
ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರದ ಬಳಿ ಇರುವ ಜಮೀನಿನಲ್ಲಿ ಅಣ್ಣನನ್ನು ಕೊಲೆ ಮಾಡಿದ ತಮ್ಮ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಕೊಲೆ ಪ್ರಕರಣ ಭೇದಿಸಲು ಮೂಕ ಪ್ರಾಣಿಗಳಾದ ನಾಯಿ ಮತ್ತು ಮೇಕೆಗಳ ಹಿಂಡು ಸಹಾಯ ಮಾಡಿವೆ. ಪ್ರಾಣಿಗಳ ನಡವಳಿಕೆಯು ಪ್ರಮುಖ ಪ್ರಶ್ನೆಗಳನ್ನು ಹುಟ್ಟು ಹಾಕಿದಾಗ, ಒಂದು ತಿಂಗಳ ಹಳೆಯ ನಿಗೂಢತೆಯು ಬಯಲಾಯಿತು. ಅಂತಿಮವಾಗಿ ಪೊಲೀಸರು ಕೊಲೆಯಾದ ವ್ಯಕ್ತಿ ಕಿರಿಯ ಸಹೋದರನನ್ನು ಬಂಧಿಸಿದ್ದಾರೆ, ಯಮಕನಮರಡಿ ಇನ್ಸ್ಪೆಕ್ಟರ್ ಜಾವೇದ್ ಮುಷಾಪುರಿ, ಪಿಎಸ್ಐ ಎಸ್ ಕೆ ಮನ್ನಿಕೇರಿ ಮತ್ತು ಇತರರ ನೇತೃತ್ವದ ತಂಡವು ಪ್ರಕರಣವನ್ನು ಭೇದಿಸಲು ಅವಿಶ್ರಾಂತವಾಗಿ ಶ್ರಮಿಸಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.

j3tvkannada
ಹಟ್ಟಿಯಾಲೂರು ಗ್ರಾಮದ ನಿವಾಸಿ ರಾಯಪ್ಪ ಸುರೇಶ್ ಕಾಮತಿ (28) ಮೇ 8 ರಂದು ಸಂಜೆ 6.30 ರ ಸುಮಾರಿಗೆ ಕೊಲೆಯಾಗಿ ಪತ್ತೆಯಾಗಿದ್ದಾರೆ. ಆ ದಿನ ಮೊದಲು ಅವರು ಸುಮಾರು 60 ಮೇಕೆಗಳನ್ನು ಮೇಯಿಸಲು ಹೋಗಿದ್ದರು. ಅವರ ದೇಹದಲ್ಲಿ ಕ್ರೂರ ದಾಳಿಯ ಗುರುತುಗಳಿದ್ದವು, ಅವರ ಕಣ್ಣುಗಳಲ್ಲಿ ಮೆಣಸಿನ ಪುಡಿ ಕಂಡು ಬಂದಿತ್ತು. ಕೊಲೆ ಮಧ್ಯಾಹ್ನ 1.30 ರಿಂದ ಸಂಜೆ 6.30ರ ನಡುವೆ ನಡೆದಿದೆ ಎಂದು ತಿಳಿದು ಬಂದಿತ್ತು, ಯಾವುದೇ ಸಿ.ಸಿ.ಟಿ.ವಿ ದೃಶ್ಯಾವಳಿಗಳು, ಮೊಬೈಲ್ ಟವರ್ ಸ್ಥಳದ ಮಾಹಿತಿ ಮತ್ತು ಪ್ರತ್ಯಕ್ಷದರ್ಶಿಗಳು ಇಲ್ಲದ ಕಾರಣ ಪೊಲೀಸರಿಗೆ ಯಾವುದೇ ಸುಳಿವುಗಳು ಸಿಗಲಿಲ್ಲ. ಆದರೆ ಸ್ಥಳೀಯ ಗ್ರಾಮಸ್ಥರಿಂದ ಬಂದ ಸಣ್ಣ ಸುಳಿವು ಮತ್ತು ಪ್ರಾಣಿಗಳ ನಡವಳಿಕೆಯು ತನಿಖೆಯನ್ನು ತಿರುವು ಮುರುವುಗೊಳಿಸಿದವು.
