
ಬೆಳಗಾವಿ:ಮರಳು, ಜಲ್ಲಿಕಲ್ಲು ಮತ್ತು ಎಂ ಸ್ಯಾಂಡ್ ಸಾಗಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿತರಿಸುವ ಪಾಸ್ನಲ್ಲಿನ ಲೋಪದಿಂದಾಗಿ ಟಿಪ್ಪರ್ ಹಾಗೂ ಲಾರಿ ಮಾಲೀಕರು ದಂಡ ತೆರುವಂತಾಗಿದೆ. ಮರಳು, ಜಲ್ಲಿಕಲ್ಲು ಸಾಗಣೆಯಲ್ಲಾಗುವ ಅಕ್ರಮ ತಡೆಯಲು ಲಾರಿ ಹಾಗೂ ಟಿಪ್ಪರ್ಗಳಿಗೆ ಈಗಾಗಲೇ ‘ಜಿ.ಪಿ.ಎಸ್’ ಅಳವಡಿಸಲಾಗಿದೆ. ಸೆಪ್ಟೆಂಬರ್ ತಿಂಗಳಿಂದ ತಾಂತ್ರಿಕ ಸಮಸ್ಯೆ ಆರಂಭವಾಗಿದ್ದು, ಲಾರಿ ಹಾಗೂ ಟಿಪ್ಪರ್ಗಳ ಮಾಲೀಕರು ಕಂಗಾಲಾಗಿದ್ದಾರೆ.

ಮರಳು, ಜಲ್ಲಿಕಲ್ಲು ಮತ್ತು ಎಂ ಸ್ಯಾಂಡ್ ಸಾಗಿಸಲು ಇಲಾಖೆಯಿಂದ ಆನ್ಲೈನ್ ಮೂಲಕ ಆಯಾ ವಾಹನಗಳಿಗೆ ಲೋಡಿಂಗ್ ಮತ್ತು ಅನ್ಲೋಡಿಂಗ್ ಸ್ಥಳ ನಮೂದಿಸಿ ನಿಗದಿತ ಅವಧಿಗೆ ಪಾಸ್ ನೀಡಲಾಗುತ್ತದೆ. ಇದನ್ನು ಆಧರಿಸಿ ವಾಹನಗಳ ಮಾಲೀಕರೇ ತಪ್ಪಗೆಕುತ್ತಿದ್ದಾರೆಂದು ಪರಿಗಣಿಸಿ ಕೇಂದ್ರ ಕಚೇರಿ ಅಧಿಕಾರಿಗಳು ವಾಹನಗಳ ಮಾಲೀಕರಿಗೆ ನೋಟಿಸ್ ನೀಡಿ, ದಂಡ ಪಾವತಿಸಲು ಸೂಚಿಸುತ್ತಿದ್ದಾರೆ.
ಪಾಸ್ ವಿತರಣೆ ತಂತ್ರಾಂಶ ಉನ್ನತೀಕರಿಸಲಾಗುತ್ತಿದೆ ಎಂದು ಆರೇಳು ತಿಂಗಳಿನಿಂದ ಮರಳು, ಜಲ್ಲಿಕಲ್ಲು ವಿತರಿಸುವ ನಿಗದಿತ ಸ್ಥಳಕ್ಕೆ ಪಾಸ್ ನೀಡುತ್ತಿಲ್ಲ. ಬದಲಾಗಿ ಸಮೀಪದ ಬೇರೊಂದು ಸ್ಥಳಕ್ಕೆ ನೀಡುತ್ತಿದ್ದಾರೆ. ಅಲ್ಲದೆ, ಸಾಗಣೆ ಮಾರ್ಗ ಮಧ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಈ ಮಾರ್ಗದಲ್ಲಿ ಸಾಗುವಂತಿಲ್ಲ. ಪಾಸ್ ಪಡೆದಿರುವ ಮಾರ್ಗದಲ್ಲೇ ಸಾಗಬೇಕೆಂದು ದಂಡ ವಿಧಿಸುತ್ತಿದ್ದಾರೆ. ಇಲಾಖೆ ಸರಿಯಾಗಿ ಪಾಸ್ ವಿತರಿಸದೇ ನಮಗೆ ದಂಡ ವಿಧಿಸುತ್ತಿರುವುದು ಸರಿಯಲ್ಲ. ಇದನ್ನು ಪ್ರಶ್ನಿಸಿದರೆ, ತೂಕ ಹಾಗೂ ವೇಗ ಮತ್ತಿತರ ಕಾರಣ ಹೇಳಿ ಮತ್ತಷ್ಟು ದಂಡ ವಿಧಿಸುತ್ತಾರೆ.
