
ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ವೀರಾಪುರ ಗ್ರಾಮದ ಅಡಿಕೆ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೈತ ತಿಮ್ಮಪ್ಪ ಮೃತದೇಹ ಪತ್ತೆಯಾಗಿದೆ. ಮೃತ ತಿಮ್ಮಪ್ಪ ಸಾಲ ಮಾಡಿ ಖರೀದಿಸಿದ್ದ 4 ಎಕರೆ 26 ಗುಂಟೆ ಜಮೀನು ಬೇರೆಯವರ ಪಾಲಾಗುತ್ತದೆ ಎಂಬ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

j3tvkannada
ವೀರಾಪುರ ಗ್ರಾಮದಲ್ಲಿ ರೈತ ತಿಮ್ಮಪ್ಪ ದರ್ಖಾಸ್ತು ಜಮೀನು ಖರೀದಿ ಮಾಡಿದ್ದರಂತೆ. ಅಸಲಿಗೆ ಮೂಲ ಮಾಲೀಕ ಬೇರೆಯವರಿಗೆ ಜಮೀನು ಮಾರಾಟ ಮಾಡಿದ್ದರಂತೆ. ಬಳಿಕ ಆ ಜಮೀನನ್ನು ಮೂರನೇ ವಾರಸುದಾರರಾಗಿ ಮೂಡಲಪ್ಪ ಎಂಬ ವ್ಯಕ್ತಿ ಖರೀದಿ ಮಾಡಿದ್ದರು. ಮೂಡಲಪ್ಪ ಎಂಬುವವರ ಬಳಿ ಜಮೀನು ಖರೀದಿಸಿದ್ದ ರೈತ ತಿಮ್ಮಪ್ಪ, ಜಮೀನಲ್ಲಿ ಉಳುಮೆ ಮಾಡಿ ಅಡಿಕೆ ತೋಟ ಮಾಡಿದ್ದರು. ಇದಾದ ಬಳಿಕ ಮೂಡಲಪ್ಪ ವಿರುದ್ಧ ಪಕ್ಕದ ಜಮೀನಿನ ಮಾಲೀಕ ದಾವೆ ಹೂಡಿದ್ದರು. ಸಾಲ ಸೋಲ ಮಾಡಿ ಖರೀದಿಸಿದ್ದ 4 ಎಕರೆ 26 ಗುಂಟೆ ಜಮೀನು ಬೇರೆಯವರ ಪಾಲಾಗುತ್ತೆ ಎಂಬ ಆತಂಕದಿಂದ ಮನನೊಂದು ತಾನು ಬೆಳೆಸಿದ ಅಡಿಕೆ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ.
ಮನೆಗೆ ಆಧಾರಸ್ತಂಭವಾಗಿದ್ದ ರೈತ ತಿಮ್ಮಪ್ಪರನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಪ್ರಕರಣ ಸಂಬಂಧಿಸಿದಂತೆ, ಚನ್ನಗಿರಿಯಲ್ಲಿ ಮೃತ ರೈತ ತಿಮ್ಮಪ್ಪ ಸಂಬಂಧಿ ಹಾಲೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ತಿಮ್ಮಪ್ಪರವರು ದರ್ಖಾಸ್ತ ಲ್ಯಾಂಡ್ ಗ್ರ್ಯಾಂಟ್ ಆಗಿದ್ದ ಜಮೀನು ಖರೀದಿ ಮಾಡಿದ್ದರು. ನಾನ್ ವಾಯ್ಲೇಷನ್ ಆದ ಮೇಲೆಯೇ ಜಮೀನು ಖರೀದಿ ಮಾಡಿದ್ದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆ (PTCL) ಪ್ರಕಾರ ಸರಿಯಾಗಿದೆ ಎಂದು ಒಬ್ಬರು ಉಪವಿಭಾಗಾಧಿಕಾರಿ ಹೇಳಿದ್ದರು. ನಮ್ಮ ಎದುರುದಾರರು ಅಪೀಲ್ ಮಾಡಿದಾಗ ಜಿಲ್ಲಾಧಿಕಾರಿ ರಿಮೈಂಡ್ ಮಾಡಿದರು. ಬಳಿಕ ಪಿ.