
ಚಾಮರಾಜನಗರ : ತಾಲೂಕಿನ ಕಾವೇರಿ ನದಿ ತೀರದಲ್ಲಿ ಮೊಸಳೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಟಿಸಿವೆ. ಸತ್ತೇಗಾಲ, ಯಡಕುರಿಯ, ವೆಸ್ಲಿ ಸೇತುವೆ ಶಿವನಸಮುದ್ರ, ಧನಗೆರೆ, ದಾಸನಪುರ ಮುಂತಾದಡೆ ನದಿ ತೀರದಲ್ಲಿ ಪ್ರತೀದಿನ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ.

j3tvkannada.in
ನಿತ್ಯವೂ ಹಲವಾರು ಕೆಲಸಗಳಿಗೆ ನದೀ ತೀರಕ್ಕೆ ಈ ಭಾಗದ ಜನರು ಹೆಚ್ಚಾಗಿ ಹೋಗುತ್ತಾರೆ. ನದಿ ನೀರನ್ನೇ ಅವಲಂಬಿಸಿರುವ ಈ ಭಾಗದ ಜನರಿಗೆ ಇದೀಗ ಮೊಸಳೆಯಿಂದ ಭೀತಿ ಆರಂಭವಾಗಿದೆ. ನದಿಯನ್ನೇ ನಂಬಿಕೊಂಡು ಕೃಷಿ ಮಾಡುತ್ತಿದ್ದಾರೆ. ದನಕರುಗಳನ್ನು ಸ್ನಾನ ಮಾಡಿಸಲು ಬಟ್ಟೆ ಒಗೆಯಲು ಕುಡಿಯಲು ಮುಂತಾದ ಕೆಲಸಗಳಿಗೆ ಹೋಗಲು ರೈತರು ಮೊಸಳೆ ದಾಳಿಯ ಭೀತಿಗೆ ಸಿಲುಕಿದ್ದಾರೆ.
ಮೊಸಳೆಗಳು ಸಾಮಾನ್ಯವಾಗಿ ನೀರಿನಾಳದಲ್ಲಿ ಹಾಗೂ ಬಂಡೆಗಳ ನಡುವೆ ಕಾಣಿಸುತ್ತವೆ. ನದಿ ನೀರು ಕಡಿಮೆಯಾದಾಗ ಹೆಚ್ಚಾಗಿ ದಡದಲ್ಲಿ ಕಾಣಿಸಿಕೊಳ್ಳುತ್ತವೆ. ಪ್ರತೀ ವರ್ಷವೂ ನದಿಯಲ್ಲಿ ನೀರು ಕಡಿಮೆಯಾದ ಕೂಡಲೇ ಮೊಸಳೆಗಳ ಹಾವಳಿ ಹೆಚ್ಚಾಗುತ್ತದೆ. ಧನಗೆರೆ ಗ್ರಾಮದ ಕಾವೇರಿ ನದಿಯ ಕಟ್ಟೆಯಲ್ಲಿ ನಿತ್ಯವೂ ಮೊಸಳೆ ಕಾಣ ಸಿಗುತ್ತದೆ. ಗ್ರಾಮದ ಯುವಕರು ನದಿಗೆ ಇಳಿದು ಈಜಾಡುವುದು, ಮೊಸಳೆಗಳನ್ನು ಕಂಡಾಗ ಸೆಲ್ಫೀ ತೆಗೆದುಕೊಳ್ಳುವುದು, ಕಲ್ಲಿನಿಂದ ಹೊಡೆಯುವುದು ಮಾಡುತ್ತಾರೆ. ಇನ್ನು ಕುರಿ ಮೇಕೆ ಗಳನ್ನು ಇವು ಹೊತ್ತೊಯ್ಯುತ್ತವೆ ಎನ್ನುತ್ತಾರೆ ಗ್ರಾಮದ ಜನರು.