
ರಾಮನಗರ: ಒಂದು ಕಾಲದಲ್ಲಿ ಬೆಂಗಳೂರು ಮೈಸೂರಿಗೆ ಸಂಪರ್ಕ ಕೊಂಡಿಯಾಗಿದ್ದ ಹೆದ್ದಾರಿಯ ಕೆಲವು ರಸ್ತೆಗಳು ಇಂದು ಪಾಳು ಬಿದ್ದಿವೆ. ಹಗಲಿನ ವೇಳೆಯು ಉಪಯೋಗಕ್ಕೆ ಬಾರದ ರಸ್ತೆಗಳಾಗಿರುವ ಕಾರಣ, ಅನೈತಿಕ ಚಟುವಟಿಕೆ ತಾಣವಾಗುತ್ತಿವೆ. ಹೊಸ ಹೆದ್ದಾರಿಯಲ್ಲಿ ಅಪಘಾತದ ಸಮಸ್ಯೆಯಾದರೆ, ಹಳೆಯ ಹೆದ್ದಾರಿ ಗುಂಡಿಗಳ ಸಮಸ್ಯೆ, ಇದರ ನಡುವೆ ಉಪಯೋಗಕ್ಕೆ ಬಾರದೆ ಹಳೆಯ ಹೆದ್ದಾರಿ ಒಂದಷ್ಟು ರಸ್ತೆಗಳು ಪಾಳು ಬೀಳುತ್ತಿರುವುದು ಮತ್ತೊಂದು ಸಮಸ್ಯೆಯನ್ನು ತಂದೊಡ್ಡಿದೆ.

j3tvkannada
ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ರಾಜಧಾನಿ ಮೈಸೂರು ನಡುವೆ ನೂತನ ಹೆದ್ದಾರಿ ನಿರ್ಮಾಣಕ್ಕೂ ಮುನ್ನ ಹಳೆಯ ಹೆದ್ದಾರಿ ಪ್ರಮುಖ ಸಂಚಾರ ಮಾರ್ಗವಾಗಿತ್ತು. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಇದೇ ರಸ್ತೆಯಲ್ಲಿ ವಾಹನಗಳು ಸಂಚಾರ ನಡೆಸುತ್ತಿದ್ದವು. ಆದರೆ ಪ್ರಸ್ತುತ ಇವು ಪಾಳು ಬಿದ್ದ ಸ್ಥಿತಿಯಲ್ಲಿವೆ. ಇಡೀ ರಸ್ತೆಯು ಕೋವಿಡ್ ಕಾಲಘಟ್ಟವನ್ನು ನೆನಪಿಸುತ್ತಿದ್ದು ಬಿಕೋ ಎನ್ನುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಬೆಂಗಳೂರು ಮೈಸೂರು ನೂತನ ಹೆದ್ದಾರಿ ನಿರ್ಮಾಣ ಮಾಡುವ ವೇಳೆ ಬೆಂಗಳೂರು ಹಾಗೂ ಮೈಸೂರು ನಡುವೆ ಇದ್ದ ಹಳೆಯ ರಸ್ತೆಗಳನ್ನು ಕೆಲವೊಂದು ಬಳಕೆ ಮಾಡಿಕೊಳ್ಳಲಾಗಿದೆ. ಇದೇ ಮಾರ್ಗವನ್ನು ಸರ್ವೀಸ್ ರಸ್ತೆಯಾಗಿಯು ಸಹ ಬಳಕೆ ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ಚನ್ನಪಟ್ಟಣದಿಂದ ಬಿಡದಿ ತನಕ ನೂತನ ಹೆದ್ದಾರಿಯ ಸರ್ವೀಸ್ ರಸ್ತೆಯ ಜತೆಗೆ, ಹಳೆಯ ಹೆದ್ದಾರಿಯನ್ನು ಬಳಕೆ ಮಾಡಿಕೊಂಡಿದೆ. ಆದರೆ ಇದರ ನಡುವೆ ಅತೀ ಹೆಚ್ಚು ತಿರುವು ಒಳಗೊಂಡಿದ್ದ ಹಳೆ ಹೆದ್ದಾರಿಯ ರಸ್ತೆ ಬದಲು ಮತ್ತೊಂದು ನೇರ ರಸ್ತೆ ನಿರ್ಮಿಸಲಾಗಿದೆ. ಹಾಗಾಗಿ ತಿರುವು ರಸ್ತೆಯು ಈ ಕಡೆ ಹೊಸ ಹೆದ್ದಾರಿಯೂ ಅಲ್ಲದೆ, ಆ ಕಡೆ ಹಳೆಯ ಹೆದ್ದಾರಿಯು ಅಲ್ಲದೆ ಸರ್ವಿಸ್ ರಸ್ತೆಯಾಗಿಯೂ ಬಳಕೆಯಾಗದೆ ಹಾಗೇ ಉಳಿದು ಕೊಂಡಿದೆ. ಇಂತಹ ರಸ್ತೆಯೂ ಇತ್ತೀಚೆಗೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ.

j3tvkananda
ವಿದ್ಯುತ್ ದೀಪಗಳು ಇಲ್ಲದ ಪರಿಣಾಮ ರಾತ್ರಿಯಾದರೆ ಸಾಕು ರಸ್ತೆಗಳು ಕುಡುಕರ ತಾಣವಾಗುತ್ತವೆ. ಬೆಂಗಳೂರು ಮೈಸೂರು ಹಳೆಯ ಹೆದ್ದಾರಿಯಲ್ಲಿ, ಸಮಸ್ಯೆಗಳ ಪಟ್ಟಿಯಲ್ಲಿ ಮತ್ತೊಂದು ಸಮಸ್ಯೆ ಸೇರ್ಪಡೆಗೊಂಡಿದೆ. ಇತ್ತೀಚಿಗೆ ಚನ್ನಪಟ್ಟಣ, ರಾಮನಗರ ಹಾಗೂ ಬಿಡದಿ ಮಾರ್ಗ ಮಧ್ಯ ರಸ್ತೆಯಲ್ಲಿ ಬ್ಯಾರಿಕೇಡ್ ಕಾಣಿಸಿಕೊಳ್ಳುತ್ತಿವೆ. ಇದು ವಾಹನ ಸವಾರರ ಮತ್ತೊಂದು ತಲೆ ನೋವಿಗೆ ಕಾರಣವಾಗಿದೆ. ಪೊಲೀಸ್ ಇಲಾಖೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಬೇಕು. ಇಲ್ಲವಾದರೆ ಸಾಕಷ್ಟು ಸಾವು ನೋವು ಉಂಟಾಗಲಿದೆ. ಇತ್ತೀಚೆಗೆ ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್ ಪ್ರತ್ಯೇಕ್ಷವಾಗುತ್ತಿರುವುದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.
ಹೇಳುವವರಿಲ್ಲ, ಕೇಳುವವರಿಲ್ಲ, ಊರು ಹೊರಗೆ ಈ ರಸ್ತೆ ಇರುವ ಕಾರಣ ಪೊಲೀಸರು ಹಾಗೂ ಗ್ರಾಮಸ್ಥರು ಸಂಚಾರ ನಡೆಸುವುದು ಕಡಿಮೆ. ಇದನ್ನೇ ಗುರಿಯಾಗಿಸಿಕೊಳ್ಳುತ್ತಿರುವ ಪುಂಡರು ಅನೈತಿಕ ಚುಟುವಟಿಕೆಗಳನ್ನು ನಡೆಸುತ್ತಿದ್ದಾರೆ. ತೀರ ನಿರ್ಜನ ಪ್ರದೇಶದಲ್ಲಿ ಮಧ್ಯಾಹ್ನದ ವೇಳೆಯಲ್ಲಿಯೇ ಮದ್ಯ ಸೇವನೆ ಕಂಡು ಬರುತ್ತಿದೆ. ಉಪಯೋಗವಾಗದೆ ಉಳಿದ ರಸ್ತೆಗಳು ಸಂಪೂರ್ಣ ನಿರ್ಜನ ಪ್ರದೇಶದಿಂದ ಕೂಡಿವೆ. ಜನರ ಓಡಾಟ ವಾಹನ ಸಂಚಾರ ನಿಷೇಧವಾಗಿರುವ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿದೆ. ಬೆಂಗಳೂರು ಮೈಸೂರು ಹಳೆಯ ಹೆದ್ದಾರಿಯ ಅನುಪಯುಕ್ತ ರಸ್ತೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಥವಾ ಪುಂಡರ ಹಾವಳಿ ನಿಯಂತ್ರಣ ಮಾಡಬೇಕು ಎಂದಿದ್ದಾರೆ ಸಿದ್ದರಾಜು, ರಾಮನಗರ.