
ಉಡುಪಿ(ಕುಂದಾಪುರ):ಸಂಸದನಾದ ಬಳಿಕ ಈವರೆಗೆ ರೈಲ್ವೇ ವಲಯಕ್ಕೆ 60ಲಕ್ಷ ರೂ.ವೆಚ್ಚದಲ್ಲಿ ಸಾರ್ವಜನಿಕ ಅನುಕೂಲಕ್ಕೆ ಕೊಡುಗೆ ಕೊಟ್ಟಂತಹ, ದೇಶದಲ್ಲಿ ಮಗದೊಂದು ಸಂಘಟನೆಯನ್ನು ನಾನು ಕಂಡಿಲ್ಲ. ಬಹುಶಃ ಭಾರತೀಯ ರೈಲ್ವೇ ಇತಿಹಾಸದಲ್ಲಿಇದೊಂದು ಅವಿಸ್ಮರಣೀಯ ದಿನ. ಮಂಗಳೂರು ಲಯನ್ಸ್ ಕ್ಲಬ್ನ ಈ ಕೊಡುಗೆ ಶಾಶ್ವತ ದಾಖಲೀಕರಣ ಆಗಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

j3tvkannada.in
ಶನಿವಾರ ಮಧ್ಯಾಹ್ನ ಇಲ್ಲಿಗೆ ಸಮೀಪದ ಮೂಡ್ಲಕಟ್ಟೆಯ ಕುಂದಾಪುರ ರೈಲ್ವೇ ನಿಲ್ದಾಣದಲ್ಲಿಅಂತಾರಾಷ್ಟ್ರೀಯ ಲಯನ್ಸ್ ಹಾಗೂ ಲಯನ್ಸ್ ಕ್ಲಬ್ ಮಂಗಳೂರು 60ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿ ಕೊಟ್ಟಿರುವ ಪ್ಲಾಟ್ಫಾರ್ಮ್ ನ ನವೀಕರಣ, ನೂತನ ಮೇಲ್ಚಾವಣಿ ಹಾಗೂ ಗಾರ್ಡನ್ ಸುಂದರೀಕರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ವಲಯ ಬೆಳವಣಿಗೆಯಲ್ಲಿ ಸಂಘಟನೆಯ ಪಾತ್ರವು ಇರುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಇಂತಹದೊಂದು ಅನುಪಮ ಕೊಡುಗೆ ಸಾಕಾರಗೊಳ್ಳುವಲ್ಲಿ ಕುಂದಾಪುರ ರೈಲ್ವೇ ಹಿತರಕ್ಷಣಾ ಸಮಿತಿಯ ಪಾತ್ರ ಹಿರಿದಾದುದು. ಕೊಡುಗೆ ಕೊಟ್ಟ ಎಲ್ಲರಿಗೂ ಕೇಂದ್ರ ಸರಕಾರ ಹಾಗೂ ಭಾರತೀಯ ರೈಲ್ವೇ ಪರವಾಗಿ ಅಭಿನಂದನೆ ಸಲ್ಲಿಸುವೆ ಎಂದರು.
