
ವಿಜಯನಗರ: ಇತ್ತೀಚೆಗೆ ಹಲವಾರು ಕಡೆಗಳಲ್ಲಿ ಸಾವಿರಾರು ಕೋಳಿಗಳ ಮಾರಣಹೋಮವೇ ಆಗಿದ್ದು ಇದರಿಂದ ಹಕ್ಕಿ ಜ್ವರದಂತಹ ಕಾಯಿಲೆಗಳ ಭೀತಿಯು ಆವರಿಸಿಕೊಂಡಿತ್ತು. ಇದೀಗ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿಯ ಖಂಡಿಕೇರಿ ತಾಂಡಾ ನಿವಾಸಿ ಪರಮೇಶ್ ನಾಯ್ಕ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿನ ಸುಮಾರು ಮೂರು ಸಾವಿರ ಕೋಳಿಗಳು ಇದ್ದಕ್ಕಿದ್ದಂತೆ ಮೃತಪಟ್ಟಿವೆ.

ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಜ್ಞ ವೈದ್ಯರು ಕೋಳಿಗಳ ಮಾದರಿ ಸಂಗ್ರಹಿಸಿದ್ದಾರೆ. ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಿಲ್ಲ. ವಿಷಪೂರಿತ ಆಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಮಾದರಿ ಸಂಗ್ರಹಿಸಲಾಗಿದ್ದು, ಕೋಳಿಗಳ ಸಾವಿಗೆ ನಿಖರ ಕಾರಣ ಪತ್ತೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ.

ಯುವಕ ಪರಮೇಶ್ ನಾಯ್ಕ ಅವರು ಮೂರು ತಿಂಗಳ ಹಿಂದೆಯಷ್ಟೇ ಕೋಳಿ ಫಾರ್ಮ್ ಆರಂಭಿಸಿದ್ದರು. ಇದೀಗ, ಇದ್ದಕ್ಕಿದ್ದಂತೆ ಮೂರು ಸಾವಿರ ಕೋಳಿ ಮೃತಪಟ್ಟಿದ್ದು, ಆತಂಕ ಶುರುವಾಗಿದೆ. ಕೋಳಿ ಫಾರ್ಮ್ ಆರಂಭಿಸಿದ್ದರು. ಈ ಮೂಲಕ ತಾನು ಸ್ವಾವಲಂಬಿ ಬದುಕು ನಡೆಸಲು ಮುಂದಾಗಿದ್ದರು. ಇದೀಗ ಯುವಕ ಕೋಳಿಗಳ ಸಾವಿನಿಂದ ಕಂಗಾಲಾಗಿದ್ದಾರೆ. ಹಾಕಿದ ಬಂಡವಾಳವೂ ಬಾರದೆ ನಷ್ಟದ ಪರಿಸ್ಥಿತಿ ಎದುರಾಗಿದೆ.