
ಚಿತ್ರದುರ್ಗ: ಭಾರತೀಯ ಸಂಸ್ಕೃತಿ, ಪರಂಪರೆಯ ಧ್ಯೋತಕವಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಯೋಗ ದಿನೇ ದಿನೇ ಜಾಗತಿಕ ಮನ್ನಣೆ ಗಳಿಸುತ್ತಿದೆ.

j3tvkannada
ಈಗ ಅಂತಾರಾಷ್ಟ್ರ ಮಟ್ಟದಲ್ಲೂ ಯೋಗ ಸಮ್ಮೇಳನ, ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು, ಅಲ್ಲಿಯೂ ಭಾರತೀಯರು ಪಾರಮ್ಯ ಮೆರೆಯುತ್ತಿದ್ದಾರೆ. ಇದಕ್ಕೆ ಕೋಟೆನಾಡಿನ ಕುವರಿ ಶ್ರೀಧಾ ಕೂಡಾ ಸೇರ್ಪಡೆ ಆಗಿರುವುದು ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ಸಂಗತಿಯಾಗಿದೆ. ವಿಯೇಟ್ನಾಂ ದೇಶದ ವೊಚಿಗನ್ ನಗರದಲ್ಲಿ ನಡೆದ ಎರಡನೇ ಅಂತರಾಷ್ಟ್ರೀಯ ಯೋಗ ಸಮ್ಮೇಳನ ಹಾಗೂ ಸ್ಪರ್ಧೆಯಲ್ಲಿ ಕೋಟೆನಾಡಿನ ಪ್ರತಿಭೆ ಎಚ್.ಎಂ.ಶ್ರೀಧಾ ಚಿನ್ನದ ಪದಕ ಗೆದ್ದಿದ್ದಾರೆ.
ವಿಯೇಟ್ನಾಂ, ಆಸ್ಟ್ರೇಲಿಯಾ, ಕಾಂಬೋಡಿಯಾ ಹಾಗೂ ಭಾರತದ ಸ್ಪರ್ಧಿಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಚಿತ್ರದುರ್ಗದ ಶ್ರೀಧಾ ವಿಜೇತರಾಗಿದ್ದಾರೆ. ವಿ ಯೋಗ ವರ್ಲ್ಡ್ ಸಂಸ್ಥೆಯಿಂದ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಚಿತ್ರದುರ್ಗದ ಶ್ರೀಧಾ ಅವರ ಯೋಗ ಗುರು ಅನಿಲ್ಕುಮಾರ್ ರಾಯ್ಕರ್ ಕೂಡಾ ಭಾಗವಹಿಸಿದ್ದರು. ಈ ಯೋಗ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಅನಿಲ್ ಕುಮಾರ್ ರಾಯ್ಕರ್ ಕೂಡಾ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ಗುರು ಹಾಗೂ ಶಿಷ್ಯೆ ಇಬ್ಬರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಪರಾಕ್ರಮ ಮೆರೆದಿದ್ದಾರೆ.
ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಬಸವೇಶ್ವರ ಟ್ರೇಡಿಂಗ್ ಕಂಪನಿಯ ಪಾಲುದಾರರಾದ ಕೊಟ್ರೇಶ್ ಶೆಟ್ಟಿ ಅವರ ಮೊಮ್ಮಗಳಾಗಿರುವ ಶ್ರೀಧಾ ತಂದೆ ಮಲ್ಲಿಕಾರ್ಜುನ್ ಹಾಗೂ ತಾಯಿ ಪೃಥ್ವಿ. ಸದ್ಯ ದಾವಣಗೆರೆಯಲ್ಲಿ ಎಸ್.ಎಸ್ಎಲ್.ಸಿ ಅಧ್ಯಯನ ಮಾಡುತ್ತಿದ್ದು, ತನ್ನ 8ನೇ ವಯಸ್ಸಿನಿಂದಲೇ ಯೋಗಾಭ್ಯಾಸದಲ್ಲಿ ತೊಡಗಿ ಅನೇಕ ಪ್ರಶಸ್ತಿ ಪುರಸ್ಕಾರ ಪಡೆದುಕೊಂಡಿದ್ದಾರೆ.
ಶ್ರೀಧಾ 20ಕ್ಕೂ ಹೆಚ್ಚು ಕಠಿಣ ಯೋಗಾಸನಗಳು ಸೇರಿದಂತೆ 200ಕ್ಕೂ ಹೆಚ್ಚು ಆಸನಗಳನ್ನು ಸುಲಲಿತವಾಗಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕಳೆದ 8 ವರ್ಷಗಳಿಂದಲೂ ನಿತ್ಯ ಒಂದು ಗಂಟೆ ಯೋಗಾಭ್ಯಾಸಕ್ಕೆ ಮೀಸಲಿಟ್ಟಿದ್ದು, 2018ರಲ್ಲಿ ಮೈಸೂರು ದಸರಾ ಉತ್ಸವದಲ್ಲಿ ಯೋಗ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇದೇ ವರ್ಷ ಕಡೂರಿನ ಶ್ರೀ ರಾಘವೇಂದ್ರ ಯೋಗ ಸಂಸ್ಥೆಯಿಂದ ಆಯೋಜಿಸಿದ್ದ 6ನೇ ರಾಜ್ಯಮಟ್ಟದ ಯೋಗಾಸನ ಚಾಂಪಿಯನ್ಶಿಪ್ನಲ್ಲೂ ಪ್ರಥಮ ಸ್ಥಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.