ಪ್ರತಿದಿನ ಉಡುಪಿ, ದಕ್ಷಿಣ ಕನ್ನಡದಿಂದ 30ಕ್ಕೂ ಅಧಿಕ ಬಸ್ಗಳು ಮುಂಬಯಿಗೆ ಹೋಗುತ್ತಿವೆ. ಇಷ್ಟೊಂದು ಮಂದಿ ಮುಂಬಯಿ ಪ್ರಯಾಣಿಕರನ್ನು ಮನಗಂಡು ಅವರಿಗೆ ರೈಲ್ವೇಯ ಅನುಕೂಲ ಒದಗಿಸುವ ಭಾಗವಾಗಿ ಮಂಗಳೂರು-ಮುಂಬಯಿ ನಡುವೆ ಹೆಚ್ಚುವರಿ ವಂದೇಭಾರತ್ ರೈಲಿನ ಬೇಡಿಕೆ ಇರಿಸಿದ್ದೇವೆ. ರೈಲ್ವೇ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಲ್ಲಿನ ಸಮಿತಿಯವರ ಬೇಡಿಕೆಯಂತೆ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನ ನಿಲುಗಡೆ ನೀಡಲಾಗಿದೆ. ಪ್ರಸ್ತುತ ದಿನದಲ್ಲಿಅದ್ಭುತವಾದ ಸ್ಪಂದನೆ ಸಿಗುತ್ತಿದೆ. ಒಂದೇ ದಿನ 150ಕ್ಕೂ ಹೆಚ್ಚು ಪ್ರಯಾಣಿಕರು ಇಲ್ಲಿಇಳಿಯುತ್ತಿರುವ ವಿಚಾರ ತಿಳಿದು ಬಂದಿದೆ. ಅಲ್ಲದೆ ಪಂಚಗಂಗಾ ರೈಲಿಗೆ 5 ಬೋಗಿಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂದರು.
ಕೊಂಕಣ ರೈಲ್ವೇಯಲ್ಲಿನ ಸಮಗ್ರ ಅಭಿವೃದ್ಧಿಗೆ ಭಾರತೀಯ ರೈಲ್ವೇಯೊಂದಿಗೆ ವಿಲೀನವಾಗುವುದು ಅಗತ್ಯ. ಈಗಾಗಲೆ ಕೇರಳ, ಗೋವಾ ಸಹಮತ ಸೂಚಿಸಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕವು ಒಪ್ಪಿಗೆ ನೀಡಿದ್ದು ಕೆಲವೊಂದು ತಾಂತ್ರಿಕ ತೊಂದರೆ ಪರಿಹರಿಸಲು ಬಾಕಿಯಿದೆ. ಕರ್ನಾಟಕದ ಸಚಿವ ಎಂ.ಬಿ.ಪಾಟೀಲ್ ವಿಲೀನ ಪ್ರಕ್ರಿಯೆಗೆ ಬೇಕಾದಂತಹ ಕಾರ್ಯ ನಡೆಸಿಕೊಡುವ ಭರವಸೆ ಕೂಡ ನೀಡಿದ್ದಾರೆ ಎಂದು ಹೇಳಿದರು.
ಕುಂದಾಪುರ ಶಾಸಕ ಕಿರಣ್ಕುಮಾರ ಕೊಡ್ಗಿ ಶುಭ ಹಾರೈಸಿದರು. ಮಂಗಳೂರು ಲಯನ್ಸ್ ಕ್ಲಬ್ನ ಕೊಡುಗೆಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಲಯನ್ಸ್ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್, ಲಯನ್ಸ್ ಜಿಲ್ಲಾ ಪ್ರಥಮ ಉಪ ಗವರ್ನರ್ ಸ್ವಪ್ನ ಸುರೇಶ್, ದ್ವಿತೀಯ ಉಪ ಗವರ್ನರ್ ರಾಜೀವ ಕೋಟ್ಯಾನ್, ನಿಯೋಜಿತ ಲಯನ್ಸ್ ಉಪ ಗವರ್ನರ್ ಹರಿಪ್ರಸಾದ್ ರೈ, ಲಯನ್ಸ್ ಜಿಲ್ಲಾ ಅಂಬಾಸಿಡರ್ ಅರುಣ್ ಕುಮಾರ ಹೆಗ್ಡೆ, ರೀಜನ್ ಚೇರೆಮೆನ್ ಸೋಮನಾಥ ಹೆಗ್ಡೆ, ಮಂಗಳೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಮ್ಯಾಥ್ಯೂ ಜೋಸೆಫ್, ಕೋಶಾಧಿಕಾರಿ ಪುನೀತ್ ಶೆಟ್ಟಿ, ಕುಂದಾಪುರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಪಮ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಗ್ರೆಟ್ಟಾ ಡಿಕೋಸ್ಟ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.