
ಬೆಂಗಳೂರು ಗ್ರಾಮಾಂತರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಗೊಟ್ಟಿಪುರ ಬಳಿ ಲಾರಿ ಮತ್ತು ಆಂಧ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಡುವೆ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಹೊಸಕೋಟೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

j3tvkannada
ಆಂಧ್ರಪ್ರದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಬೆಂಗಳೂರಿನತ್ತ ಹೊರಟ್ಟಿದ್ದು, ಹೊಸಕೋಟೆಗೆ ಸಮೀಪದ ಗೊಟ್ಟಿಪುರದ ಬಳಿ ಓವರ್ ಟೇಕ್ ಮಾಡುವ ವೇಳೆ ಲಾರಿಯೊಂದಿಗೆ ಭೀಕರ ಅಪಘಾತವಾಗಿದೆ. ಅಪಘಾತದ ರಭಸಕ್ಕೆ ಬಸ್ನ ಒಂದು ಭಾಗ ಸಂಪೂರ್ಣ ಕಿತ್ತು ಹೋಗಿದ್ದು, ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡರು. ಗಂಭೀರವಾಗಿ ಗಾಯಗೊಂಡಿದ್ದ ಕೇಶವ ರೆಡ್ಡಿ, ತನು ಮತ್ತು ಯತ್ವಿಕ್ ಸ್ಥಳದಲ್ಲಿಯೇ ಮೃತಪಟ್ಟರೆ, ಪ್ರಣೀತ ಮತ್ತು ಶಾರದಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು.
ಭೀಕರ ಅಪಘಾತಕ್ಕೆ ಲಾರಿ ಮತ್ತು ಬಸ್ ನಡುವೆ ನಡೆದ ಓವರ್ ಟೇಕ್ ಕಾರಣ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಪಘಾತದಲ್ಲಿ ಬಸ್ ಭಾಗಶಃ ಜಖಂಗೊಂಡಿದ್ದು, ಗಾಯಗೊಂಡ ಪ್ರಯಾಣಿಕರನ್ನು ಹೊಸಕೋಟೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಚಾತುರ್ಯ (19), ಲಕ್ಷಿ ಕರುಣಾಕುಮಾರ್ (45), ಬಸ್ ನಿರ್ವಾಹಕ ತಿರುಪತಿಯ ರಾಮು (50), ಜನಾರ್ಧನ್ ರೆಡ್ಡಿ(32), ಗಿರೀಜಾ (45), ಜಸ್ವೀನ್ (4), ಪಾಪಮ್ಮ(65), ಮದನ್ ಮೋಹನ್ ರೆಡ್ಡಿ (40), ರೋಹಿಣಿ (29), ಮಾಧುರಿ (8) ಮತ್ತು ಕಾತ್ಯಾಯಿನಿ (11) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ವಿ.ಲಕ್ಷಿ ಕರುಣಾಕುಮಾರ್ ಅವರನ್ನು ಚಿತ್ತೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೊಸಕೋಟೆ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಹಾಗೂ ಸ್ಥಳೀಯ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಎಸ್ಪಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು. ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.