
2025ರ ಐಪಿಎಲ್ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಮೂರು ಪಂದ್ಯಗಳು ಅಭಿಮಾನಿಗಳನ್ನು ರಂಜಿಸಿವೆ. ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸಿದೆ. ಆದರೆ ಮೊದಲ ಪಂದ್ಯದಲ್ಲೇ ಸಿಎಸ್ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಬೌಲರ್ ಖಲೀಲ್ ಅಹ್ಮದ್ ಮೇಲೆ ಅಭಿಮಾನಿಗಳು ಗಂಭೀರ ಆರೋಪ ಮಾಡಿದ್ದಾರೆ. ಮಾರ್ಚ್ 23 ರಂದು ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧದ ಆವೃತ್ತಿಯ ತಮ್ಮ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವೇಗಿ ಖಲೀಲ್ ಅಹ್ಮದ್ ಮತ್ತು ನಾಯಕ ರುತುರಾಜ್ ಗೈಕ್ವಾಡ್ ಚೆಂಡು ವಿರೂಪಗೊಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಭಾನುವಾರ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಖಲೀಲ್ ಅಹ್ಮದ್ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಮೊದಲ ಓವರ್ ಬೌಲಿಂಗ್ ಮಾಡಿದರು.

ಮೊದಲ ಓವರ್ ನ ಎರಡನೇ ಎಸೆತಕ್ಕೆ ಮುನ್ನವೇ ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಸಿಎಸ್ಕೆ ವಿರುದ್ಧ ಗಂಭೀರ ಆರೋಪ ಮಾಡಲಾಗುತ್ತಿದೆ. ಆರ್ ಸಿ ಬಿ ಸೇರಿದಂತೆ ಹಲವು ತಂಡಗಳ ಅಭಿಮಾನಿಗಳು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ವೇಗಿ ಖಲೀಲ್ ಅಹ್ಮದ್ ಚೆಂಡಿನೊಂದಿಗೆ ಏನೋ ಮಾಡುತ್ತಿರುವುದು ಸೆರೆಯಾಗಿದೆ, ಆಟಗಾರರು ಉದ್ದೇಶಪೂರ್ವಕವಾಗಿ ಚೆಂಡನ್ನು ವಿರೂಪಗೊಳಿಸಿದರೇ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಸಿಎಸ್ಕೆ ತಂಡದ ವಿರುದ್ಧ ಅಭಿಮಾನಿಗಳು ಗಂಭೀರ ಆರೋಪ ಮಾಡಿದ್ದು ಇದಕ್ಕೆ ಸಿಎಸ್ಕೆ ತಂಡದ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ. ಇನ್ನಿಂಗ್ಸ್ ಆರಂಭಿಸುವಾಗ ಹೊಸ ಚೆಂಡು ನೀಡಲಾಗುತ್ತದೆ, ಹೊಸ ಚೆಂಡನ್ನು ವಿರೂಪಗೊಳಿಸುವ ಯಾವುದೇ ಅಗತ್ಯ ಇರುವುದಿಲ್ಲ, ಕ್ರಿಕೆಟ್ ಬಗ್ಗೆ ಗೊತ್ತಿಲ್ಲದವರು ಮಾತ್ರ ಇಂತಹ ಆರೋಪ ಮಾಡಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.