ಕೊಲೆಯಾದ ದಿನ ರಾಯಪ್ಪನ ಎರಡು ನಾಯಿಗಳು ಅವನ ದೇಹದ ಬಳಿ ನಿಷ್ಠೆಯಿಂದ ಕುಳಿತಿರುವುದು ಕಂಡು ಬಂದವು, ಆದರೆ ಇಡೀ ಮೇಕೆಗಳ ಹಿಂಡು ತಾವಾಗಿಯೇ ಮನೆಗೆ ಮರಳಿದ್ದವು. ಇದು ನಿರ್ಣಾಯಕ ಪ್ರಶ್ನೆಯನ್ನು ಹುಟ್ಟು ಹಾಕಿತು, ಮೇಕೆಗಳು ತಮ್ಮ ಕುರುಬನಿಲ್ಲದೆ ಅಪರಾಧದ ಸ್ಥಳದ ಬಳಿಯಿಂದ ಕಾಲುವೆಯನ್ನು ಹೇಗೆ ದಾಟಿದವು? ಎಂಬ ಪ್ರಶ್ನೆ ಮೂಡಿತು. ಪೊಲೀಸರು ದೃಶ್ಯವನ್ನು ಮರು ಸೃಷ್ಟಿಸಿದರು. ಅವರು ಅದೇ ಮೇಕೆಗಳು ಮತ್ತು ನಾಯಿಗಳನ್ನು ರಾಯಪ್ಪನ ದೇಹವು ಪತ್ತೆಯಾದ ಸ್ಥಳಕ್ಕೆ ಕರೆ ತಂದರು. ಅವರ ಕಿರಿಯ ಸಹೋದರ ಬಸವರಾಜ ಸುರೇಶ್ ಕಾಮತಿ (24) ಅವರನ್ನು ಅದೇ ಸ್ಥಳದಲ್ಲಿ ಮಲಗಲು ಹೇಳಿದರು. ಆದರೆ ಗಂಟೆಗಳು ಕಳೆದರೂ ನಾಯಿಗಳು ಅವನನ್ನು ಬಿಡಲು ನಿರಾಕರಿಸಿದವು. ಒಂದೇ ಸಮನೆ ಅವನಿಗೆ ಬೊಗಳುತಿದ್ದವು.
ಈ ನಡವಳಿಕೆಯಿಂದಾಗಿ ಮೇಕೆಗಳನ್ನು ಪರಿಚಿತ ವ್ಯಕ್ತಿಯೊಬ್ಬರು ಮನೆಗೆ ಕರೆದೊಯ್ದಿರಬೇಕು ಎಂದು ಊಹಿಸಲಾಯಿತು. ಜೊತೆಗೆ ಕುಟುಂಬ ಸದಸ್ಯರ ಮೇಲೆ ಅನುಮಾನ ಹೆಚ್ಚಾಯಿತು. ಯಾವ ಕೆಲಸವನ್ನೂ ಮಾಡದೆ ಬಸವರಾಜ್ ಮನೆಯಲ್ಲೇ ಸುಮ್ಮನೆ ಇರುತ್ತಿದ್ದ. ಇದರಿಂದ ರಾಯಪ್ಪ ಮತ್ತು ಮತ್ತೊಬ್ಬ ಸಹೋದರ ದುಂಡಪ್ಪ ಅವರು ಸಿಟ್ಟಾಗಿದ್ದರು. ಕೆಲಸದ ವಿಚಾರವಾಗಿಯೇ ಪರಸ್ಪರರ ಮದ್ಯೆ ಆಗಾಗ ಜಗಳವಾಗುತ್ತಿತ್ತು. ಕೊಲೆ ನಡೆದ ದಿನ ಮತ್ತು ಹಿಂದಿನ ದಿನವೂ ಮನೆಯಲ್ಲಿ ಗಲಾಟೆಯಾಗಿತ್ತು. ಇದರಿಂದ ಆಕ್ರೋಶಗೊಂಡ ಬಸವರಾಜ ಕುರಿ ಮೇಯಿಸಲು ಹೋಗಿದ್ದ ಅಣ್ಣನ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ವಿಚಾರಣೆಯ ಸಮಯದಲ್ಲಿ ಬಸವರಾಜ ಕೊಲೆಯನ್ನು ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.