
ಚಿಕ್ಕಮಂಗಳೂರು: ಎಡೆ ಬಿಡದೆ ಸುರಿಯುವ ಮಳೆಯಿಂದ ಚಾರ್ಮಾಡಿ ಘಾಟಿ ಈಗ ನೋಡುಗರ ಕಣ್ಣುಗಳಿಗೆ ಹಬ್ಬವಾಗಿದೆ. ಚುಮುಚುಮು ಚಳಿ, ದಟ್ಟ ಮಂಜು, ಜಡಿ ಮಳೆ ನಡುವೆ ಚಾರ್ಮಾಡಿಯ ರೋಮಾಂಚನಕಾರಿ ಹಾವು ಏಣಿಯ ಆಟದಂತೆ ಭಾಸವಾಗುವ ಪಯಣ, ಹಚ್ಚ ಹಸಿರಿನ ಸೀರೆ ಧರಿಸಿ ಕಂಗೊಳಿಸುವ ಭೂಮಿ ತಾಯಿ. ಮುಗಿಲೆತ್ತರದ ಬೆಟ್ಟಗುಡ್ಡಗಳ ನಡುವೆ ರಸ್ತೆ ಉದ್ದಕ್ಕೂ ಮಂಜಿನ ಕಣ್ಣಾಮುಚ್ಚಾಲೆ. ಹಸಿರ ವನರಾಶಿ ನಡುವೆ ಸಾಗುವ ಬೆಳ್ಮುಗಿಲ ಸಾಲು. ದಿನಕರನ ಕಿರಣಕ್ಕೆ ನಾಚಿ ನೀರಾಗುವ ವೈಯ್ಯಾರದ ಮಂಜು. ರಸ್ತೆ ಉದ್ದಕ್ಕೂ ಅಲ್ಲಲ್ಲಿ ಧುಮ್ಮಿಕ್ಕುವ ಜಲಪಾತದ ಸೊಬಗು!

ಈಗಂತೂ ಚಾರ್ಮಾಡಿ ಘಾಟ್ನ ಸೊಬಗನ್ನು ಸವಿಯುವುದೇ ಅಧ್ಬುತ ಅನುಭವವಾಗಿದೆ. ಮನತಣಿಸುವ ಅನುಭವ. ಪ್ರಕೃತಿಯ ತವರು ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಿ ನಿಸರ್ಗ ಮಾತೆ ತನ್ನ ನೈಜ ಸೊಬಗನ್ನು ದರ್ಶನ ಮಾಡಿಸುತ್ತಿದ್ದಾಳೆ. ಘಾಟಿ ರಸ್ತೆ ಉದ್ದಕ್ಕೂ ಧುಮ್ಮಿಕ್ಕುವ ಜಲಪಾತಗಳು ಹೊಸ ಲೋಕವನ್ನೇ ಸೃಷ್ಟಿಸಿವೆ.
ಕಾಫಿನಾಡು ಅಂದರೆ ಸಾಕು, ಪ್ರಕೃತಿಯ ಸೌಂದರ್ಯ ರಾಶಿ ಕಣ್ಮುಂದೆ ನಿಲ್ಲುತ್ತೆ. ಬೆಟ್ಟ, ಗುಡ್ಡಗಳ ಸಾಲು, ಬಾನಿಗೆ ಮುತ್ತಿದ್ದುವ ಮಂಜಿನ ರಾಶಿ. ನಿರಂತರ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ, ಚಾರ್ಮಾಡಿ ಘಾಟಿಯ ಸೊಬಗನ್ನು ಇಮ್ಮಡಿಗೊಳಿಸಿದೆ.

ಮಳೆಗಾಲ ಬಂತೆಂದರೆ ಸಾಕು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನ ವರ್ಣಿಸಲು ಪದಗಳೇ ಸಾಲದು. ನದಿ, ತೊರೆಗಳು ಮೈದುಂಬಿ ಹರಿಯುತ್ತವೆ. ಬಂಡೆಗಳ ಮೇಲಿನಿಂದ ಜುಳು ಜುಳು ನಿನಾದ ಗೈಯ್ಯುತ್ತಾ ಧುಮ್ಮಿಕ್ಕೋ ಜಲಧಾರೆಗಳು ಪ್ರಕೃತಿಯೇ ಸುರಿಯುವ ಕ್ಷೀರಧಾರೆಯಂತೆ. ಮಂಜಿನ ಕಣ್ಣಾಮುಚ್ಚಾಲೆ ಆಟ ಪ್ರವಾಸಿಗರ ಪಾಲಿನ ಸ್ವರ್ಗದ ಬಾಗಿಲು ತೆರೆದಿದೆ.
ಹಸಿರ ಬೆಟ್ಟಗಳ ನಡುವೆ ಧುಮ್ಮಿಕ್ಕಿ ಹರಿಯುವ ಜಲಧಾರೆಯ ಕವಲು, ನೆಲಕ್ಕೆ ಮುತ್ತಿಕ್ಕಿ ಪುಟಿಯುವ ನೀರ ಹನಿಗಳ ವೈಭವ. ಮುಂಗಾರಿನ ಸಿಂಚನಕ್ಕೆ ಚಾರ್ಮಾಡಿ ತುಂಬೆಲ್ಲಾ ಜಲಪಾತಗಳ ಚಿತ್ತಾರವೇ ಅನಾವರಣಗೊಂಡಿದೆ. ಈಗ ಚಾರ್ಮಾಡಿ ಘಾಟಿಯನ್ನು ನೋಡಲೆಂದೇ ಜನ ಹೋಗುತ್ತಾರೆ. ಸುಂದರವಾಗಿ ಕಾಣುವ ಹಸಿರ ಸಿರಿಯಲ್ಲಿ ಅಷ್ಟೇ ಅಪಾಯವು ಇರುತ್ತದೆ. ಅಲ್ಲಲ್ಲಿ ಗುಡ್ಡ ಕುಸಿತದಂತಹ ಅನಾಹುತಗಳು ಸಂಭವಿಸುತ್ತವೆ.