ದಂಡ ಪಾವತಿಸದಿದ್ದರೆ ವಾಹನಗಳನ್ನು ಬ್ಲ್ಯಾಕ್ ಲಿಸ್ಟ್ಗೆ ಸೇರಿಸುವುದಾಗಿ ಈಗಾಗಲೇ 700ಕ್ಕೂ ಅಧಿಕ ವಾಹನಗಳ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ,’’ ಎಂದು ಟಿಪ್ಪರ್ ಮಾಲೀಕರಾದ ರಾಹುಲ್ ಹಂಚಿನಮನಿ ಹಾಗೂ ಪ್ರಕಾಶ ಮಾಳಗಿ ಅಳಲು ತೋಡಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯೊಬ್ಬರು, ‘‘ಬೆಳಗಾವಿ ಜಿಲ್ಲಾದ್ಯಂತ 2300ಕ್ಕೂ ಅಧಿಕ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸಲಾಗಿದೆ. ನೂತನ ತಂತ್ರಾಂಶದಲ್ಲಿ ಪಾಸ್ ವಿತರಣೆಗೆ ಸರಿಯಾಗಿ ಜಿ.ಪಿ.ಎಸ್ ಮ್ಯಾಪಿಂಗ್ ಪೂರ್ಣಗೊಂಡಿಲ್ಲ. ಹೀಗಾಗಿ, ಆರು ತಿಂಗಳಲ್ಲಿಒಟ್ಟು 66 ಸಾವಿರ ದೂರುಗಳು ಬಂದಿವೆ.
ಈ ಸಮಸ್ಯೆ ಸರಿಪಡಿಸುವಂತೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ,’’ ಎಂದರು. ಪಾಸ್ ಸಮಸ್ಯೆಯಿಂದ ದುಡಿಮೆ ಇಲ್ಲದೆ ನೂರಾರು ಮಾಲೀಕರು ವಾಹನದ ಸಾಲದ ಕಂತು ಪಾವತಿಸಲು ಪರದಾಡುತ್ತಿದ್ದಾರೆ. ಕೆಲವರು ಈಗಾಗಲೇ ವಾಹನ ಮಾರಾಟ ಮಾಡಿದ್ದಾರೆ. ಇಲಾಖೆ ಸಮರ್ಪಕ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳಬೇಕು. ತಾಂತ್ರಿಕ ತೊಂದರೆಯಿಂದ ದಾಖಲಿಸಿದ ಪ್ರಕರಣ ಕೈಬಿಡಬೇಕು ಜಿ.ಪಿ.ಎಸ್ ಮ್ಯಾಪಿಂಗ್ ಪೂರ್ಣಗೊಳ್ಳದ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿಗೆ ‘ಡೆಸ್ಟಿನೇಷನ್ ನಾಟ್ ರೀಚ್ಡ್’ ಎಂದು ನೋಟಿಸ್ ಬರುತ್ತಿವೆ. ಈ ಬಗ್ಗೆ ಮಾಲೀಕರೊಂದಿಗೂ ಚರ್ಚಿಸಿ, ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರ ತಾಂತ್ರಿಕ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.