
ಚಿಕ್ಕಮಗಳೂರು: ಪೊಲೀಸರು ಅಂದ್ರೆ ಒಂದೆಡೆ ಭಯ ಹಾಗೆಯೇ ಇನ್ನೊಂದೆಡೆ ಹೆಮ್ಮೆ ಆಗುತ್ತದೆ. ಆದರೂ ಪೊಲೀಸರು ಮಾನವೀಯತೆ ಇಲ್ಲದವರು, ದುಡ್ಡಿಗೆ ಅಸೆ ಪಡುತ್ತಾರೆ ಅನ್ನೋ ಕುಟುಕು ಮಾತುಗಳು ಕೆಲವೊಂದು ಕಡೆ ಹಾಗೆಯೇ ಇವೆ. ಆದರೆ ಕಾಫಿನಾಡಿನ ಈ ಸಬ್ ಇನ್ಸ್ ಪೆಕ್ಟರ್ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗಾದರೆ ಯಾರೂ ಈ ಇನ್ಸ್ ಪೆಕ್ಟರ್? ಇವರು ಮಾಡಿದ ಕೆಲಸ ಆದರೂ ಏನು?

j3tvkannada
ಇವತ್ತಿನ ಕಾಲಕ್ಕೆ ಮಾನವಿಯತೆ ಅನ್ನೋದು ಮರಿಚಿಕೆ ಬಿಡಿ, ಯಾರು ಏನಾದರೂ ಮಾಡಿಕೊಳ್ಳಿ ನಂಗೇನು ಅನ್ನೋರೆ ಜಾಸ್ತಿ, ಅದರಲ್ಲೂ ಪೊಲೀಸರ ವಿಚಾರಕ್ಕೆ ತೆಗೆದುಕೊಂಡರೆ ಜನ ಸ್ನೇಹಿಯಾಗಿ ಪೊಲೀಸ್ ವ್ಯವಸ್ಥೆ ಕಾರ್ಯ ನಿರ್ವಹಿಸುವ ಅವಕಾಶ ಹಾಗೂ ವಾತಾವರಣ ಈ ಕಾಲಕ್ಕೆ ತೆರೆದುಕೊಂಡಿದೆ. ಆದರೂ ಪರಸ್ಪರ ಅಪನಂಬಿಕೆಯಿಂದ ಆ ವ್ಯವಸ್ಥೆ ತೀವ್ರಗತಿಯಲ್ಲಿ ಮುನ್ನುಗ್ಗುತ್ತಿಲ್ಲ. ನಾವು ಈಗ ಹೇಳ ಹೊರಟಿರುವ ವಿಷಯ ಸ್ವಲ್ಪ ಭಿನ್ನ ನಾಗರಿಕರು ಹಾಗೂ ಪೊಲೀಸ್ ನಡುವೆ ಸೇತುವೆಯಾಗಬಲ್ಲ ವಿಷಯ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಕುದುರೆಗುಂಡಿಯಲ್ಲಿ ವಯಸ್ಸಾದ ಅಜ್ಜಿ ಒಬ್ಬರು ತನ್ನ ಬಾಗಿದ ಬೆನ್ನಿನಿಂದ ರಸ್ತೆ ದಾಟಲು ಕಷ್ಟ ಪಡುತ್ತಾ ಇದ್ದರು, ಅದೇ ಸಮಯಕ್ಕೆ ತಮ್ಮ ಇಲಾಖೆಯ ಕಾರಿನಲ್ಲಿ ಸಂಚರಿಸುತ್ತಿದ್ದ ಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಸವರಾಜ್ ಅಜ್ಜಿಯನ್ನ ನೋಡಿದ ಕೂಡಲೇ ಬಳಿಗೆ ಬಂದು ಮಾತಾಡಿಸಿದ್ದಾರೆ. ಅಲ್ಲದೇ ಅಜ್ಜಿಯನ್ನ ಸುರಕ್ಷಿತವಾಗಿ ರಸ್ತೆ ದಾಟಿಸಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಜೊತೆಗೆ ಕುದುರೆಗುಂಡಿಯಲ್ಲಿ ವಾಹನ ಸಂಚಾರ ಜಾಸ್ತಿ ಇದ್ದಿದ್ದರಿಂದ ಅನಾಹುತ ಆಗಬಹುದು ಎಂದು ಯೋಚಿಸಿ ಸಬ್ಇನ್ಸ್ ಪೆಕ್ಟರ್ ತಾವೇ ಅಜ್ಜಿಯ ಕೈ ಹಿಡಿದು ರಸ್ತೆ ದಾಟಿಸಿ ಅಜ್ಜಿಯನ್ನ ಉಪಚರಿಸಿ ಧನ ಸಹಾಯ ಮಾಡಿ ಆಟೋದಲ್ಲಿ ಹೋಗುವಂತೆ ಮನವಿ ಮಾಡಿದ್ದಾರೆ.
ಈ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಕಳುಹಿಸಿದ್ದಾರೆ, ಇದಲ್ಲದೆ ಹಲವಾರು ವಿಚಾರದಲ್ಲಿ ಕೊಪ್ಪ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಬಸವರಾಜ್ ಮಾನವೀಯತೆ ಮೆರೆದಿದ್ದಾರೆ. ಒಟ್ಟಿನಲ್ಲಿ ಸಹಾಯ ಮಾಡುವ ವಿಷಯ ಬಂದಾಗ ದೊಡ್ಡದು ಸಣ್ಣದು ಎನ್ನುವ ಮಾತಿಲ್ಲ ಈ ರೀತಿಯೂ ಸಹಾಯ ಮಾಡಬಹುದು ಎಂದು ಪೊಲೀಸ್ ತೋರಿಸಿಕೊಟ್ಟಿದ್ದಾರೆ. ತಮ್ಮ ಕೆಲಸ ಸಾಗಿದರೆ ಸಾಕು ಅನ್ನೋ ಗಡಿಬಿಡಿ ಕಾಲದಲ್ಲಿ ಕೊಪ್ಪ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಕಾರ್ಯ ಮಲೆನಾಡಲ್ಲಿ ಭಾರಿ ಮೆಚ್ಚುಗೆ ಪಾತ್ರವಾಗಿದೆ.