
ಬೆಂಗಳೂರು: ಮಹಾನಗರದಲ್ಲಿ ಕಳೆದ ತಿಂಗಳು ಅಬ್ಬರಿಸಿದ ಮಳೆಯು ಭಾರಿ ಅನಾಹುತ ಸೃಷ್ಟಿಸಿದ ಪರಿಣಾಮ ಬಿ.ಬಿ.ಎಂ.ಪಿಗೆ 188 ಕೋಟಿ ರೂ ನಷ್ಟ ಉಂಟಾಗಿದೆ. ಮಳೆಯಿಂದಾಗಿ ರಸ್ತೆಗಳೆಲ್ಲವೂ ಅಸ್ಥಿಪಂಜರಗಳಂತಾಗಿವೆ. ನಗರದಲ್ಲಿ ಕೊಂಚ ಜೋರು ಮಳೆಯಾದಾಗಲೆಲ್ಲ ಬಿ.ಬಿ.ಎಂ.ಪಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಹಾಗೂ ಕಳಪೆ ಕಾಮಗಾರಿಗಳ ಬಣ್ಣ ಬಯಲಾಗುತ್ತದೆ. ಪ್ರತಿ ವರ್ಷದಂತೆ ಈ ಸಲವೂ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡು ಸ್ಥಳೀಯ ನಿವಾಸಿಗಳು ನರಕಯಾತನೆ ಅನುಭವಿಸಿದರು. ಪಾಲಿಕೆಯು ಪ್ರತಿ ಬಾರಿಯೂ ಮೂಲಸೌಕರ್ಯದ ಹಾನಿಯನ್ನಷ್ಟೇ ಲೆಕ್ಕ ಹಾಕುತ್ತದೆ. ಆದರೆ ಜನರ ಆಸ್ತಿ ಪಾಸ್ತಿಯ ನಷ್ಟವನ್ನು ಪರಿಗಣಿಸುವುದೇ ಇಲ್ಲ. ಕೆ.ಆರ್.ಪುರ ಸಮೀಪದ ಸಾಯಿ ಲೇಔಟ್ ಸೇರಿದಂತೆ ಇತರೆ ಪ್ರದೇಶಗಳು ಅಕ್ಷರಶಃ ದ್ವೀಪಗಳಾಗಿ ಮಾರ್ಪಟ್ಟಿದ್ದವು.

j3tvkannada
ಮನೆಗಳಿಗೆ ನೀರು ನುಗ್ಗಿದ್ದರಿಂದ ಬೀದಿಪಾಲಾಗಿದ್ದರು. ಅವರನ್ನು ದೋಣಿಗಳ ಮೂಲಕ ರಕ್ಷಿಸಲಾಯಿತು. ನಿವಾಸಿಗಳು ಕೋಟ್ಯಂತರ ರೂ ನಷ್ಟ ಅನುಭವಿಸಿದರು. ಜೋರು ಮಳೆ ಬಿದ್ದಾಗಲೆಲ್ಲಾ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಶಾಶ್ವತ ಪರಿಹಾರ ಕ್ರಮ ಕೈಗೊಂಡಿಲ್ಲ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸವೆಂಬಂತೆ ಪಾಲಿಕೆ ಅಧಿಕಾರಿಗಳು ಮಳೆಗಾಲ ಶುರುವಾದ ನಂತರ ಎಚ್ಚೆತ್ತುಕೊಳ್ಳುತ್ತಾರೆ. ಬೇಸಿಗೆಯಲ್ಲೇ ರಾಜಕಾಲುವೆಗಳು ಹಾಗೂ ರಸ್ತೆ ಬದಿಯ ಚರಂಡಿಗಳಲ್ಲಿ ಹೂಳು ತೆರವುಗೊಳಿಸುತ್ತಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಕಳೆದ ಮೇ ತಿಂಗಳ 18 ರಿಂದ 21ರವರೆಗೆ ಸುರಿದ ಧಾರಾಕಾರ ಮಳೆಗೆ ರಸ್ತೆಗಳೆಲ್ಲವೂ ನದಿಗಳಾಗಿ ಮಾರ್ಪಟ್ಟಿದ್ದವು. ನೀರು ಹರಿದ ರಭಸಕ್ಕೆ ರಸ್ತೆಗಳೆಲ್ಲವೂ ಕೊಚ್ಚಿ ಹೋಗಿವೆ. ಕೆಲವೆಡೆ ಡಾಂಬರು, ಜಲ್ಲಿಕಲ್ಲು ಕಿತ್ತು ಬಂದು ಅಸ್ಥಿ ಪಂಜರಗಳಂತೆ ಗೋಚರಿಸುತ್ತಿವೆ. ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಸುಮಾರು 12 ಸಾವಿರ ಕಿ.ಮೀ ಉದ್ದದಷ್ಟು ರಸ್ತೆ ಜಾಲವಿದ್ದು, ಮಳೆಯಿಂದಾಗಿ 343 ಕಿ.ಮೀ ನಷ್ಟು ಉದ್ದದ ರಸ್ತೆಗಳು ಹಾನಿಗೀಡಾಗಿವೆ. ಇದರಿಂದ ಪಾಲಿಕೆಗೆ 188 ಕೋಟಿ ರೂ. ಲುಕ್ಸಾನು ಆಗಿದೆ.

