
ದಾವಣಗೆರೆ: ಬೆಳ್ಳಿ, ಬಂಗಾರದಂತೆ ಅಡಿಕೆ ದರದಲ್ಲಿಯೂ ಏರಿಳಿತ ಆಗುತ್ತಲೇ ಇರುತ್ತದೆ. ಕಳೆದ ಎರಡು ತಿಂಗಳಿಗೆ ಹೋಲಿಕೆ ಮಾಡಿದ್ರೆ ಮಾರ್ಚ್ನಲ್ಲಿ ಅಡಿಕೆ ದರ ತುಸು ಏರಿಕೆಯಾಗಿದೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವೆಡೆಯೂ ಅಡಿಕೆ ಬೆಳೆಯಲಾಗುತ್ತಿದ್ದು, ಇದೀಗ ಜಿಲ್ಲೆಯಲ್ಲಿ ಪ್ರಸ್ತುತ ಅಡಿಕೆ ಧಾರಣೆ ಹೇಗಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯಾಗಿದೆ. ಇದೀಗ ಕ್ವಿಂಟಾಲ್ ಅಡಿಕೆಯ ಗರಿಷ್ಠ ದರ 52,200 ರೂಪಾಯಿ ಇದ್ದು, ಕಳೆದ ದಿನದ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ ತುಸು ಇಳಿಕೆ ಕಂಡಿದೆ. ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಕಡಿಮೆ ಆದಂತಾಗಿದೆ. ಇದೀಗ ಚನ್ನಗಿರಿ ರಾಶಿ ಅಡಿಕೆ ಧಾರಣೆ ಗರಿಷ್ಠ ದರ 52,200 ರೂಪಾಯಿ, ಕನಿಷ್ಠ ದರ 38,800 ರೂಪಾಯಿ ಇದ್ದು, ಸರಾಸರಿ ಬೆಲೆ 49,499 ರೂಪಾಯಿ ಇದೆ. ಬೆಟ್ಟೆ ಅಡಿಕೆ ಗರಿಷ್ಠ ದರ 24,100 ರೂಪಾಯಿ, ಕನಿಷ್ಠ ದರ 17,287 ರೂಪಾಯಿ, ಸರಾಸರಿ ದರ 20,693 ರೂಪಾಯಿ ಆಗಿದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಅದರಲ್ಲೂ ಇದೀಗ ಬೇಸಿಗೆಗೂ ಮುನ್ನ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆ ಅಡಿಕೆ ತೋಟ ರಕ್ಷಣೆಗೆ ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ. ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್ ಅಡಿಕೆ ದರ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಇನ್ನು ಮಾರ್ಚ್ ಎರಡನೇ ವಾರದಲ್ಲಿ 53,000 ಗಡಿ ದಾಟಿದ್ದು, ಇದೀಗ ಮತ್ತೆ ಇಳಿಕೆ ಕಂಡಿದೆ. ಮತ್ತೆ 53,000 ಗಡಿ ದಾಟುವ ಭರವಸೆಯಲ್ಲಿ ಬೆಳೆಗಾರಿದ್ದಾರೆ.

ಇನ್ನು 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ ಅಂದರೆ, 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ಬಂದು ತಲುಪಿತ್ತು. ಅದರಲ್ಲೂ ಚನ್ನಗಿರಿ ಅಡಿಕೆ ನಾಡು ಅಂತಾನೇ ಪ್ರಸಿದ್ಧಿಯಾಗುದೆ. ಕಳೆದ ಬಾರಿ ಮುಂಗಾರು ಮಳೆ ಆರ್ಭಟದಿಂದ ಉತ್ತಮ ಫಸಲು ಏನೋ ಬಂದಿತ್ತು. ಆದ್ರೆ, ಬೆಲೆ ಮಾತ್ರ ಏರಿಕೆಯಾಗಿ ಮತ್ತೆ ಅದೇ ಆಡಿದ್ದೇ ಆಟ ಎಂಬಂತೆ ಇಳಿಯಾಗಿತ್ತು. ಇದೀಗ ಸುಧಾರಿದ್ದು, ತುಸು ಏರಿಕೆಯಾಗಿದೆ. ಇನ್ನೂ ಈ ಬಾರಿ ಕೂಡ ಮುಂಗಾರು ಆರ್ಭಟಿಸುವ ಮುನ್ಸೂಚನೆ ಇದ್ದು, ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಇದೀಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲಾಗುತ್ತಿದ್ದು, ಇದರಿಂದ ಬೆಳೆಗಾರರಿಗೆ ಆತಂಕ ಶುರುವಾಗಿದೆ. ಮತ್ತೊಂದೆಡೆ ಹವಾಮಾನ ಇಲಾಖೆಯ ಪ್ರಕಾರ ಮಾರ್ಚ್ 2ನೇ ವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ರಾಜ್ಯ ರಾಜಧಾನಿ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿದ ಬಹುತೇಕ ಜಿಲ್ಲೆಗಳಲ್ಲಿ ಒಳಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದೆ. ಅದರಲ್ಲೂ ದಾವಣಗೆರೆ ಜಿಲ್ಲೆ ದಕ್ಷಿಣ ಒಳನಾಡಿಗೆ ಸೇರುವುದರಿಂದ ಇಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.