
ವಿಜಯಪುರ: ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಹೊನಗನಳ್ಳಿ ಬಳಿ 70 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಿದ ರೈಲ್ವೇ ಮೇಲ್ಸೇತುವೆ ಜೂ.17ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳುತ್ತಿದ್ದು, ರೈಲ್ವೇ ಗೇಟ್ ಹಾಕಿದಾಗ ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಲ್ಲುವ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುತ್ತಿದೆ. ಹೊನಗನಳ್ಳಿ ರೈಲ್ವೇ ಮೇಲ್ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವುದರಿಂದ ವಾಹನಗಳ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಜಯಪುರ-ಹುಬ್ಬಳ್ಳಿ ಮಾರ್ಗದಲ್ಲಿ ಸುಗಮ ಸಂಚಾರಕ್ಕಾಗಿ ಹೊನಗನಹಳ್ಳಿ ಕ್ರಾಸಿಂಗ್ನಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು.

j3tvkannada
ಅದರಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಕೇಂದ್ರ ಸರಕಾರ 78.88 ಕೋಟಿ ರೂ. ಮಂಜೂರು ಮಾಡಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗುತ್ತಿದೆ ಎಂದರು. ಸಂಚಾರ ಸಮಸ್ಯೆ ನಿವಾರಣೆಗೆ 1.51 ಕಿಮೀ ಉದ್ದ ಮೇಲ್ಸೇತುವೆ ಮುಂಜೂರಾಗಿ 2021ರಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗಿತ್ತು,
ಮೇಲ್ಸೇತುವೆ ಕಾಮಗಾರಿಯನ್ನು ರೈಲ್ವೇ ಇಲಾಖೆಯ ತಾಂತ್ರಿಕತೆ ಹಾಗೂ ಅನುಮತಿ ಮೇರೆಗೆ ಕೈಗೊಳ್ಳಬೇಕಿತ್ತು. ಸುಮಾರು 30 ಮೀಟರ್ನಷ್ಟು ಸ್ಟೀಲ್ ಬ್ರಿಡ್ಜ್ ನಿರ್ಮಿಸಲಾಗಿದೆ. ಇದಕ್ಕಾಗಿ ಬೋಸ್ಟರಿಂಗ್ ಗರ್ಡರ್ ಕೂರಿಸಲಾಗಿದೆ. ಬೋಸ್ಟರಿಂಗ್ ಗರ್ಡರ್ ಅನ್ನು ತಮಿಳುನಾಡಿನ ಹೊಸೂರಿನಲ್ಲಿ ತಯಾರಿಸಿ ಅಲ್ಲಿಂದ ತಂದು ಜೋಡಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ಗಳು ವಿವರಿಸಿದರು. ಬೋಸ್ಟರಿಂಗ್ ಗರ್ಡರ್ ಜೋಡಣೆ ಕಾಮಗಾರಿ ವೇಳೆ ರೈಲು ಸಂಚಾರ ಸ್ಥಗಿತಗೊಳಿಸಬೇಕಿತ್ತು. ರೈಲ್ವೇ ಇಲಾಖೆಯು ಪ್ರತಿದಿನ 2 ಗಂಟೆ ರೈಲು ಸಂಚಾರಕ್ಕೆ ಬ್ರೇಕ್ ಕೊಡುತ್ತಿತ್ತು. ಆ ಅವಧಿಯಲ್ಲಿ ಕಡಿಮೆ ಕಾಮಗಾರಿ ಸಾಧ್ಯವಾಗುತ್ತಿತ್ತು. ಬಿಡುವಿಲ್ಲದ ರೈಲು ಸಂಚಾರ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಕೆಲವು ತೊಡಕಿದ್ದ ಕಾರಣ ಕಾಮಗಾರಿ ವಿಳಂಬವಾಯಿತು. ಗುತ್ತಿಗೆದಾರರಿಗೆ 2 ಬಾರಿ ಕಾಮಗಾರಿ ಅವಧಿ ವಿಸ್ತರಿಸಬೇಕಾಯಿತು ಎಂದು ಎಂಜಿನಿಯರ್ಗಳು ತಿಳಿಸಿದರು.

ವಿಜಯಪುರ -ಗದಗ ನಡುವಿನ ರೈಲ್ವೇ ಮಾರ್ಗದ ಡಬ್ಲಿಂಗ್ ಕಾಮಗಾರಿ ಪೂರ್ಣವಾಗಿಲ್ಲದ ಕಾರಣಕ್ಕೆ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲು ಸಾಧ್ಯವಾಗಿಲ್ಲ. ಕಾಮಗಾರಿ ಪೂರ್ಣವಾದ ಬಳಿಕ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದರು. ವಿಜಯಪುರ ನಗರ ದಿನೇ ದಿನೆ ಬೆಳೆಯುತ್ತಿದ್ದು ವಾಹನಗಳ ದಟ್ಟಣೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ರಿಂಗ್ ರೋಡ್ ನಿರ್ಮಾಣಕ್ಕೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದೆ. ಇದೀಗ 770 ಕೋಟಿ ರೂ. ಮೊತ್ತದಲ್ಲಿ 47 ಕಿಮೀ ಉದ್ದನೆಯ ರಿಂಗ್ರೋಡ್ ನಿರ್ಮಾಣಕ್ಕೆ ಡಿ.ಪಿ.ಆರ್ ಸಿದ್ಧವಾಗಿದೆ ಎಂದು ಸಂಸದ ಜಿಗಜಿಣಗಿ ತಿಳಿಸಿದರು.
ವಿಜಯಪುರದ ಗಣೇಶ ನಗರ ಸಮೀಪ ಸೊಲ್ಲಾಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವಲ್ಲಿ ವಾಹನಗಳ ಸರಾಗ ಸಂಚಾರಕ್ಕೆ ಅನುಕೂಲವಾಗುವಂತೆ 68 ಕೋಟಿ ರೂ. ಮೊತ್ತದ ಆರ್ಒಬಿ ಮಂಜೂರಾಗಿದೆ. ಶೀಘ್ರದಲ್ಲೇ ಭೂಮಿಪೂಜೆ ನೆರವೇರಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು. ವಿಜಯಪುರ ನಗರದ ಬಾಗಲಕೋಟೆ ರಸ್ತೆಯಲ್ಲಿ ವಜ್ರ ಹನುಮಾನ್ ದೇವಸ್ಥಾನದ ಬಳಿ ರೈಲ್ವೇ ಅಂಡರ್ ಪಾಸ್ ನಿರ್ಮಾಣಕ್ಕೂ ಬೇಡಿಕೆ ಸಲ್ಲಿಸಿದ್ದು, ಈ ಸಂಬಂಧದ ಡಿ.ಪಿ.ಆರ್.ಗೆ ಶೀಘ್ರದಲ್ಲೇ ಅನುಮೋದನೆ ಸಿಗಲಿದೆ ಎಂದರು. ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವನ್ನಾಗಿ ಮೇಲ್ದರ್ಜೆಗೇರಿಸಲು ಡಿ.ಪಿ.ಆರ್ ಸಿದ್ಧವಾಗಿದೆ ಎಂದು ರಮೇಶ ಜಿಗಜಿಣಗಿ ತಿಳಿಸಿದರು. ಬಿ.ಜೆ.ಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ಸಂಸದ ರಮೇಶ ಜಿಗಜಿಣಗಿ ಮತ್ತು ಪ್ರಧಾನಿ ಮೋದಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.