j3tvkannada
ಹಾನಿಗೊಳಗಾದ 878 ರಸ್ತೆಗಳನ್ನು ಗುರುತಿಸಲಾಗಿದೆ. ಪಾಲಿಕೆಯು ಪ್ರತಿ ವರ್ಷ ರಸ್ತೆಗಳ ಅಭಿವೃದ್ಧಿ, ಡಾಂಬರೀಕರಣ ಹಾಗೂ ಗುಂಡಿಗಳನ್ನು ಮುಚ್ಚುವ ಸಲುವಾಗಿಯೇ ಕೋಟ್ಯಂತರ ರೂ ವ್ಯಯಿಸುತ್ತಿದೆ. ಆದರೆ ಕಳಪೆ ಕಾಮಗಾರಿಯಿಂದಾಗಿ ಕೊಂಚ ಜೋರು ಸುರಿಯುವ ಮಳೆಗೆ ರಸ್ತೆಗಳು ಗುಂಡಿ ಬೀಳುತ್ತಿವೆ. ಇದರಿಂದ ವಾಹನ ಸವಾರರು ಜೀವ ಭಯದಲ್ಲೇ ಸಂಚರಿಸುವಂತಾಗಿದೆ. ಮಳೆಯಿಂದ ಗುಂಡಿ ಬಿದ್ದು ಹದಗೆಟ್ಟು ಹೋಗಿರುವ ರಸ್ತೆಗಳಲ್ಲಿ ತೇಪೆ ಕಾರ್ಯ ಕೈಗೊಳ್ಳಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಮೊದಲ ಸ್ಥಿತಿಗಿಂತ ಮತ್ತಷ್ಟು ಅಧ್ವಾನವಾಗಿವೆ. ಡಾಂಬರನ್ನು ರಸ್ತೆ ಗುಂಡಿಗಳಿಗೆ ಸುರಿದು ಹೋಗಲಾಗುತ್ತಿದ್ದು, ರೋಲರ್ಗಳಿಂದ ಸಮತಟ್ಟು ಮಾಡುತ್ತಿಲ್ಲ.
ಹೀಗಾಗಿ ಸವಾರರು ಬೆನ್ನು ನೋವಿಗೆ ಸಿದ್ಧರಾಗಿಯೇ ರಸ್ತೆಗಳಿಗೆ ಇಳಿಯಬೇಕಿದೆ. ಕೆಲವೆಡೆ ದುರಸ್ತಿಪಡಿಸಿದ ರಸ್ತೆಗಳಲ್ಲಿ ಮತ್ತೆ ಡಾಂಬರು ಕಿತ್ತು ಬಂದು ಜಲ್ಲಿಕಲ್ಲುಗಳು ಹರಡಿಕೊಂಡಿವೆ. ಕಳೆದ ತಿಂಗಳು ಬಿರುಗಾಳಿ ಸಹಿತ ಸುರಿದ ಮಳೆ ಅವಾಂತರಕ್ಕೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಬೊಮ್ಮನಹಳ್ಳಿ ವಲಯದಲ್ಲಿ ಇಬ್ಬರು ಮಹದೇವಪುರ ಹಾಗೂ ದಕ್ಷಿಣ ವಲಯದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಆದರೆ ಗಾಯ ಗೊಂಡವರ ಲೆಕ್ಕ ಇಲ್ಲ. ಮಳೆಯ ಆರ್ಭಟಕ್ಕೆ ನಗರದಲ್ಲಿ 149 ಮರಗಳು ನೆಲಕ್ಕುರುಳಿದ್ದು, 300 ಕ್ಕೂ ಅಧಿಕ ರೆಂಬೆ ಕೊಂಬೆಗಳು ಮುರಿದುಬಿದ್ದಿವೆ. ಅಲ್ಲದೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಬುಡಸಮೇತ ನೆಲಕ್ಕುರುಳಿದ ಮರಗಳಿಂದ ಕಾರು, ಬೈಕ್ಗಳು ಜಖಂಗೊಂಡಿವೆ.
ವಲಯವಾರು ಹಾನಿಗೀಡಾದ ರಸ್ತೆಗಳ ವಿವರ:
ವಲಯ ಕಿ.ಮೀ. ನಷ್ಟದ ಅಂದಾಜು (ಕೋಟಿ ರೂ.ಗಳಲ್ಲಿ)
- ಯಲಹಂಕ 37.80 15.81
- ಬೊಮ್ಮನಹಳ್ಳಿ 147 71
- ಆರ್.ಆರ್.ನಗರ 30.24 49.71
- ದಾಸರಹಳ್ಳಿ 34.35 18