
ಮೈಸೂರು: 250 ಕೋಟಿ ರೂ ಅಥವಾ ಅದಕ್ಕಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ಸಣ್ಣ ಮತ್ತು ಮಧ್ಯಮ ಔಷಧ ಉದ್ಯಮಗಳಿಗೆ ಪರಿಷ್ಕೃತ ವೇಳಾ ಪಟ್ಟಿ ಹಾಗೂ ಉತ್ತಮ ಉತ್ಪಾದನಾ ಅಭ್ಯಾಸಗಳನ್ನು (ಜಿಎಂಪಿ) ಅನುಷ್ಠಾನಗೊಳಿಸುವ ಗಡುವನ್ನು ಸರ್ಕಾರ ಈ ವರ್ಷದ ಅಂತ್ಯದವರೆಗೆ ವಿಸ್ತರಿಸಿದೆ ಎಂದು ಕರ್ನಾಟಕ ರಾಜ್ಯ ಶಾಖೆಯ ಭಾರತೀಯ ಔಷಧೀಯ ಸಂಘದ ಅಧ್ಯಕ್ಷ (ಐಪಿಎ) ಉಪ ಔಷಧ ನಿಯಂತ್ರಕ ಡಾ. ಖಾಲಿದ್ ಅಹ್ಮದ್ ಖಾನ್ ತಿಳಿಸಿದರು.

j3tvkannada.in
ನಗರದ ಬನ್ನಿ ಮಂಟಪ ರಸ್ತೆಯ ಜೆಎಸ್ಎಸ್ ಫಾರ್ಮಸಿ ಕಾಲೇಜಿನಲ್ಲಿ ಪಿ.ಎಚ್.ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಪಿಎಚ್ಡಿಸಿಸಿಐ) ಆರೋಗ್ಯ ಸಮಿತಿ, ಔಷಧೀಯ ಇಲಾಖೆ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ (ಜಿಒಐ), ಜೆ.ಎಸ್.ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮತ್ತು ಭಾರತೀಯ ಔಷಧ ಸಂಘ (ಐಪಿಎ) ಮೈಸೂರು ಶಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಸಮ್ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಷ್ಕೃತ ಗುಣಮಟ್ಟದ ಚೌಕಟ್ಟನ್ನು ಅನುಷ್ಠಾನಗೊಳಿಸುವಲ್ಲಿ ಒಳಗೊಂಡಿರುವ ಆರ್ಥಿಕ ಹೊರೆಯಿಂದಾಗಿ, ಎಂ.ಎಸ್.ಎಂ.ಇ ಸಂಸ್ಥೆಗಳಿಗೆ ಡಿಸೆಂಬರ್ 2025 ರವರೆಗೆ ಸಮಯವನ್ನು ನೀಡಲಾಗಿದೆ ಎಂದರು. ಜೆ.ಎಸ್.ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಉಪಕುಲಪತಿ ಡಾ.ಎಚ್.ಬಸವನಗೌಡಪ್ಪ ಅವರು ಆರ್ಪಿ ಟಿ ಯ ಎ ಎಸ್ ಅನ್ನು ಪ್ರಾರಂಭಿಸಿದ್ದಕ್ಕಾಗಿ ಔಷಧ ಇಲಾಖೆಯನ್ನು ಶ್ಲಾಘಿಸಿದರು. ಜಿ.ಎಂ.ಪಿಯನ್ನು ನಿಯಂತ್ರಣವಾಗಿ ಪರಿಗಣಿಸದೆ ಮೂಲಭೂತ ಜವಾಬ್ದಾರಿಯಾಗಿ ಪರಿಗಣಿಸುವಂತೆ ಉದ್ಯಮವನ್ನು ಒತ್ತಾಯಿಸಿದರು.
ಕರ್ನಾಟಕದ ವಾಜಿ ಔಷಧ ನಿಯಂತ್ರಕ ಅಮರೇಶ್ ತುಂಬಗಿ, ಪರಿಷ್ಕೃತ ವೇಳಾಪಟ್ಟಿ ಎಂ ಅಡಿಯಲ್ಲಿ ತಪಾಸಣೆ ಕಾರ್ಯಾ ವಿಧಾನಗಳನ್ನು ಮತ್ತು ನಿಯಂತ್ರಕ ಪ್ರಕ್ರಿಯೆಗಳು ಹೇಗೆ ವಿಕಸನಗೊಂಡಿವೆ ಎಂಬುದನ್ನು ವಿವರಿಸಿದರು. ಸಮ್ಮೇಳನದಲ್ಲಿ ಐಪಿಎ ಮೈಸೂರು ಶಾಖೆಯ ಸದಸ್ಯರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಸೇರಿದಂತೆ 100ಕ್ಕೂ ಹೆಚ್ಚು ಜನ ಭಾಗವಹಿಸಿದರು.
ಜೆ.ಎಸ್.ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್ ಕುಮಾರ್, ಪಿ.ಎಚ್.ಡಿ.ಸಿ.ಸಿ.ಐನ ಜಂಟಿ ಕಾರ್ಯದರ್ಶಿ ಜತಿನ್ ನಾಗ್ಪಾಲ್, ಮೈಸೂರು ಆರ್ಸಿ 2 ಫಾರ್ಮಾ ಸೊಲ್ಯೂಷನ್ಸ್ ಸಂಸ್ಥಾಪಕ ಡಾ.ಎಚ್.ವಿ ರಘುನಂದನ್, ಔಷಧೀಯ ಇಲಾಖೆಯ ಅಧೀನ ಕಾರ್ಯದರ್ಶಿ ಧರ್ಮೇಂದ್ರ ಕುಮಾರ್ ಯಾದವ್, ಐಪಿಎ ಮೈಸೂರು ಕಾರ್ಯದರ್ಶಿ ಡಾ.ಆರ್.ಎಸ್ ಸವಿತಾ ಉಪಸ್ಥಿತರಿದ್ದರು.