನ್ನು ಊಟಿ ಭಾಗದ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುತ್ತಿದ್ದವು. ಪ್ರವಾಸಿಗರ ನಿರ್ಬಂಧದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಇರಲಿಲ್ಲ. ಪ್ರವಾಸಿ ವಾಹನಗಳಿಗೆ ತಾಲೂಕಿನ ಹಲವು ಮಂದಿ ಚಾಲಕ ಸಹಾಯಕರಾಗಿ ತೆರಳುತ್ತಿದ್ದು ಕೆಲಸಕ್ಕೆ ಬಿಡುವು ಎಂದು ಚಾಲಕ ಪಿ.ಎಸ್.ಮಹೇಶ್ ಮತ್ತು ರಮೇಶ್ ತಿಳಿಸಿದರು.
ತಮಿಳುನಾಡು ಭಾಗದಲ್ಲಿ ಹೆಚ್ಚಿನ ಪ್ರವಾಸಿ ತಾಣಗಳಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಬರುವಿಕೆ ಆಧರಿಸಿ ಅಲ್ಲಿನ ವ್ಯಾಪಾರ ವಹಿವಾಟು ನಡೆಯುತ್ತವೆ. ಪ್ರವಾಸಿಗರ ನಿರ್ಬಂಧದ ಅಲ್ಲಿ ವ್ಯಾಪಾರ ವಹಿವಾಟು ಕುಸಿತವಾಗಿದೆ ಎಂದು ಸ್ನೇಹಿತರೊಬ್ಬರು ತಿಳಿಸಿದರು ಎಂದು ಹೋಟೆಲ್ ಉದ್ಯಮಿ ತಿಳಿಸಿದರು. ಜಿಲ್ಲೆಯ ಜನರು ತಮಿಳುನಾಡಿನ ಊಟಿ ಭಾಗದ ಪ್ರವಾಸಿ ತಾಣಗಳಿಗೆ ತೆರಳದಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿರುವ ವಿಷಯ ತಿಳಿದಿದೆ. ನಮಗೆ ಪರಿಶೀಲನೆ ಅಥವಾ ಇನ್ನಾವುದೇ ಕ್ರಮಗಳ ಬಗ್ಗೆ ಆದೇಶವಿಲ್ಲ ಎಂದಿದ್ದಾರೆ ಜಯಕುಮಾರ್ ಪೊಲೀಸ್ ಇನ್ಸ್ಪೆಕ್ಟರ್ ಗುಂಡ್ಲುಪೇಟೆ.