
ಚಿಕ್ಕಮಗಳೂರು: ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡಿದ ಮಹಾ ಕುಂಭಮೇಳದ ಸಂದರ್ಭದಲ್ಲಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಕುಟುಂಬದವರಿಂದ ಬೇರ್ಪಟ್ಟು ನಾಪತ್ತೆಯಾಗಿದ್ದ ಕರ್ನಾಟಕದ ಅರ್ಚಕರೊಬ್ಬರು ಇದೀಗ ಸುಮಾರು 5 ತಿಂಗಳ ನಂತರ ಸಿನಿಮೀಯವಾಗಿ ಮನೆಗೆ ಮರಳಿದ್ದಾರೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ತಂಗಲಿ ಗ್ರಾಮದ ಚೆನ್ನಕೇಶವ ದೇವಾಲಯದ ಅರ್ಚಕರಾಗಿರುವ ನರಸಿಂಹ ಮೂರ್ತಿ (75) ಇದೀಗ ಮನೆಗೆ ಮರಳಿದ್ದು, ಕುಟುಂಬದವರಲ್ಲಿ ಸಂತಸ ಮೂಡಿಸಿದೆ. ಈ ಬಗ್ಗೆ ನರಸಿಂಹ ಮೂರ್ತಿ ಪುತ್ರ ಬದರಿನಾಥ್ ಮಾತನಾಡಿದ್ದು, ತಂದೆಯನ್ನು ರಕ್ಷಿಸಿ ಚಿಕಿತ್ಸೆ ನೀಡಿ ಮರಳಿ ಕಳುಹಿಸಿಕೊಡುವಲ್ಲಿ ಮುಂಬೈನ ಶ್ರದ್ಧಾ ರೀಹ್ಯಾಬಿಲಿಟೇಷನ್ ಸಂಸ್ಥೆ ನೆರವಾಯಿತು ಎಂದು ತಿಳಿಸಿದರು.

j3tvkannada
ನರಸಿಂಹ ಮೂರ್ತಿ ಅವರು ಜನವರಿಯಲ್ಲಿ ಕುಟುಂಬದವರ ಜೊತೆ ಕುಂಭಮೇಳಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಕುಟುಂಬದವರಿಂದ ಬೇರ್ಪಟ್ಟು ನಾಪತ್ತೆಯಾಗಿದ್ದರು. ನರಸಿಂಹ ಮೂರ್ತಿಗಾಗಿ ಹುಡುಕಾಟ ನಡೆಸಿದ್ದ ಕುಟುಂಬದವರು ನಂತರ, ಪ್ರಯಾಗ್ ರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನರಸಿಂಹ ಮೂರ್ತಿ ಪುತ್ರ ಬದರಿನಾಥ್ ಎರಡು ಬಾರಿ ಪ್ರಯಾಗ್ರಾಜ್ಗೆ ತೆರಳಿ ಹುಡುಕಾಟ ನಡೆಸಿದ್ದರು ಪ್ರಯೋಜನವಾಗಿರಲಿಲ್ಲ. ನರಸಿಂಹ ಮೂರ್ತಿ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದುದರಿಂದ ಅವರನ್ನು ಹುಡುಕುವುದು ಅಷ್ಟು ಸುಲಭವಾಗಿರಲಿಲ್ಲ. ಈ ಸಂದರ್ಭದಲ್ಲಿ ಅವರು ಮುಂಬೈನ ಶ್ರದ್ಧಾ ರೀಹ್ಯಾ ಬಿಲಿಟೇಷನ್ ಸಂಸ್ಥೆಯವರ ಕಣ್ಣಿಗೆ ಬಿದ್ದಿದ್ದಾರೆ. ಅವರು ರಕ್ಷಣೆ ಮಾಡಿ, 4 ತಿಂಗಳ ಕಾಲ ಚಿಕಿತ್ಸೆ ನೀಡಿ ಇದೀಗ ಸುರಕ್ಷಿತವಾಗಿ ನರಸಿಂಹ ಮೂರ್ತಿ ಅವರನ್ನು ಹುಟ್ಟೂರಿಗೆ ಕಳುಹಿಸಿ ಕೊಟ್ಟಿದ್ದಾರೆ.

j3tvkannada
ಕುಟುಂಬದವರ ಜೊತೆ ಪ್ರಯಾಗ್ ರಾಜ್ಗೆ ತೆರಳಿದ್ದ ತಂದೆಯವರು, ಜನವರಿ 27ರಂದು ಅಮಾವಾಸ್ಯೆಯ ದಿನ ಕುಟುಂಬದವರಿಂದ ಬೇರೆಯಾಗಿ ನಾಪತ್ತೆಯಾಗಿದ್ದರು. ನಂತರ ಹುಡುಕಾಟಕ್ಕೆ ಪ್ರಯತ್ನಿಸಿದ್ದೆವು. ಅಲ್ಲಿನ ಪೊಲೀಸರಿಗೆ ದೂರನ್ನು ಕೂಡ ನೀಡಿದ್ದೆವು. ಆದರೆ ಯಾವುದು ಕೂಡ ಪ್ರಯೋಜನವಾಗಲಿಲ್ಲ. ಇದೀಗ ಕೆಲವು ದಿನಗಳ ಹಿಂದೆ ಮುಂಬೈಯ ಶ್ರದ್ಧಾ ರೀಹ್ಯಾಬಿಲಿಟೇಷನ್ ಸಂಸ್ಥೆಯವರು ಕರೆ ಮಾಡಿ ತಂದೆಯವರ ಬಗ್ಗೆ ಮಾಹಿತಿ ನೀಡಿ ಅವರನ್ನು ಕಳುಹಿಸಿಕೊಟ್ಟರು.
ಸಂಸ್ಥೆ ಅವರಿಗೆ ನಮ್ಮ ಧನ್ಯವಾದಗಳು ಎಂದು ನರಸಿಂಹಮೂರ್ತಿ ಅವರ ಮಗ ಬದರಿನಾಥ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. 26 ಮಂದಿ ಪ್ರಯಾಗಕ್ಕೆ ತೆರಳಿದ್ದೆವು. ಅಲ್ಲಿ ಬಹಳ ದೂರ ನಡೆಯಬೇಕಿತ್ತು. ಆ ಸಂದರ್ಭದಲ್ಲಿ ನಾಲ್ಕು ಜನ ಹಿಂದೆ ಉಳಿದುಕೊಂಡರು. ನಮ್ಮ ತಾಯಿ ಶೌಚಾಲಯಕ್ಕೆ ಹೋಗಬೇಕಿದ್ದರಿಂದ ಇವರನ್ನು (ನರಸಿಂಹಮೂರ್ತಿ) ಕುಳಿತುಕೊಳ್ಳಲು ಹೇಳಿ ಉಳಿದವರು ಹೋಗಿದ್ದರು. ವಾಪಸ್ ಬರುವಾಗ ಅವರು ಕಣ್ಮರೆಯಾಗಿದ್ದರು ಎಂದು ಅವರ ಪತ್ನಿ ಕೃಷ್ಣವೇಣಿ ತಿಳಿಸಿದರು. ಅಲ್ಲದೆ ಪತಿ ಮರಳಿ ದೊರೆತ ಖುಷಿಯಲ್ಲಿ ಭಾವುಕರಾದರು.