
ನಗರದ ಕೋಡಿಭಾಗದ ಬಳಿ ಇರುವ ಕಾಳಿ ನದಿ ಸೇತುವೆಗೆ ಬೀದಿ ದೀಪ ಅಳವಡಿಸದಿರುವುದರಿಂದ ರಾತ್ರಿ ವೇಳೆ ಪಾದಾಚಾರಿಗಳು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಗಳಿಗೆ ಒಂದೊಂದೆ ಸಮಸ್ಯೆ ಎದುರಾಗುತ್ತಿದೆ. ಈ ಹಿಂದೆ 2024ರ ಆಗಸ್ಟ್ ತಿಂಗಳಲ್ಲಿ ಕಾಳಿ ನದಿ ಹಳೆಯ ಸೇತುವೆ ಕೂಡ ಕುಸಿದು, ಒಂದು ಸೇತುವೆಯ ಮೇಲೆಯೇ ದ್ವಿಮುಖ ಸಂಚಾರ ನಡೆಯುತ್ತಿದೆ. ಆದರೆ ಈ ಸೇತುವೆಗೆ ಕೂಡ ಸರಿಯಾದ ವಿದ್ಯುತ್ ದೀಪಗಳ ವ್ಯವಸ್ಥೆ ಇಲ್ಲದೇ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು, ಅಪಾಯಕ್ಕೆ ಎಡೆಮಾಡಿಕೊಡುವಂತಿದೆ. ಚತುಷ್ಪಥ ರಸ್ತೆಯಾದರೂ ಸೇತುವೆ ಕುಸಿದು ಬಿದ್ದ ಕಾರಣ ಕಾರವಾರ ಕಡೆಯಿಂದ ಗೋವಾ ಹಾಗೂ ಗೋವಾ ಕಡೆಯಿಂದ ಕಾರವಾರ ಕಡೆಗೆ ಬರಲು ಒಂದೇ ಸೇತುವೆ ಬಳಸಲಾಗುತ್ತಿದೆ. ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಉಪಯೋಗವಾಗಲೆಂದು ಈ ಹಿಂದೆ ಐ.ಆರ್.ಬಿ ಕಂಪನಿಯು ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಅಲ್ಲಲ್ಲಿ ಅಳವಡಿಸಿತ್ತು. ಆದರೆ ಇದೀಗ ಅವು ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಈ ಸೇತುವೆಯ ಕಾರವಾರ ಭಾಗಕ್ಕೆ ಅಳವಡಿಸಿರುವ ಹೈಮಾಸ್ಟ್ ದೀಪ ಮಾತ್ರ ಉರಿಯುತ್ತಿದೆ. ಆದರೆ ಮತ್ತೊಂದು ಕಡೆಯಲ್ಲಿರುವ ಹೈಮಾಸ್ಟ್ ದೀಪ ಉರಿಯುತ್ತಿಲ್ಲ.

j3tvkannada
ಸದಾಶಿವಗಡ ಭಾಗದಿಂದ ಕಾರವಾರ ಸಂಪರ್ಕಿಸಲು ಇರುವುದು ಒಂದೇ ಸೇತುವೆಯಾದ ಕಾರಣ ಭಾರಿ ವಾಹನಗಳೂ ಇದೇ ಸೇತುವೆಯನ್ನು ಬಳಕೆ ಮಾಡುತ್ತಿವೆ. ಅಲ್ಲದೇ ರಾತ್ರಿ ವೇಳೆ ಬೇರೆ ನಗರಗಳಿಗೆ ಸಾಕಷ್ಟು ಖಾಸಗಿ ಬಸ್ಗಳು ಸಂಚಾರ ಮಾಡುತ್ತವೆ. ಸರಿಯಾದ ವಿದ್ಯುತ್ ದೀಪಗಳು ಇರದ ಕಾರಣ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಾಚಾರಿಗಳು ರಾತ್ರಿ ವೇಳೆ ಜೀವ ಭಯದಿಂದಲೇ ಸಂಚಾರ ಮಾಡುವಂತಾಗಿದೆ. ಈ ಹಿಂದೆ ಸೇತುವೆಯ ಎರಡು ಕಡೆಗಳಲ್ಲಿಯೂ ಹೈಮಾಸ್ಟ್ ದೀಪಗಳಿದ್ದವು. ಆದರೆ ಐಆರ್ಬಿ ಕಂಪನಿಯು ಸದಾಶಿವಗಡ ಕಡೆಯಲ್ಲಿರುವ ಹೈಮಾಸ್ಟ್ ದೀಪಕ್ಕೆ ಅಳವಡಿಸಿದ್ದ ವಾಯರ್ ತೆರವು ಮಾಡಿದೆ. ಹೀಗಾಗಿ ಆ ಕಡೆಯ ಹೈಮಾಸ್ಟ್ ದೀಪ ಉರಿಯುತ್ತಿಲ್ಲಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗೋವಾ ಹಾಗೂ ಕಾರವಾರ ಕಡೆ ಸಂಚರಿಸುವ ವಾಹನಗಳಿಗೆ ಅನುಕೂಲವಾಗಲು ಸೇತುವೆಯ ಮಧ್ಯಭಾಗದಲ್ಲಿ ತಾತ್ಕಾಲಿಕ ರಸ್ತೆ ಡಿವೈಡರ್ ಅಳವಡಿಸಲಾಗಿತ್ತು. ಆದರೆ ಬಹುತೇಕ ಕಡೆ ಇವು ಕಟ್ಟಾಗಿವೆ. ಜತೆಗೆ ವಿದ್ಯುತ್ ದೀಪಗಳು ಇಲ್ಲದೇ ಸಂಚಾರವು ಕಷ್ಟವಾಗಿದ್ದು, ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಗೋವಾ ಹಾಗೂ ಕಾರವಾರವನ್ನು ಸಂಪರ್ಕಿಸುವ ಕಾಳಿ ಸೇತುವೆಯಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ. ಇದರಿಂದ ಅಪಘಾತಗಳಾಗುವ ಸಾಧ್ಯತೆ ಇದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು.