
ಚಿಕ್ಕಬಳ್ಳಾಪುರ: ರಾಜ್ಯ ಸರಕಾರದ ವಿಶೇಷ ಸಚಿವ ಸಂಪುಟ ಸಭೆಯನ್ನು ನಂದಿಬೆಟ್ಟದಲ್ಲಿ ನಡೆಸಲು ದಿನಗಣನೆ ಆರಂಭವಾಗಿದ್ದು ಪ್ರವಾಸೋದ್ಯಮ ಇಲಾಖೆಯ ನಿರ್ವಹಣೆಯಲ್ಲಿರುವ ಫೈನ್ ಟಾಪ್ ರೆಸ್ಟೋರೆಂಟ್ನಲ್ಲಿ ಸಭೆಯ ಆಯೋಜನೆಗೆ ಬೇಕಾದ ಸಿದ್ಧತೆಗಳು ಭರದಿಂದ ಸಾಗಿವೆ.

j3tvkannada
ಜೂನ್ 19ರ ಮದ್ಯಾಹ್ನ 12ಕ್ಕೆ ವಿಶ್ವವಿಖ್ಯಾತ ನಂದಿಬೆಟ್ಟದ ತುದಿಯಲ್ಲಿರುವ ಫೈನ್ ಟಾಪ್ ರೆಸ್ಟೋರೆಂಟ್ನಲ್ಲಿ 2025ನೇ ಸಾಲಿನ 13ನೇ ವಿಶೇಷ ಸಂಪುಟ ಸಭೆಯನ್ನು ಕರ್ನಾಟಕ ಸರಕಾರ ಆಯೋಜನೆ ಮಾಡಿದೆ. ಸಭೆಯ ಬಳಿಕ ಸುದ್ದಿಗೋಷ್ಟಿಯನ್ನು ಕೂಡ ಏರ್ಪಡಿಸಲಾಗಿದೆ. ಸಭೆಯನ್ನು ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ವಿಭಾಗದ ಜಿಲ್ಲಾಡಳಿತಗಳು ಮುತುವರ್ತಿಯಿಂದ ಸಿದ್ಧತೆಗಳನ್ನು ಮಾಡಿಕೊಂಡಿವೆ.
13ನೇ ವಿಶೇಷ ಸಚಿವ ಸಂಪುಟ ಸಭೆ ನಡೆಯುವ ಕಾರಣವಾಗಿ ನಂದಿಬೆಟ್ಟ ಮತ್ತು ಅದರ ಪರಿಸರವನ್ನು ನವ ವಧುವಿನಂತೆ ಸಿಂಗರಿಸಲಾಗಿದೆ. ಸಭೆಯ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಜೂನ್ 16ರ ಸಂಜೆ 5 ಗಂಟೆಯಿಂದ 20ರ ಸಂಜೆ 5ರ ತನಕ ಸಂಪೂರ್ಣವಾಗಿ ನಿಷೇಧ ಹೇರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.
ನಂದಿಬೆಟ್ಟದ ಮೇಲ್ಭಾಗದಲ್ಲಿರುವ ವಸತಿ ಕೊಠಡಿಗಳ ಮುಂಗಡ ಕಾಯ್ದಿರಿಸುವಿಕೆ ಕೂಡ ನಿಲ್ಲಿಸಲಾಗಿದೆ. ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ 33ಇಲಾಖೆಗಳ ಸಚಿವರು, ಶಾಸಕರು, ಇಲಾಖಾ ಮುಖ್ಯಸ್ಥರು, ಅಧಿಕಾರಿಗಳು ಆಗಮಿಸುತ್ತಾರೆ. ನಂದಿ ಗಿರಿಧಾಮಕ್ಕೆ ಹೋಗಿ ಬರಲು ಒಂದೇ ರಸ್ತೆಯಿರುವ ಕಾರಣ ವಾಹನ ದಟ್ಟಣೆ ಹೆಚ್ಚಿರುತ್ತದೆ. ಜತೆಗೆ ಕಡಿದಾದ ತಿರುವುಗಳಿರುವುದರಿಂದ ಪ್ರವಾಸಿಗರನ್ನು ನಿಯಂತ್ರಿಸುವುದು ಕಷ್ಟಕರವಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಇನ್ನು ಸಚಿವ ಸಂಪುಟ ಸಭೆ ನಡೆಯುವ ದಿನ ಬೆಳಿಗ್ಗೆ ಭೋಗನಂದೀಶ್ವರ ದೇವಾಲಯದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟ ಸಹೋದ್ಯೋಗಿಗಳು ಪೂಜೆ ಸಲ್ಲಿಸಿ ಗುಂಪು ಚಿತ್ರ ತೆಗೆಸಿಕೊಂಡು ನಂತರ ಬೆಟ್ಟದ ಮೇಲಿನ ಸಂಪುಟ ಸಭೆಗೆ ಹಾಜರಾಗುತ್ತಾರೆ ಎಂಬುದು ಶಾಸಕ ಪ್ರದೀಪ್ ಈಶ್ವರ್ ಅವರ ಹೇಳಿಕೆಯಾಗಿದೆ. ಇದೇ ಉದ್ದೇಶಕ್ಕೆ ಜೂನ್11ರಂದು ಐ.ಜಿ.ಪಿ ಮತ್ತು ಅವರ ತಂಡ ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿಶೇಷ ಮುತುವರ್ಜಿವಹಿಸಿ ಸಭೆಯ ಯಶಸ್ಸಿಗೆ ಅಧಿಕಾರಿಗಳೊಟ್ಟಿಗೆ ನಂದಿಬೆಟ್ಟಕ್ಕೆ ಭೇಟಿ ನೀಡಿ ಆಗಬೇಕಾದ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿದ್ದು, ಊಟೋಪಚಾರ ಮತ್ತು ವಸತಿಯ ಬಗ್ಗೆಯೂ ವಿಶೇಷ ಮುತುವರ್ಜಿ ವಹಿಸಿದೆ. ಸಭೆಯಲ್ಲಿ ಎಲ್ಲೂ ಲೋಪಗಳಾಗದಂತೆ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ನೇತೃತ್ವದಲ್ಲಿ 19 ಸಮಿತಿಗಳನ್ನು ರಚಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಊಟೋಪಚಾರದಲ್ಲಿ ಕೂಡ ಜಿಲ್ಲೆಯ ವಿಶೇಷತೆಯನ್ನು ಎತ್ತಿ ಹಿಡಿಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ರಕ್ಷಣೆಯ ವಿಚಾರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಹದ್ಧಿನ ಕಣ್ಣು ಇಡಲಿದೆ. ಬೆಟ್ಟಕ್ಕೆ ಬರುವವರ ಮತ್ತು ಹೋಗುವವರ ಬಗ್ಗೆ ತೀವ್ರ ನಿಗಾ ವಹಿಸಲು ಎಸ್ಪಿ ಕುಶಾಲ್ ಚೌಕ್ಸೆ ತನ್ನ ಅಧೀನ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.