
ಉತ್ತರ ಕನ್ನಡ(ಕಾರವಾರ): ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ತುಸು ಕಡಿಮೆಯಾಗಿದ್ದರೂ, ಅನೇಕ ಕಡೆಗಳಲ್ಲಿ ಭೂಕುಸಿತದ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕಳೆದ ವರ್ಷ ಶಿರೂರಿನಲ್ಲಿ ಸಂಭವಿಸಿದ್ದ ಭೂಕುಸಿತದ ಕಹಿ ನೆನಪಿನಿಂದಲೇ ಜಿಲ್ಲೆಯ ಜನರು ಇನ್ನೂ ಹೊರ ಬಂದಿಲ್ಲ. ಅಂಥದ್ದರಲ್ಲಿ ಈ ವರ್ಷ ಕೂಡ ಅನೇಕ ಕಡೆಗಳಲ್ಲಿ ಭೂಕುಸಿತ, ಗುಡ್ಡಕುಸಿತ ಸಂಭವಿಸಿವೆ.

j3tvkannada
ಹೀಗಾಗಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ (GSI) ತಜ್ಞರ ತಂಡ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ತಂಡ ಬೀಡು ಬಿಟ್ಟಿದೆ. ಕಾರವಾರ ತಾಲೂಕಿನಲ್ಲಿ ನಾಲ್ಕು ಕಡೆ ಗುಡ್ಡ ಕುಸಿತ ಆಗಿದೆ. ಹೀಗಾಗಿ ಕೆಲವೆಡೆ ಜನರನ್ನು ಸ್ಥಳಾಂತರಿಸಿದ್ದಾರೆ, ಇನ್ನು ಕೆಲವೆಡೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ.
ಕಾರವಾರ ತಾಲೂಕಿನ ಬಹುತೇಕ ಕಡೆ ಜನರು ಗುಡ್ಡ ಕುಸಿತದ ಆತಂಕ ಪಡುವ ಅಗತ್ಯ ಇಲ್ಲ ಎಂದು ಇದೀಗ ತಜ್ಞರು ಹೇಳಿದ್ದಾರೆ. ಕಾರವಾರ ನಗರದ ಹಬುವಾಡ ಪ್ರದೇಶದ ಮನೆಗಳಲ್ಲಿ ಜನ ನೆಲೆಸಬಹುದು. ಅಲ್ಲಿ ಗುಡ್ಡ ಜಾಸ್ತಿ ಕುಸಿದರೂ ಮನೆಗಳಿಗೆ ಹೆಚ್ಚಿನ ಹಾನಿ ಆಗಲ್ಲ ಎಂದು ತಜ್ಞರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಸುರಂಗದ ಬಳಿ ಗುಡ್ಡ ಕುಸಿಯುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದ್ದಾರೆ.
ಶಿರಸಿ ತಾಲೂಕಿನ ದೇವಿಮನೆ ಘಟ್ಟದಲ್ಲಿ ಮಾತ್ರ ಮುನ್ನೆಚ್ಚರಿಕೆ ವಹಿಸಲು ತಜ್ಞರು ಸೂಚನೆ ನೀಡಿದ್ದಾರೆ. ದೇವಿಮನೆ ಘಟ್ಟ ಭಾಗದ ಏಳು ಕಿ.ಮೀ ಅಂತರದಲ್ಲಿ ಐದು ಬಾರಿ ಗುಡ್ಡ ಕುಸಿತ ಆಗಿದೆ. ಗುಡ್ಡ ಕುಸಿತ ಆಗುತ್ತಿರುವ ಸ್ಥಳಗಳಲ್ಲಿ ಹೆಚ್ಚಿನ ಮಣ್ಣನ್ನು ತೆಗೆಯದಂತೆ ತಜ್ಞರು ಸಲಹೆ ನೀಡಿದ್ದಾರೆ. ದೇವಿಮನೆ ಘಟ್ಟದ ಮೂಲಕ ಹಾದು ಹೋಗುವ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯನ್ನು ರಾತ್ರಿ ಹೊತ್ತು ಬಂದ್ ಮಾಡುವಂತೆ ತಜ್ಞರು ಶಿಫಾರಸು ಮಾಡಿದ್ದಾರೆ. ಈ ರಸ್ತೆಯಲ್ಲಿ ಕಳೆದ 2 ವಾರದ ಅವಧಿಯಲ್ಲಿ ಕೆಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ.