
ರಾಮನಗರ:ನಗರದ ಚಾಮುಂಡೇಶ್ವರಿ ಬಡಾವಣೆಯ ಶಿವರಾಜು ಮತ್ತು ರೋಜಾ ದಂಪತಿಯ ಹೆಣ್ಣು ಮಗು ಶರಣ್ಯ ನಕಲಿ ವೈದ್ಯನ ಬೇಜವಾಬ್ದಾರಿ ವೈದ್ಯೋಪಚಾರದಿಂದ ಬುಧವಾರ ಬೆಳಗ್ಗೆ ಮೃತಪಟ್ಟಿದೆ. ಈ ಸಂಬಂಧ ಪೋಷಕರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪುರ ಠಾಣೆ ಪೊಲೀಸರು ನಕಲಿ ವೈದ್ಯ ಮೊಹಮದ್ ಸೈಪುಲ್ಲಾನನ್ನು ಬಂಧಿಸಿದ್ದಾರೆ. ಈತ ನಡೆಸುತ್ತಿದ್ದ ಆಲ್-ಖೈರ್-ಫೌಂಡೇಷನ್ ಎಂಬ ನಕಲಿ ಕ್ಲಿನಿಕ್ ಅನ್ನು ಸೀಜ್ ಮಾಡಲಾಗಿದೆ.

3tvkannada.in/
15 ದಿನಗಳ ಹಿಂದೆ ಮಗುವಿಗೆ ಜಿಲ್ಲಾಸ್ಪತ್ರೆಯಲ್ಲಿ ವ್ಯಾಕ್ಸಿನ್ ಹಾಕಿಸಲಾಗಿತ್ತು. ನಂತರ ವ್ಯಾಕ್ಸಿನ್ ನೀಡಿದ ತೊಡೆ ಭಾಗದಲ್ಲಿ ಗಂಟು ಕಾಣಿಸಿಕೊಂಡಿತ್ತು. ಇದಕ್ಕೆ ಚಿಕಿತ್ಸೆ ಕೊಡಿಸಲು ಮುಂದಾದ ಪೋಷಕರು ನಕಲಿ ವೈದ್ಯ ಮೊಹಮದ್ನನ್ನು ಸಂಪರ್ಕಿಸಿದ್ದಾರೆ. ಸ್ಟಿರಾಯ್ಡ್ ಇಂಜಕ್ಷನ್ ನೀಡಿದ್ದರಿಂದ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ರಾತ್ರಿಯಿಡೀ ಮಗು ಅನಾರೋಗ್ಯಕ್ಕೆ ತುತ್ತಾಗಿ ನರಳಾಡಿದೆ. ಇಂಜಕ್ಷನ್ ಕೊಟ್ಟ ವೈದ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಮಕ್ಕಳ ಡಾಕ್ಟರ್ ಬಳಿ ತೋರಿಸಿ ಎಂದು ಹೇಳಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಖಾಸಗಿ ಆಸ್ಪತ್ರೆಗೆ ಕರೆ ತಂದಾಗ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮಗುವಿನ ಮೃತ ದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾಆರೋಗ್ಯಾಧಿಕಾರಿ ಡಾ.ನಿರಂಜನ್, ಆರೋಪಿ ಎಂಬಿಬಿಎಸ್ ಮಾಡಿಲ್ಲ. ಅನಧಿಕೃತವಾಗಿ ಕ್ಲಿನಿಕ್ ಇಟ್ಟುಕೊಂಡಿದ್ದ, ಆತ ಒಬ್ಬ ಫಾರ್ಮಸಿಸ್ಟ್ ಎಂಬ ಮಾಹಿತಿ ಇದೆ. ಮಗುವಿಗೆ ಇಂಜಕ್ಷನ್ ಕೊಡಬಾರದಿತ್ತು. ಆತನ ಕ್ಲಿನಿಕ್ ಸೀಜ್ ಮಾಡಲಾಗಿದೆ. ಸಾರ್ವಜನಿಕರು ಇಂತಹ ಕ್ಲಿನಿಕ್ಗಳಿಂದ ದೂರವಿರಬೇಕು ಎಂದು ತಿಳಿಸಿದ್ದಾರೆ.