
ಚಿಕ್ಕಬಳ್ಳಾಪುರ: ಜಮೀನು ವಿವಾದದ ಹಿನ್ನಲೆ ಯುವಕನೊಬ್ಬನನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಲಾಗಿದ್ದು, ಮಗನ ಈ ಸ್ಥಿತಿಯನ್ನು ಕಂಡ ತಾಯಿ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆಯು ತಾಲೂಕಿನ ಕೋರೇನಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ.
j3tvkannada.in
ಕೋರೇನಹಳ್ಳಿಯ ಯಶೋಧಮ್ಮ ಮೃತ ತಾಯಿಯಾಗಿದ್ದಾಳೆ. ಆಕೆಯ ಪುತ್ರ ನವೀನ್ ಎಂಬ ಯುವಕ ಬುಧವಾರ ಸಂಜೆ ಗ್ರಾಮದ ಹಾಲಿನ ಡೇರಿಗೆ ಹಾಲು ಹಾಕಲು ಹೊರಟಿದ್ದ. ಅಷ್ಟರಲ್ಲಿ ಹಿಂದಿನಿಂದ ಬಂದ ಗ್ರಾಮದ ಶಿವಣ್ಣ ಅಲಿಯಾಸ್ ಶಿವಶಂಕರ ರೆಡ್ಡಿ ಎಂಬ ವ್ಯಕ್ತಿ ನವೀನ್ ಮೇಲೆ ಮಚ್ಚು ಬೀಸಿದ್ದಾನೆ. ಅಷ್ಟರಲ್ಲಿ ನವೀನ್ ತಪ್ಪಿಸಿಕೊಂಡು ಓಡಿದ್ದಾನೆ. ಆದರೂ ಬೀಡದ ಶಿವಣ್ಣ ನವೀನ್ ಕುತ್ತಿಗೆಗೆ ಮಚ್ಚು ಬೀಸಿದ್ದಾನೆ. ಆದರೂ ನವೀನ್ ತಪ್ಪಿಸಿಕೊಂಡು ಹೋಗಿ ಸ್ಥಳೀಯ ನಿವಾಸಿ ಗಂಗಣ್ಣ ಎಂಬುವವರ ಮನೆಗೆ ನುಗ್ಗಿ ಬಾಗಿಲು ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ.
ಈ ಘಟನೆ ತಿಳಿದು ಮಗನ ರಕ್ಷಣೆಗೆ ಧಾವಿಸಿದ ನವೀನ್ ತಾಯಿ ಯಶೋಧಮ್ಮನ ಮೇಲೂ ಹಲ್ಲೆ ಮಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ. ತಾಯಿ ಮಗ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಕರೆ ತರಲಾಗಿದೆ. ಆದರೆ ಆಸ್ಪತ್ರೆಗೆ ಬರುವುಷ್ಟರಲ್ಲಿ ತಾಯಿ ಯಶೋಧಮ್ಮ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡೀಕರಿಸಿದ್ದಾರೆ.
ಗಾಯಗೊಂಡಿರುವ ನವೀನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಈ ಘಟನೆಗೆ ಜಮೀನು ವಿವಾದವೇ ಮೂಲ ಕಾರಣ ಎನ್ನಲಾಗಿದೆ. ಯಶೋಧಮ್ಮ ಮೃತ ಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಅವರ ಪುತ್ರಿಯರ ಗೋಳಾಟ ಮುಗಿಲು ಮುಟ್ಟಿತ್ತು. ಘಟನೆ ನಂತರ ಆರೋಪಿ ಶಿವಣ್ಣ ಅಲಿಯಾಸ್ ಶಿವಶಂಕರ ರೆಡ್ಡಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಪೆರೇಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಮತ್ತು ತನಿಖೆ ಮುಂದುವರೆದಿದೆ.