ಟಿ.ಸಿ.ಎಲ್ ಕಾಯಿದೆ ಅಪ್ಲೈ ಆಗುತ್ತೆ ಎಂದು ಮತ್ತೋರ್ವ ಉಪವಿಭಾಗಾಧಿಕಾರಿ ಹೇಳಿದ್ದಾರೆ. ಸಾಲ ಸೋಲ ಮಾಡಿ ಜಮೀನು ಖರೀದಿಸಿ ಅಡಿಕೆ ತೋಟ ಮಾಡಿದ್ದರು. ಪಿ.ಟಿ.ಸಿ.ಎಲ್ ಆ್ಯಕ್ಟ್ ಬಗ್ಗೆ ಹಳ್ಳಿ ಜನರಿಗೆ ಗೊತ್ತಿರಲ್ಲ, ಈ ಸಾವಿಗೆ ಯಾರು ಹೊಣೆ ಸರ್ಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಿಮ್ಮಪ್ಪರವರು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಯಾರಾದರೂ ಕೊಲೆ ಮಾಡಿದ್ದಾರೋ ಅದೂ ಸಹ ನಮಗೆ ಅನುಮಾನ ಇದೆ. ಚನ್ನಗಿರಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಹಾಲೇಶ್ ಆಗ್ರಹಿಸಿದ್ದಾರೆ.
ಇನ್ನು ತಂದೆಯನ್ನು ಕಳೆದುಕೊಂಡ ಮಗ ಗಿರೀಶ್ ಆಕ್ರಂದನ ಮುಗಿಲು ಮುಟ್ಟಿದೆ. ನಮ್ಮ ತಂದೆ ಅಡಿಕೆ ಮರಕ್ಕೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೋ, ಯಾರಾದರೂ ಕೊಲೆ ಮಾಡಿದ್ದಾರೋ ಗೊತ್ತಿಲ್ಲ ಸರ್. ನಮ್ಮ ಮನೆಯಲ್ಲಿ ಎಂಟು ಜನ ವಾಸವಿದ್ದೆವು. ಏಳು ಜನರನ್ನು ನಮ್ಮ ತಂದೆಯೇ ಸಾಕುತ್ತಿದ್ದರು. ನಮ್ಮ ಪಕ್ಕದ ಜಮೀನಿನವರು ಫೇಕ್ ಡಾಕ್ಯುಮೆಂಟ್ ಮಾಡಿ ಕೇಸ್ ಹಾಕಿದ್ರು. ಚನ್ನಗಿರಿ ತಾಲೂಕಿನಲ್ಲಿ ವ್ಯಾಪಕ ಭ್ರಷ್ಟಾಚಾರ ಇದ್ದಿದ್ದರಿಂದಲೇ ಹೀಗಾಗಿದೆ ಎಂದು ರೈತ ತಿಮ್ಮಪ್ಪ ಮಗ ಆರೋಪಿಸಿದ್ದಾರೆ. ನಮ್ಮ ಚಿಕ್ಕಪ್ಪನ ಮೂವರು ಮಕ್ಕಳನ್ನು ನಮ್ಮಪ್ಪನೇ ಸಾಕುತ್ತಿದ್ದರು. ನಾನು ಎಂ.ಬಿ.ಎ ಮಾಡಬೇಕೆಂದಿದ್ದೆ, ಜಮೀನು ಉಳಿಸಬೇಕು ಅಂತಾ ನಮ್ಮ ತಂದೆ ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದರು. ಇದರಿಂದ ನನಗೆ ಒಂದು ವರ್ಷ ಕಾಲೇಜಿಗೆ ಹೋಗಲು ಆಗಲಿಲ್ಲ. ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಮೃತ ರೈತ ತಿಮ್ಮಪ್ಪನ ಮಗ ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.