
ಬಾಗಲಕೋಟೆ: ಸರಕಾರ ಅನಧಿಕೃತ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಆಸ್ತಿ ಉತಾರ ನೀಡುವ ನಿರ್ಧಾರ ಒಂದೆಡೆಯಾದರೆ ಅದಕ್ಕೆ ಬೇಕಾದ ದಾಖಲೆಗಳನ್ನು ಹೊಂದಿಸುವಲ್ಲಿ ಜನ ಹೈರಾಣಾಗುತ್ತಿದ್ದಾರೆ.

j3tvkannada
ಸರಕಾರವು ಅನಧಿಕೃತ ಆಸ್ತಿಗಳಿಗೆ ಇ-ಆಸ್ತಿ ಉತಾರ ನೀಡುವುದಾಗಿ ಹೇಳಿ ಮೇ 10 ರವರೆಗೆ ಗಡುವು ನೀಡಿತ್ತು. ಅಧಿಕೃತ ಆಸ್ತಿಗಳಿಗೆ ಎ-ಖಾತೆ ಹಾಗೂ ಅನಧಿಕೃತ ಆಸ್ತಿಗಳಿಗೆ ಬಿ-ಖಾತೆ ನೀಡುವುದಾಗಿ ಘೋಷಿಸಿತ್ತು. ಸರಕಾರ ನೀಡಿದ ಗಡುವಿನೊಳಗೆ ಜನರಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ಇದೀಗ ಮತ್ತೆ ಗಡುವನ್ನು ಮೂರು ತಿಂಗಳು ಅಂದರೆ ಆಗಸ್ಟ್ 10 ರವರೆಗೆ ವಿಸ್ತರಿಸಿದೆ.
ಆಸ್ತಿ ಮಾಲೀಕರ ಬಳಿಯಿರುವ ದಾಖಲೆಗಳ ಆಧಾರದಲ್ಲಿ ಎ-ಖಾತೆ ಅಥವಾ ಬಿ-ಖಾತೆ ನೀಡಬೇಕೊ ಎಂಬ ನಿರ್ಧಾರ ಸ್ಥಳೀಯ ಸಂಸ್ಥೆಗಳದ್ದು ಒಂದೆಡೆಯಾದರೆ, ಹಲವೆಡೆ ಸರಿಯಾದ ದಾಖಲೆ ಕೊಟ್ಟರು, ಇ-ಆಸ್ತಿ ಉತಾರ ನೀಡುವ ವಿಳಂಬದಿಂದಾಗಿ ದಿನಾಲು ಕಚೇರಿಗೆ ಅಲೆದು ಜನ ಸುಸ್ತಾಗುತ್ತಿದ್ದಾರೆ. ಇ-ಆಸ್ತಿ ಉತಾರ ನೀಡುವಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಇದೀಗ ಇಂತಹ ದಾಖಲೆಗಳಿಗೆ ಮತ್ತೊಂದು ಸೇರ್ಪಡೆ ಆಗಿದ್ದು ‘ಋುಣಭಾರ’ ಪ್ರಮಾಣಪತ್ರ. ಇದರ ಹೆಸರೇ ಹೇಳುವಂತೆ ಋುಣಭಾರ ಎಂಬುದು ಇದೀಗ ಜನರಿಗೆ ಭಾರವಾಗಿ ಪರಿಣಮಿಸಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಈ ಪ್ರಮಾಣ ಪತ್ರ ಪಡೆಯಬೇಕು. ಅದನ್ನು ಪೂರೈಸಿದರೆ ಮಾತ್ರ ಇ-ಖಾತೆ ಅರ್ಜಿ ಸ್ವೀಕರಿಸುತ್ತೇವೆ ಎಂದು ಕಂಡೀಶನ್ ಹಾಕಲಾಗಿದೆ.
ಪ್ರಮಾಣ ಪತ್ರ ಪಡೆಯಲು ತಾಲೂಕು ಕಚೇರಿಗೆ ಎರಡೆರಡು ದಿನ ಅಲೆಯಬೇಕಾದ ಪರಿಸ್ಥಿತಿ ಇದೆ. ಒಂದು ವೇಳೆ ಪ್ರಮಾಣಪತ್ರ ದೊರೆತರೂ ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸ್ವೀಕಾರ ಆಗುತ್ತಿಲ್ಲ. ಒಂದು ಉತಾರ ತಮ್ಮ ಕೈ ಸೇರಲು ಕನಿಷ್ಠ 20 ದಿನ ಬೇಕಾಗುತ್ತದೆ. ಸ್ಥಳೀಯ ಸಂಸ್ಥೆಯ ಸದಸ್ಯರೊಬ್ಬರು, ನಮ್ಮ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎಂಬ ಚಿಂತೆಯಾಗಿದೆ ಎಂದು ಅಧಿಕಾರಿಗಳ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇ-ಆಸ್ತಿ ಉತಾರ ಅರ್ಜಿಗೆ ಋುಣಭಾರ ಪ್ರಮಾಣ ಪತ್ರ ಕಡ್ಡಾಯ ಎಂದು ಹೇಳುವ ಸಿಬ್ಬಂದಿ ಆ ಪ್ರಮಾಣ ಪತ್ರ ಪಡೆಯುವ ದಾರಿ ತೋರಿಸದೆ ಅದನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೀಡುತ್ತಾರೆ. ಮಾಹಿತಿಯನ್ನು ಕೇಳಿದರೆ ಅವರನ್ನೇ ಕೇಳಿ ಎಂದು ನುಣುಚಿಕೊಳ್ಳುತ್ತಿದ್ದಾರೆ. ಜತೆಗೆ ಸ್ಥಳೀಯ ಸಂಸ್ಥೆಗಳು ಇ- ಅಸ್ತಿ ಉತಾರಗೆ ಸಂಬಂಧಿಸಿದಂತೆ ಜನರ ಮನೆಗೆ ತೆರಳಿ ಜಾಗೃತಿ ಮೂಡಿಸಿ ಎಂದು ಸರಕಾರ ತಿಳಿಸಿದ್ದರೂ ಅಂತಹ ಯಾವುದೇ ಕೆಲಸ ಮಾಡುತ್ತಿಲ್ಲ. ಖಾತೆ ಉತಾರಕ್ಕಾಗಿ ತಿಂಗಳುಗಟ್ಟಲೆ ಕಚೇರಿಗೆ ಅಲೆದಾಟ ಮಾಡುವುದು ತಪ್ಪಿಲ್ಲಎಂದು ಜನರು ಸರಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.