
ಉಡುಪಿ(ಕುಂದಾಪುರ): ನಗರದ ವಡೇರಹೋಬಳಿ ಗ್ರಾಮದ ವಿಠಲವಾಡಿ, ಜೆಎಲ್ಬಿ ರಸ್ತೆಯ ನಿವಾಸಿ ಹೀನಾ ಕೌಸರ್(೩೨) ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಇದುವರೆಗೂ ಅವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಜೆ.ಎಲ್.ಬಿ ರಸ್ತೆಯ ಮನೆಯಲ್ಲಿ ತಾಯಿ ಹಾಗೂ ತನ್ನಿಬ್ಬರು ಮಕ್ಕಳೊಂದಿಗೆ ವಾಸವಿದ್ದ ಹೀನಾ ಕೌಸರ್ ಜೂ. ೯ ರ ಬೆಳಗ್ಗೆ ೫ ಗಂಟೆಗೆ ಮನೆಯಿಂದ ಹೊರಟಿದ್ದಾರೆ. ಸ್ಕೂಟಿಯನ್ನು ಕೋಡಿಯ ಸೇತುವೆ ಬಳಿ ಇಟ್ಟು, ಅದರಲ್ಲಿ ಡೆತ್ ನೋಟ್ ಕೂಡ ಬರೆದು ಚಪ್ಪಲಿ ಸಹ ಅಲ್ಲಿಯೇ ಬಿಟ್ಟು, ಪಂಚಗಂಗಾವಳಿ ನದಿಗೆ ಹಾರಿರಬಹುದು ಎಂದು ಬಿಂಬಿಸುವಂತೆ ಕಥೆ ಹೆಣೆದಿದ್ದಾರೆ ಎನ್ನಲಾಗಿದೆ.

ಪೊಲೀಸರು ಹೀನಾ ಕೌಸರ್ ಪತ್ತೆಗಾಗಿ ಎಲ್ಲ ಆಯಾಮಗಳಿಂದಲೂ ಹುಡುಕಾಟ ನಡೆಸುತ್ತಿದ್ದು, ಆದರೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆಕೆಯ ಮೊಬೈಲ್ ಸಹ ಸ್ವಿಚ್ಆಫ್ ಆಗಿದೆ. ಪತ್ನಿ ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿ ಮಹಮ್ಮದ್ ಇಕ್ಬಾಲ್ ಊರಿಗೆ ಮರಳಿದ್ದಾರೆ.

ಆಕೆಯ ಪತ್ತೆಗಾಗಿ ಪೊಲೀಸರು ಹಾಗೂ ಅಗ್ನಿ ಶಾಮಕ ದಳದವರು ದಿನವಿಡೀ ನದಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ನಿಜಕ್ಕೂ ಆಕೆ ನದಿಗೆ ಹಾರಿಲ್ಲ, ಅದು ಸುಳ್ಳು ಕಥೆ ಹೆಣೆದಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಕಾಕತಾಳಿಯವೆಂಬಂತೆ ಜೂ. ೯ ರಂದೇ ಹೆಮ್ಮಾಡಿಯ ಸಂತೋಷ್ ನಗರ ನಿವಾಸಿ ಸಾಹಿಲ್ (೨೭) ಎಂಬಾತ ಕೂಡ ನಾಪತ್ತೆಯಾಗಿದ್ದಾನೆ. ಆತನಿಗಾಗಿಯೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ, ಆದರೆ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.