
ಕೊಡಗು: ಕೊಡಗಿನಲ್ಲಿ ಮಳೆಗಾಲದಲ್ಲಿ ಹೆದ್ದಾರಿ ಕುಸಿತ ಸರ್ವೇ ಸಾಮಾನ್ಯವಾಗಿದ್ದು, ಮಡಿಕೇರಿಯಿಂದ ಸಂಪಾಜೆ ಮಾರ್ಗದಲ್ಲಿ 21 ಕಡೆ ತಡೆಗೋಡೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಂದಾಜು 94 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಮಳೆಗಾಲದಲ್ಲಿ ಸಂಚಾರಕ್ಕೆ ಅನುಕೂಲವಾಗಲಿದೆ.

ಮಳೆಗಾಲ ಆರಂಭವಾಯಿತ್ತೆಂದರೆ ಕೊಡಗಿನಲ್ಲಿ ರಸ್ತೆ ಕುಸಿತ, ಇಲ್ಲವೆ ಬೆಟ್ಟ ಕುಸಿತ ಎನ್ನುವುದು ಸುಮಾರು ವರ್ಷಗಳಿಂದ ಸಾಮಾನ್ಯ ವಿಷಯ ಎನ್ನುವಂತಾಗಿದೆ. ಅದರಲ್ಲೂ ಮೈಸೂರಿನಿಂದ ಮಡಿಕೇರಿ ಮೂಲಕ ಮಾಣಿವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತೀ ವರ್ಷದ ಮಳೆಗಾಲದಲ್ಲಿ ಹೆದ್ದಾರಿ ಕುಸಿತ ಇಲ್ಲವೆ, ಹೆದ್ದಾರಿ ಮೇಲೆ ಬೆಟ್ಟ ಕುಸಿದು ಅನೇಕ ಸಾವು, ಹಾಗೂ ಆಸ್ತಿ ಹಾನಿ ಉಂಟಾಗುತ್ತಿತ್ತು. ಇದರಿಂದಾಗಿ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಸಂಚಾರ ತೀವ್ರ ದುಸ್ಥರವಾಗಿ ಸಂಚಾರಿಗಳಿಗೆ ತೊಂದರೆ ಉಂಟಾಗುತ್ತಿತ್ತು.