
ಹಾಸನ: ಮಲೆನಾಡಿನಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ, ರಾಷ್ಟ್ರೀಯ ಹೆದ್ದಾರಿ ಶಿರಾಡಿಯಲ್ಲಿ ಗುಡ್ಡ ಕುಸಿತ ಆತಂಕ ಹೆಚ್ಚಾಗಿದೆ. ಅಲ್ಲದೆ ಸಣ್ಣ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಜಾರಿದ್ದು, ಜೆ.ಸಿ.ಬಿ ಮೂಲಕ ತೆರವು ಕಾರ್ಯ ಮುಂದುವರಿದಿದೆ. ಮಳೆಗಾಲಕ್ಕೂ ಮುನ್ನವೇ ಶಿರಾಡಿ ಹೆದ್ದಾರಿಯಲ್ಲಿ ಸುರಕ್ಷತೆ ಕಾಪಾಡುವ ಸಂಬಂಧ ಹತ್ತಾರು ಬಾರಿ ಪೂರ್ವಭಾವಿ ಸಭೆ ನಡೆಸಲಾಗಿತ್ತು.

j3tvkannada.in
ಖುದ್ದು ಜಿಲ್ಲಾಧಿಕಾರಿ ಸಹಿತ ಅಧಿಕಾರಿ ವರ್ಗ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಅಪೂರ್ಣ ಕಾಮಗಾರಿಯಿಂದ ಅಲ್ಲಲ್ಲಿ ಗುಡ್ಡ ಕುಸಿತ ಮುಂದುವರಿದಿದೆ. ರಸ್ತೆ ಬಿರುಕು ಬಿಡುವ ಜತೆಗೆ ಮರಗಳು ಧರೆಗುರುಳುತ್ತಿವೆ. ಗುಡ್ಡದ ಮಣ್ಣು ಕುಸಿಯುವುದನ್ನು ತಡೆಗಟ್ಟಲು ನಿರ್ಮಿಸಿರುವ ತಡೆಗೋಡೆ ಅವೈಜ್ಞಾನಿಕವಾಗಿ ಕೂಡಿದೆ. ಪರಿಣಾಮ ಮಳೆ ಅಬ್ಬರಕ್ಕೆ ಅಲ್ಲಲ್ಲಿ ಗುಡ್ಡದ ಮಣ್ಣು ಕುಸಿಯುತ್ತಲೇ ಇದೆ. ಮಳೆಯೂ ಹೆಚ್ಚಿರುವ ಕಾರಣ ಕೆಸರುಮಣ್ಣು ರಸ್ತೆಗೆ ಜಾರಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಆನೆಮಹಲ್, ದೋಣಿಗಾಲ್, ಹೆಗ್ಗದ್ದೆ ನಡುವೆ ರಸ್ತೆ ಬದಿ ಬಿರುಕು ಕಾಣಿಸಿಕೊಂಡಿದ್ದು, ತಡೆಗೋಡೆಗೆ ಟಾರ್ಪಲ್ ಹೊದಿಕೆ ಹಾಕಲಾಗಿದೆ. ರಸ್ತೆ ಬದಿ ಬಾಯ್ದೆರೆದಿರುವುದರಿಂದ ಮುಂದಿನ ದಿನದಲ್ಲಿ ಹೆಚ್ಚಿನ ಮಳೆಯಾದರೆ ಅಪಾಯ ನಿಶ್ಚಿತ ಎಂಬ ಮುನ್ಸೂಚನೆ ಜತೆಗೆ ಆತಂಕಕ್ಕೂ ಕಾರಣವಾಗಿದೆ. ಸಕಲೇಶಪುರ-ಆಲೂರು ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಶಿರಾಡಿ ರಸ್ತೆ ಬದಿ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.