
ಮೈಸೂರು:ಈ ಬಾರಿ ಮುಂಚಿತವಾಗಿಯೇ ಮುಂಗಾರು ಮಳೆ ಸುರಿದಿರುವ ಕಾರಣ ಅರಣ್ಯ ಇಲಾಖೆ 3.8 ಲಕ್ಷ ಗಿಡ ನೆಟ್ಟು ಜಿಲ್ಲಾದ್ಯಂತ ಹಸಿರಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ. ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಕಳೆದ ಬಾರಿಗಿಂತ ಹೆಚ್ಚು ಪ್ರಮಾಣದಲ್ಲಿ ಗಿಡಗಳ ವಿತರಣೆ ನಡೆದಿದೆ. ರೈತರು, ಸಾರ್ವಜನಿಕರು, ಸಂಘ ಸಂಸ್ಥೆಗಳು ಮುಗಿ ಬಿದ್ದು ಸಸಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇಲಾಖೆಯಿಂದಲೂ ದಟ್ಟಣೆ ಕಡಿಮೆ ಇರುವ ಅರಣ್ಯದೊಳಗೆ ಹಾಗೂ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಲು ಭರದ ಸಿದ್ಧತೆ ನಡೆದಿದೆ. ರೈತರು ಹೊಲಗಳು ಮತ್ತು ಬದುಗಳಲ್ಲಿ ಗಿಡಗಳನ್ನು ಬೆಳೆಸಲು ಹಾಗೂ ಸಂಘ, ಸಂಸ್ಥೆಗಳು ಗಿಡಗಳನ್ನು ನೆಡಲು ಉತ್ಸಾಹ ತೋರುತ್ತಿವೆ. ಒಟ್ಟಾರೆ ಈ ಬಾರಿ ಜಿಲ್ಲಾದ್ಯಂತ ಅರಣ್ಯ ಇಲಾಖೆ 3.8 ಲಕ್ಷ ಗಿಡಗಳನ್ನು ಅರಣ್ಯೀಕರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಕಳೆದ ಬಾರಿ ಒಟ್ಟು 3.65 ಲಕ್ಷ ಗಿಡಗಳನ್ನು ಅರಣ್ಯೀಕರಣಕ್ಕೆ ವಿತರಿಸಲಾಗಿತ್ತು.

j3tvkannada
ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಆರು ವಲಯಗಳ ನರ್ಸರಿಗಳಲ್ಲಿ ತೇಗ, ಬೆಟ್ಟದ ನೆಲ್ಲಿ, ಬೇವು, ಹಲಸು, ಹೊಂಗೆ, ಮಹಾಘನಿ, ನೇರಳೆ, ರಕ್ತಚಂದನ, ಶ್ರೀಗಂಧ, ಸಿಲ್ವರ್ ಮುಂತಾದ ವಿವಿಧ ಜಾತಿಯ ಒಟ್ಟು 2.8 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. 69 ಅಳತೆ ಚೀಲದ ಗಿಡಕ್ಕೆ 3 ರೂ, 812 ಅಳತೆ ಚೀಲದ ಗಿಡಕ್ಕೆ 6 ರೂ, 10*16 ಅಳತೆಯ ಚೀಲಕ್ಕೆ 75 ರೂ ನಂತೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಈಗಾಗಲೆ ರೈತರು, ಸಂಘ, ಸಂಸ್ಥೆಗಳವರು ಗಿಡಗಳನ್ನು ಪಡೆದು ಕೊಳ್ಳುತ್ತಿದ್ದಾರೆ. ಸ್ಥಳೀಯ ಜಾತಿಯ ಗಿಡಗಳನ್ನು ಬೆಳೆಸಲು ಆದ್ಯತೆ ನೀಡಲಾಗಿದೆ. ಜಿಲ್ಲೆಯ ನಾಗವಾಲ ಸಸ್ಯ ಕ್ಷೇತ್ರ, ಕುಕ್ಕರಹಳ್ಳಿ ಸಸ್ಯಕ್ಷೇತ್ರ, ತಿ.ನರಸೀಪುರದ ನೀಲಸೋಗೆ ಸಸ್ಯ ಕ್ಷೇತ್ರ, ನಂಜನಗೂಡಿನ ಹುಲ್ಲಹಳ್ಳಿಯ ಬಸವೇಶ್ವರ ಸಸ್ಯ ಕ್ಷೇತ್ರ, ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಮುಂಭಾಗದ ಬೀಚನಹಳ್ಳಿ ಸಸ್ಯ ಕ್ಷೇತ್ರದಲ್ಲಿ ಪಡೆದುಕೊಳ್ಳಬಹುದು.

j3tvkannada
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರು ರಿಯಾಯಿತಿ ದರದಲ್ಲಿ ಸಸಿಗಳನ್ನು ಪಡೆದು ತಮ್ಮ ಜಮೀನಿನಲ್ಲಿ ನೆಡುವ ಸಸಿಗಳಿಗೆ ಪ್ರತಿ ವರ್ಷ ಮೌಲ್ಯಮಾಪನ ಮಾಡಿ, ಬದುಕುಳಿದ ಸಸಿಗಳಿಗೆ ಪೋಷಣೆಗಾಗಿ ಮೊದಲನೇ ವರ್ಷ 35 ರೂ, ಎರಡನೇ ವರ್ಷ 40 ರೂ, ಮೂರನೇ ವರ್ಷ 50 ರೂ. ನಂತೆ ಮೂರು ವರ್ಷಗಳಿಗೆ ಒಂದು ಗಿಡಕ್ಕೆ ಒಟ್ಟು 125 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಯೋಜನೆಯಡಿ ಇಲಾಖೆಯಿಂದ ಈಗಾಗಲೇ 79 ಲಕ್ಷ ರೂ ಪ್ರೋತ್ಸಾಹ ಧನ ವಿತರಣೆ ಮಾಡಿದೆ. ಕಳೆದ ಸಾಲಿನಲ್ಲಿ 720 ರೈತರು ನೋಂದಣಿ ಮಾಡಿಕೊಂಡು 1.10 ಲಕ್ಷ ಸಸಿಗಳನ್ನು ಪಡೆದುಕೊಂಡಿದ್ದಾರೆ. ಈ ಬಾರಿಯೂ ನೋಂದಣಿ ಕಾರ್ಯ ಆರಂಭವಾಗಿದೆ. ಈ ಬಾರಿ ಮುಂಚಿತವಾಗಿ ಮುಂಗಾರು ಆರಂಭವಾಗಿರುವ ಕಾರಣ ಜನರು ಉತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಸಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇಲಾಖೆಯಿಂದಲೂ ಗಿಡಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.