
ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ 4 ವರ್ಷವಾದರೂ ಚುನಾವಣೆ ನಡೆದಿಲ್ಲ. ಜನಪ್ರತಿನಿಗಳಿಲ್ಲದೆ ಕಳೆದ ಸುದೀರ್ಘ ಅವಧಿ ಇದಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಜನಪ್ರತಿನಿಗಳಿಲ್ಲದೇ ಅಧಿಕಾರಶಾಹಿ ಆಡಳಿತ ನಡೆಯುತ್ತಿದೆ. ಚುನಾಯಿತ ಪ್ರತಿನಿಗಳು ಇಲ್ಲದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಯಾವಾಗ ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಕಾಡುತ್ತಿದೆ.

ಜಿಲ್ಲಾ ಪಂಚಾಯಿತಿಯ ಅಧಿಕಾರಾವಧಿ 2021ರ ಏಪ್ರಿಲ್ನಲ್ಲಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 2021ರ ಮೇ 7 ರಂದು ಹಿರಿಯ ಐಎಎಸ್ ಅಕಾರಿ ಎನ್.ಜಯರಾಮ್ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು 17 ಜೂನ್ 2023 ರವರೆಗೆ ಅಧಿಕಾರ ನಡೆಸಿದ್ದರು. ನಂತರ 18 ಜೂನ್ 2023ರಿಂದ ಈತನಕ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿರುವ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಆಡಳಿತಾಧಿಕಾರಿಯಾಗಿ ಮುಂದುವರಿದಿದ್ದಾರೆ.ಆಡಳಿತಾಧಿಕಾರಿ ನೇಮಕಗೊಂಡು 4 ವರ್ಷಗಳು ಪೂರ್ಣಗೊಂಡು 5 ನೇ ವರ್ಷಕ್ಕೆ ಕಾಲಿಟ್ಟಿದೆ. ಪಂಚಾಯತ್ ರಾಜ್ ವ್ಯವಸ್ಥೆ ರಚನೆಯಾದ ನಂತರ ಇಷ್ಟೊಂದು ಸುದೀರ್ಘ ಅವಧಿಯವರೆಗೆ ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳು ಆಡಳಿತ ನಡೆಸಿದ ಉದಾಹರಣೆಯೇ ಇಲ್ಲ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಸಜ್ಜಾಗಿ ಮೀಸಲು ಪಟ್ಟಿಯನ್ನು ಪ್ರಕಟಿಸುವಂತೆ ಕೋರಿ ಅನೇಕ ಬಾರಿ ಸರಕಾರಕ್ಕೆ ಪತ್ರ ಬರೆದಿದೆ. ಆದರೆ ಸರಕಾರದಿಂದ ಸ್ಪಂದನೆ ದೊರೆಯದೇ ಇದ್ದಾಗ ಚುನಾವಣಾ ಆಯೋಗ ನ್ಯಾಯಾಲಯದ ಮೊರೆ ಹೋಗಿತ್ತು. ಆ ಸಂದರ್ಭ ಶೀಘ್ರದಲ್ಲೇ ಮೀಸಲು ಪ್ರಕಟಿಸಲಾಗುವುದು ಎಂದು ಸರಕಾರ ಅಫಿಡವಿಟ್ ಸಲ್ಲಿಸಿತ್ತು. ಆದರೆ ವಿವಿಧ ಕಾರಣಗಳನ್ನು ಮುಂದಿಟ್ಟು ಸರಕಾರ ಮೀಸಲು ಪ್ರಕಟಿಸುವುದನ್ನು ವಿಳಂಬ ಮಾಡುತ್ತಲೇ ಇದೆ. ಈಗಾಗಲೇ ಕ್ಷೇತ್ರಗಳ ಮರು ವಿಂಗಡಣೆ ಕಾರ್ಯ ಪೂರ್ಣಗೊಂಡಿದ್ದು, ಕ್ಷೇತ್ರವಾರು ಮೀಸಲು ನಿಗದಿಪಡಿಸುವುದು ಮಾತ್ರ ಬಾಕಿ ಉಳಿದಿದೆ. ಸರಕಾರ ಮೀಸಲು ನಿಗದಿ ಮಾಡಲು ಮನಸ್ಸು ಮಾಡಿದರೆ ಶೀಘ್ರದಲ್ಲಿಯೇ ಚುನಾವಣೆ ನಡೆಯುವ ಸಾಧ್ಯತೆ ಇದೆ.
2016 ರಲ್ಲಿ ಜಿಪಂ ಚುನಾವಣೆ:
ಜಿಲ್ಲಾ ಪಂಚಾಯಿತಿಗೆ 2016ರ ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ನಡೆಯಿತು. 49 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ 22, ಜೆಡಿಎಸ್ 18, ಬಿಜೆಪಿ 8 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಆಯ್ಕೆಗೊಂಡಿದ್ದರು. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟಿತ್ತು. ಅಧ್ಯಕ್ಷರಾಗಿ ಜೆಡಿಎಸ್ನ ನಯೀಮಾ ಸುಲ್ತಾನ್, ಉಪಾಧ್ಯಕ್ಷರಾಗಿ ಕಯ್ಯಂಬಳ್ಳಿ ನಟರಾಜ್ ಆಯ್ಕೆಗೊಂಡರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇತ್ತು.
ನಂತರ 2019 ರ ಫೆಬ್ರವರಿ 23ರಂದು ತೆರವಾದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಆ ಸಂದರ್ಭ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಆಡಳಿತ ಇದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲೂ ಜೆಡಿಎಸ್-ಕಾಂಗ್ರೆಸ್ ನಡುವೆ ಅಧಿಕಾರಕ್ಕೆ ಮೈತ್ರಿ ಏರ್ಪಟ್ಟಿತ್ತು. ಅಧ್ಯಕ್ಷರಾಗಿ ಜೆಡಿಎಸ್ನ ಬಿ.ಸಿ. ಪರಿಮಳಾ ಶ್ಯಾಮ, ಉಪಾಧ್ಯಕ್ಷರಾಗಿ ಕಾಂಗ್ರೆಸ್ನ ಗೌರಮ್ಮ ಆಯ್ಕೆಗೊಂಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಯೀಮಾ ಸುಲ್ತಾನ್ ರಾಜೀನಾಮೆ ನೀಡಿದಾಗ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿದ್ದ ಎಸ್.ಆರ್.ನಂದೀಶ್ 46 ದಿನಗಳ ಕಾಲ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಚುನಾವಣೆ ನಡೆಯದೇ ಇರುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಜಿ.ಪಂ ಮತ್ತು ತಾ.ಪಂಗಳಿಗೆ ಬರುತ್ತಿದ್ದ ಅನುದಾನ ಸ್ಥಗಿತಗೊಂಡಿದೆ. ಜನ ಸೇವೆ ಮಾಡುವ ಹಂಬಲದಲ್ಲಿದ್ದ ಜನಪ್ರತಿನಿಗಳಿಗೆ ಅಧಿಕಾರವಿಲ್ಲದೇ ಪೂರ್ಣ ಪ್ರಮಾಣದಲ್ಲಿ ಸೇವೆ ಮಾಡಲು ಸಾಧ್ಯವಾಗದಂತೆ ಆಗಿದೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಆದರೆ ಸ್ವಾಯತ್ತ ಸಂಸ್ಥೆಯಾಗಿರುವ ಆಯೋಗ ಸಕಾಲದಲ್ಲಿ ಚುನಾವಣೆ ನಡೆಸದೇ ಇರುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಆಯೋಗ ತುರ್ತಾಗಿ ಕ್ರಮ ವಹಿಸಬೇಕಿದೆ.